ಎರಡು ಕಡೆ ಸ್ಪರ್ಧಿಸಬೇಕೆಂದು ಡಿಕೆಶಿ ಮೇಲೆ ಒತ್ತಡ: ಸಿದ್ದುಗೆ ಗುದ್ದು ಕೊಡಲು ಮದ್ದು ಹುಡುಕುತ್ತಿರುವ 'ಬಂಡೆ' ಹಿಂಬಾಲಕರು
ಬೆಂಗಳೂರು, ಮಾರ್ಚ್ 30: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ದಿನಾಂಕಗಳು ಪ್ರಕಟವಾಗುತ್ತಿದಂತೆ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ. ಕಾಂಗ್ರೆಸ್ ( Congress ) ಹಾಗೂ ಜೆಡಿಎಸ್ ( JDS ) ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಡಳಿತಾರೂಢ ಬಿಜೆಪಿ ( BJP ) ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಿದ್ದತೆ ನಡೆಸಿದೆ.
ಈ ಎಲ್ಲ ಬೆಳವಣಿಗಗಳ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ಪರ್ಧೆಯು ರಾಜ್ಯದ ಜನರ ಗಮನ ಸೆಳೆದಿದೆ. ಈಗಾಗಲೇ ವರುಣಾ ಕ್ಷೇತ್ರದ ಟಿಕೆಟ್ ಸಿದ್ದರಾಮಯ್ಯನವರಿಗೆ ಸಿಕ್ಕಿದೆ. ಇಷ್ಟಕ್ಕೆ ಸಮಾಧಾನವಾಗದ ಮಾಜಿ ಮುಖ್ಯಮಂತ್ರಿ ಕೋಲಾರದಿಂದಲೂ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಕೋಲಾರ ಕ್ಷೇತ್ರ ಅಷ್ಟೊಂದು ಸೇಫ್ ಅಲ್ಲವೆಂದು ಪಕ್ಷದ ಆಂತರಿಕ ಸಮೀಕ್ಷೆಗಳು ಹೇಳಿವೆ. ಅದರಿಂದ ಆತಂಕಗೊಂಡಿದ್ದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನು ವರುಣಾ ಕ್ಷೇತ್ರದಿಂದಲೇ ಕಣಕ್ಕಿಳಿಯುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ವರುಣಾದಿಂದಲೇ ಸಿದ್ದರಾಮಯ್ಯನವರಿಗೆ ಟಿಕೆಟ್ ಘೋಷಿಸಿದೆ.
ವರುಣಾದಿಂದ ಟಿಕೆಟ್ ಸಿಕ್ಕ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಸಿದ್ದು ಬೆಂಬಲಿಗರೂ, ಹಿತೈಸಿಗಳು, ಕಾಂಗ್ರೆಸ್ ಮುಖಂಡರು ಕೋಲಾರದಲ್ಲಿ ಸ್ಪರ್ಧಿಸಲೇಬೇಕೆಂದು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಕೋಲಾರದಿಂದಲೂ ಸ್ಪರ್ಧಿಸುವುದಾಗಿ ಸಿದ್ದು ತಿಳಿಸಿದ್ದಾರೆ.

ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಅವರೂ ಸಹ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇನ್ನೂ ಕೆಲ ಜೆಡಿಎಸ್ ಮುಖಂಡರೊಂದಿಗೆ ಸಿದ್ದು ಸಂಪರ್ಕದಲ್ಲಿದ್ದಾರೆಂಬ ಮಾತುಗಳೂ ಕೇಳಿಬಂದಿವೆ. ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆಯೂ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಎರಡು ಕಡೆ ಸ್ಪರ್ಧಿಸಲು ಡಿಕೆಶಿ ಮೇಲೆ ಒತ್ತಡ
ಅತ್ತ ಸಿದ್ದರಾಮಯ್ಯನವರು ಎರಡು ಕಡೆ ಸ್ಪರ್ಧಿಸಲು ಸಿದ್ದರಾಗುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲಿಗರು ಹಾಗೂ ಹಿಂಬಾಲಕರು ಅಲರ್ಟ್ ಆಗಿದ್ದಾರೆ. ಒಂದು ವೇಳೆ, ಸಿದ್ದರಾಮಯ್ಯನವರು ಎರಡು ಕ್ಷೇತ್ರದಿಂದ ಸ್ಪರ್ಧಿಸಿದರೆ, ಡಿಕೆಶಿಯು ಎರಡು ಕ್ಷೇತ್ರದಿಂದ ಕಣಕ್ಕಿಳಿಯಲಿ ಎಂಬುದು ಬೆಂಬಲಿಗರ ಒತ್ತಾಯವಾಗಿದೆ.

ಈ ಇಬ್ಬರು ನಾಯಕರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಂಘರ್ಷ ನಡೆಸುತ್ತಿರುವ ವಿಚಾರ ಹಲವು ತಿಂಗಳಿಂದಲೂ ಓಡಾಡುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಕ್ಷೇತ್ರದಿಂದ ಡಿಕೆಶಿ ಸ್ಪರ್ಧಿಸಿ ಗೆದ್ದರೆ ಸಿದ್ದರಾಮಯ್ಯನವರಷ್ಟೇ ಬಲಿಷ್ಠರಾಗಿ ಹೊರಹೊಮ್ಮಬಹುದು ಎಂಬುದು ಬೆಂಬಲಿಗರ ವಾದವಾಗಿದೆ.
ಮಂಡ್ಯದಲ್ಲಿ ಸ್ಪರ್ಧಿಸುವಂತೆ ಒತ್ತಾಯ
ಈಗಾಗಲೇ ಕನಕಪುರದಿಂದ ಕಣಕ್ಕಿಳಿದಿರುವ ಡಿಕೆ ಶಿವಕುಮಾರ್ ಅವರನ್ನು ಮಂಡ್ಯದಲ್ಲಿ ಸ್ಪರ್ಧಿಸುವಂತೆ ಕೇಳಿಕೊಳ್ಳಲಾಗಿದೆ. ಜೆಡಿಎಸ್ ಭದ್ರಕೋಟೆಯೆಂದೇ ಬಿಂಬಿತವಾಗಿರುವ ಮಂಡ್ಯದಲ್ಲಿ ಡಿಕೆಶಿ ಸ್ಪರ್ಧಿಸಿದರೆ ಕಾಂಗ್ರೆಸ್ಗೆ ಸಹಾಯವಾಗುತ್ತದೆ ಎಂಬುದನ್ನು ಬೆಂಬಲಿಗರು ಹೇಳಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರಿಗೂ ಟಾಂಗ್ ಕೊಡಲು ಡಿಕೆಶಿ ಬಣ ಸಿದ್ದತೆ ನಡೆಸಿದೆಯೆಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿವೆ.
ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿರುವ ಮಂಡ್ಯ ಸಂಸದೆ ಸುಮಲತಾ ಅವರಿಗೂ ಈ ಮೂಲಕ ಪೆಟ್ಟು ನೀಡಬೇಕೆನ್ನುವ ಬಯಕೆಯನ್ನು ಡಿಕೆಶಿ ಹಿಂಬಾಲಕರು ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ, ಡಿಕೆ ಶಿವಕುಮಾರ್ ಅವರು ಮಂಡ್ಯದಿಂದ ಸ್ಪರ್ಧಿಸಿದರೆ, ಜೆಡಿಎಸ್ ಪರವಿರುವ ಒಕ್ಕಲಿಗ ಮತಗಳು ಕಾಂಗ್ರೆಸ್ಗೆ ಒಲಿಯಲಿವೆ ಎಂಬ ಆಶಯವನ್ನೂ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿವೆ ಎಂಬುದನ್ನು ಕಾದು ನೋಡಬೇಕೆದೆ.












Click it and Unblock the Notifications