ಓಟು ಹಾಕುವ ಮುನ್ನ ದೇವರಿಗೆ ಮೊರೆಹೋದ ನಾಯಕರು
ಬೆಂಗಳೂರು, ಮೇ 12: ಕರ್ನಾಟಕ ರಾಜ್ಯ ಪ್ರಜಾಪ್ರಭುತ್ವ ಎಂಬ ದೊಡ್ಡ ಹಬ್ಬದಲ್ಲಿ ಸಂಭ್ರಮಿಸುತ್ತಿದೆ. ಮೊದಲ ಬಾರಿ ಓಟು ಹಾಕುವ ಖುಷಿ ಕೆಲವರಿಗೆ. ಮಳೆ ಮುಗಿದು ಸೂರ್ಯ ಕಣ್ಣು ಬಿಡುವುದಕ್ಕೆ ಸಂಕೋಚ ಪಡುತ್ತಿದ್ದರೂ ಸಂವಿಧಾನ ನೀಡಿದ ಅತ್ಯಮೂಲ್ಯ ಹಕ್ಕನ್ನು ಬಳಸಿಕೊಳ್ಳಲು ಸಾಲು ಸಾಲಾಗಿ ಮತಗಟ್ಟೆಯ ಮುಂದೆ ನಿಂತ ಜನರು.
ರಾಜ್ಯದ ಭವಿಷ್ಯವನ್ನು ನಿರ್ಧರಿಸಲಿರುವ ಮತದಾನಕ್ಕೆ ಇಂದು ಕರ್ನಾಟಕ ಸಾಕ್ಷಿಯಾಗಿದೆ. ಮತದಾರರು ಸಮರ್ಥ ಅಭ್ಯರ್ಥಿಯನ್ನು ಆರಿಸಲು ಉತ್ಸುಕರಾಗಿದ್ದರೆ, ರಾಜಕೀಯ ನಾಯಕರು ಮಾತ್ರ ಮತದಾನಕ್ಕೂ ಮುನ್ನ ದೇವರಿಗೆ ಮೊರೆಹೋಗುವುದು ಕಂಡುಬರುತ್ತಿದೆ.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
'ದೇವರೇ, ನಮಗೇ ಗೆಲುವು ಕರುಣಿಸು' ಎಂದು ದೇವರಿಗೆ ದುಂಬಾಲು ಬಿದ್ದಿರುವ ಯಾವ್ಯಾವ ರಾಜಕಾರಣಿಗಳಿಗೆ ದೇವರು ಆಶೀರ್ವದಿಸುತ್ತಾನೆ ಎಂಬುದು ಮೇ 15 ರ ಫಲಿತಾಂಶದ ದಿನ ತಿಳಿಯಲಿದೆ.
|
ಶಿಕಾರಿಪುರದಲ್ಲಿ ಬಿ ಎಸ್ ಯಡಿಯೂರಪ್ಪ ಪೂಜೆ
ಶಿವಮೊಗ್ಗದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತದಾನ ಮಾಡುವುದಕ್ಕೂ ಮುನ್ನ ದೇವಾಲಯವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅದಕ್ಕೂ ಮುನ್ನ ತಮ್ಮ ನಿವಾಸದಲ್ಲೂ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸಮೇತರಾಗಿ ಮತದಾನದಲ್ಲಿ ಪಾಲ್ಗೊಂಡರು. ಯಡಿಯೂರಪ್ಪ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಹೌದು.
|
ಆದಿಚುಂಚನಗಿರಿಯಲ್ಲಿ ಎಚ್ ಡಿ ಕುಮಾರಸ್ವಾಮಿ
ಮತದಾನಕ್ಕೂ ಮುನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಲ್ಲಿನ ಕಾಲಭೈರವೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಅವರು ಬಿಡದಿಯಲ್ಲಿ ಮತದಾನ ಮಾಡಿದ್ದು, ಚನ್ನಪಟ್ಟಣ ಕ್ಷೇತ್ರದಿಂದಲೂ ಅವರು ಸ್ಪರ್ಧಿಸಿದ್ದಾರೆ. ಕುಮಾರಸ್ವಾಮಿಯವರು ಜೆಡಿಎಸ್ ನ ಮುಖ್ಯಮಂತ್ರಿ ಅಭ್ಯರ್ಥಿಯೂ ಹೌದು.
|
ಗೋಪೂಜೆ ಮಾಡಿದ ಶ್ರೀರಾಮುಲು
ಮತದಾನಕ್ಕೂ ಮುನ್ನ ಬಿಜೆಪಿ ಮುಖಂಡ ಶ್ರೀರಾಮುಲು ಅವರು ಗೋ ಪೂಜೆ ಮಾಡಿದ್ದು ವಿಶೇಷ. ಬಾಗಲಕೋಟೆಯ ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಹೌದು.

ಗೆಲುವು ನಮ್ಮದೇ..!
ಮೇ 15 ರಂದು ಹೊರಬೀಳಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದತ್ತ ಈಗ ಎಲ್ಲರ ಕಣ್ಣೂ ನೆಟ್ಟಿದೆ. ತಮ್ಮದೇ ಗೆಲುವುದು ಎಂಬುದು ಅಲ್ಲ ಅಭ್ಯರ್ಥಿಗಳ ವಿಶ್ವಾಸದ ಮಾತು. ದೇವರ ಆಶೀರ್ವಾದ ಪಡೆದು ಹೊರಬರುತ್ತಿದ್ದಂತೆಯೇ ಎಲ್ಲ ಅಭ್ಯರ್ಥಿಗಳೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ದೇವರು ಯಾರಿಗೆ ಆಶೀರ್ವದಿಸಿದ್ದಾನೆ ಎಂಬುದನ್ನು ತಿಳಿಯಲು ಮೇ 15, ಮಂಗಳವಾರದವರೆಗೆ ಕಾಯಬೇಕಿದೆ.












Click it and Unblock the Notifications