ದೆಹಲಿಯಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆ ಹಗ್ಗ ಜಗ್ಗಾಟ!
ಬೆಂಗಳೂರು, ಏಪ್ರಿಲ್ 15 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಜೆಡಿಎಸ್ನಿಂದ ಪಕ್ಷ ಸೇರಿರುವ 7 ಏಳು ನಾಯಕರಿಗೆ ಟಿಕೆಟ್ ನೀಡಬೇಕೆ?, ಬೇಡವೇ? ಎಂದು ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷದ ಮೂಲಗಳ ಮಾಹಿತಿ ಪ್ರಕಾರ 190 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಆದರೆ, ಕಳಂಕಿತರ ಆರೋಪ ಹೊತ್ತವರಿಗೆ ಟಿಕೆಟ್ ನೀಡಬೇಕೆ?, ಗೆಲ್ಲುವ ಸಾಧ್ಯತೆ ಇಲ್ಲದೆ ಹಿರಿಯ ನಾಯಕರಿಗೆ ಟಿಕೆಟ್ ಕೊಡಬೇಕೆ? ಎಂಬ ಬಗ್ಗೆ ಚರ್ಚೆ ಸಾಗಿದ್ದು, ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ.
ಕಾಂಗ್ರೆಸ್ ನಾಯಕರ ನಡುವೆ ತಿಕ್ಕಾಟ, ಅಂತಿಮಗೊಳ್ಳದ ಅಭ್ಯರ್ಥಿಗಳ ಪಟ್ಟಿ
ಟಿಕೆಟ್ ಹಂಚಿಕೆ ಬಗ್ಗೆ ಭಾನುವಾರವೂ ಸರಣಿ ಸಭೆ ನಡೆಯುವ ನಿರೀಕ್ಷೆ ಇದೆ. ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆದ್ದರಿಂದ ಪಕ್ಷ ಇಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಹಿರಿಯ ನಾಯಕರ ನಡುವಿನ ಜಟಾಪಟಿಯೇ ಕಾರಣ ಎಂದು ತಿಳಿದುಬಂದಿದೆ.
ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಪ್ರಚಾರದ ಕಡೆ ಗಮನವಹಿಸಿ, ದೆಹಲಿಯಿಂದ ಕರ್ನಾಟಕಕ್ಕೆ ವಾಪಸ್ ಆಗಿ ಎಂದು ಹಲವು ನಾಯಕರಿಗೆ ಸೂಚನೆ ನೀಡಿದೆ.
ಟಿಕೆಟ್ ರಾಜಕೀಯ: ಕೆಪಿಸಿಸಿ ಉಪಾಧ್ಯಕ್ಷ ವಿಆರ್ ಸುದರ್ಶನ್ ರಾಜೀನಾಮೆ?
ಭಾನುವಾರ ರಹಸ್ಯ ಸ್ಥಳದಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ಇಂದು ಸಂಜೆಯ ವೇಳೆಗೆ ಮೊದಲ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಿ ಬಿಡುಗಡೆಗೆ ಮುನ್ನವೇ ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ.
ಶನಿವಾರ ರಾಹುಲ್ ಗಾಂಧಿ ಅವರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 'ಭಾನುವಾರ ಎರಡು ಸುತ್ತಿನ ಸಭೆ ನಡೆಸುತ್ತೇವೆ. ಎಲ್ಲಾ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುತ್ತದೆ' ಎಂದು ಹೇಳಿದ್ದಾರೆ.