ಯಡಿಯೂರಪ್ಪ ಲೆಕ್ಕಾಚಾರ ಎಂದೂ ತಪ್ಪಾಗಿಲ್ಲ ಏಕೆ?
ಬೆಂಗಳೂರು, ಮೇ 14 : 'ನಾನು ನಿಮಗೆ ಬರೆದು ಕೊಡುವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾವು 125 ರಿಂದ 130 ಸ್ಥಾನಗಳಲ್ಲಿ ಜಯಗಳಿಸುತ್ತೇವೆ' ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಖಚಿತ ನುಡಿ ಇದು.
'ನಾನು ಹಲವು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿದ್ದೇನೆ. ನಾನು ಬರೆದು ಕೊಡುವೆ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ. ನೀವು ಫಲಿತಾಂಶ ಬಂದ ಮೇಲೆ ಬೇಕಾದರೆ ಚೆಕ್ ಮಾಡಿಕೊಳ್ಳಿ' ಎಂದು ಮಾಧ್ಯಮದವರ ಮುಂದೆ ವಿಶ್ವಾಸದಿಂದ ಹೇಳಿದರು.

'ಬಿಜೆಪಿ 120-130 ಸ್ಥಾನದಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ 70ಕ್ಕಿಂತ ಹೆಚ್ಚಿನ ಸ್ಥಾನ ಪಡೆಯುವುದಿಲ್ಲ. ಜೆಡಿಎಸ್ 24-25 ಸ್ಥಾನ ಪಡೆಯಲಿದೆ. ನನ್ನ ಲೆಕ್ಕಾಚಾರ ಎಂದೂ ತಪ್ಪಾಗಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಲೆಕ್ಕಾಚಾರ ಎಂದೂ ತಪ್ಪಾಗಿಲ್ಲ' ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
'ಬಿಜೆಪಿ ಪರವಾದ ಅಲೆ ಕರ್ನಾಟಕದಲ್ಲಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲೂ ಅತಂತ್ರ ಫಲಿತಾಂಶ ಬರುವುದಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಲಿದೆ' ಎಂದು ಯಡಿಯೂರಪ್ಪ ತಿಳಿಸಿದರು.
'ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಷ್ಟ್ರೀಯ ನಾಯಕರು ಎಲ್ಲರೂ ಪಕ್ಷ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಎಲ್ಲಾ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಮೇ 17ರಂದು ನಾವು ಸರ್ಕಾರ ರಚನೆ ಮಾಡುತ್ತೇವೆ' ಎಂದರು.
ಕರ್ನಾಟಕ ವಿಧಾನಸಭೆಯ 222 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮೇ 15ರ ಮಂಗಳವಾರ ಪ್ರಕಟವಾಗಲಿದೆ. ಅದಕ್ಕೂ ಮೊದಲು ಯಡಿಯೂರಪ್ಪ ಅವರು ಖಚಿತವಾಗಿ ಹೇಳಿರುವ ಮಾತುಗಳಿವು. ಜನರು ಯಾರಿಗೆ ಮನ್ನಣೆ ನೀಡಿದ್ದಾರೆ? ಎಂಬುದು ಮಂಗಳವಾರ ತಿಳಿಯಲಿದೆ












Click it and Unblock the Notifications