75 ವರ್ಷ ವಯಸ್ಸು ಯಡಿಯೂರಪ್ಪ ಪಾಲಿಗೆ ಕೇವಲ ನಂಬರ್!
Recommended Video
ಬೆಂಗಳೂರು, ಏಪ್ರಿಲ್ 20 : ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸು ಕೇವಲ ನಂಬರ್.....!. ಹೌದು, ಬಿಜೆಪಿ ಪಕ್ಷದಲ್ಲಿ ಅಲಿಖಿತ ನಿಯಮವೊಂದಿದೆ. ಆದರೆ, ಯಡಿಯೂರಪ್ಪ ಅವರ ವಿಚಾರದಲ್ಲಿ ನಿಯಮವನ್ನು ಪಕ್ಕಕ್ಕೆ ಸರಿಸಿ, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
75 ವರ್ಷ ದಾಟಿದವರು ಸಚಿವ, ಮುಖ್ಯಮಂತ್ರಿಯಂತಹ ಹುದ್ದೆಗಳಲ್ಲಿ ಇರಬಾರದು ಎಂಬ ಅಲಿಖಿತ ನಿಯಮ ಬಿಜೆಪಿಯಲ್ಲಿದೆ. ಫೆಬ್ರವರಿ 2018ರಂದು ಯಡಿಯೂರಪ್ಪ ಅವರು 75ನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ 7 ಕೋಟಿ ಆಸ್ತಿ ಒಡೆಯ
ಯಡಿಯೂರಪ್ಪ ಅವರನ್ನು 2018ರ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಬಳಿಕ 75ನೇ ವರ್ಷದ ಅಲಿಖಿತ ನಿಯಮದ ಬಗ್ಗೆ ಪುನಃ ಚರ್ಚೆಗಳು ಆರಂಭವಾಗಿವೆ. ಆದರೆ, ಈ ತರಹದ ನಿಯಮಗಳು ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.
ಕರ್ನಾಟಕದಲ್ಲಿ ಯಡಿಯೂರಪ್ಪನವರದೇ ಆಟ, ಬಿಜೆಪಿ ಹೈಕಮಾಂಡ್ ನಿಮಿತ್ತ!
ಬಿ.ಎಸ್.ಯಡಿಯೂರಪ್ಪ ಅವರಿಗೆ 75 ವರ್ಷವಾದಾಗ ದಾವಣಗೆರೆಯಲ್ಲಿ ಬೃಹತ್ ರೈತ ಸಮಾವೇಶ ನಡೆಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರು ಸೇರಿಯೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ.
ಪ್ರಚಾರದ ಸಮಯದಲ್ಲೇ ಜವಾಬ್ದಾರಿ
ಬಿಜೆಪಿ ಕರ್ನಾಟಕದ ವಿಧಾನಸಭೆ ಚುನಾವಣೆ ತಯಾರಿ ಆರಂಭಿಸಿದ ತಕ್ಷಣವೇ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರು ಎಂದು ಘೋಷಣೆ ಮಾಡಿತು. 2013ರಲ್ಲಿ ಯಡಿಯೂರಪ್ಪ ಪಕ್ಷದಿಂದ ಹೊರಹೋಗಿ ಕೆಜೆಪಿ ಕಟ್ಟಿದಾಗ ಆದ ಹಿನ್ನಡೆ ಈ ಬಾರಿ ಆಗಬಾರದು ಎಂದು ಪಕ್ಷ ಬಯಸಿತ್ತು.
2013ರಲ್ಲಿ ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಹೋದರು. ಆಗ ಹಲವು ನಾಯಕರು ಅವರ ವಿರುದ್ಧ ಅಸಮಾಧಾನಗೊಂಡಿದ್ದರು. ಈಗ ಪುನಃ ಯಡಿಯೂರಪ್ಪ ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಇಂದಿಗೂ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ.
ಯಡಿಯೂರಪ್ಪ ಅವರಿಗೆ ನಿಯಮ ಬದಲಾವಣೆ
ಬಿ.ಎಸ್.ಯಡಿಯೂರಪ್ಪ ಅವರ ಪಾಲಿಗೆ ವಯಸ್ಸು ಕೇವಲ ನಂಬರ್. ಅವರನ್ನು 2018ರ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದಕ್ಕೆ ಹಲವು ಕಾರಣಗಳು ಇವೆ. 75 ವರ್ಷವಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಹಿಂದೆ ಹಲವು ಲೆಕ್ಕಾಚಾರಗಳು ಇವೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ ಎಂದು ಯಡಿಯೂರಪ್ಪ ಅವರು ಹಲವು ಸಂದರ್ಭದಲ್ಲಿ ಹೇಳಿದ್ದಾರೆ. ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಸಹ 75 ವರ್ಷ ವಯಸ್ಸಿನ ಯಾವುದೇ ನಿಯಮ ಪಕ್ಷದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಪ್ರಬಲ ನಾಯಕ ಬಿ.ಎಸ್.ಯಡಿಯೂರಪ್ಪ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿಯ ಪ್ರಮುಖ ನಾಯಕ. ಎಲ್ಲಾ ಸಮುದಾಯಗಳ ರೇಖೆಗಳನ್ನು ದಾಟಿ ಅಭಿಮಾನಿಗಳನ್ನು ಪಡೆದಿರುವ ನಾಯಕ ಯಡಿಯೂರಪ್ಪ.
ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಂತೆ ವರ್ಚಸ್ಸು, ಜನಪ್ರಿಯತೆ ಹೊಂದಿರುವ ನಾಯಕರು ಮತ್ತೊಬ್ಬರಿಲ್ಲ. ಆದ್ದರಿಂದ, 75 ವರ್ಷವಾದರೂ ಅವರನ್ನು ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ಲಿಂಗಾಯತ ಸಮುದಾಯದ ಮತ
ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಭಾರೀ ಪ್ರಭಾವ ಹೊಂದಿದೆ. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕರು. ಚುನಾವಣೆಯಲ್ಲಿ ಮತಗಳನ್ನು ತರುವ ಶಕ್ತಿ ಹೊಂದಿದ್ದಾರೆ.
2013ರಲ್ಲಿ ಲಿಂಗಾಯತ ಸಮುದಾಯದ ಮತಗಳನ್ನು ಒಡೆಯುವಲ್ಲಿ ಯಡಿಯೂರಪ್ಪ ಅವರು ಸಫಲರಾಗಿದ್ದರು. ಆದ್ದರಿಂದ, ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿತ್ತು. ಈ ತಪ್ಪು ಮತ್ತೆ ಆಗಬಾರದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಯಡಿಯೂರಪ್ಪ ಬಿಟ್ಟು ಬೇರೆ ಯಾರು?
ಸರಿ ಯಡಿಯೂರಪ್ಪ ಬೇಡ ಬೇರೆ ಯಾವ ನಾಯಕರು ಪಕ್ಷದಲ್ಲಿದ್ದಾರೆ? ಎಂಬುದು ಪಕ್ಷದ ಮುಂದಿರುವ ಪ್ರಶ್ನೆ. ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿಯಾದರು. ಆದರೆ, ರಾಜ್ಯಮಟ್ಟದಲ್ಲಿ ಅವರು ಜನರನ್ನು ತಲುಪಲು ವಿಫಲವಾಗಿದ್ದಾರೆ.
ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆಯಂತಹ ನಾಯಕರು ಇದ್ದಾರೆ. ಆದರೆ, ರಾಜ್ಯಮಟ್ಟದಲ್ಲಿ ಯಾರು ಪ್ರಭಾವವನ್ನು ಹೊಂದಿಲ್ಲ. ಆದ್ದರಿಂದ ಯಡಿಯೂರಪ್ಪ ಅವರನ್ನು ನಾಯಕರನ್ನಾಗಿ ಒಪ್ಪಿಕೊಳ್ಳಲಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.