MB Patil Interview: ಯಡಿಯೂರಪ್ಪ ಅವರನ್ನು ತೆಗೆಯುವಾಗ ಅನಾರೋಗ್ಯ ಇತ್ತೇ? ಸಂದರ್ಶನದಲ್ಲಿ ಎಂ ಬಿ ಪಾಟೀಲ ಹೇಳಿದ್ದೇನು?
ಬೆಂಗಳೂರು,ಮೇ4: ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದರು.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವಾಗ ಅನಾರೋಗ್ಯ ಇತ್ತೇ? ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅಪರೇಷನ್ ಕಮಲವೆಂಬ ಅನಿಷ್ಠ ಪದ್ಧತಿ ತಂದು ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದವರು ಬಿಜೆಪಿಯವರು ಎಂದು ಪ್ರಜಾವಾಣಿ ಸಂದರ್ಶನದಲ್ಲಿ ಬಿಜೆಪಿ ವಿರುದ್ದ ಎಂ ಬಿ ಪಾಟೀಲ ಕಿಡಿಕಾರಿದ್ದಾರೆ. ಸಂದರ್ಶನದ ಕೆಲ ವಿಚಾರಗಳು ಈ ಕೆಳಗಿನಂತಿವೆ.

ಲಿಂಗಾಯತ ವಿಚಾರ ಈ ಬಾರಿಯೂ ಚುನಾವಣಾ ಅಖಾಡದಲ್ಲಿ ಮುನ್ನೆಲೆಯಲ್ಲಿದೆಯಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2018 ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಮುಂದಿಟ್ಟು ಕಾಂಗ್ರೆಸ್ ವಿರುದ್ಧ ಸುಳ್ಳುಗಳನ್ನು ಹರಡಲಾಗಿತ್ತು. ಆದರೂ ಲಿಂಗಾಯತರಿಗೆ ಕಾಂಗ್ರೆಸ್ ಕೊಟ್ಟಿದ್ದ 43 ಸೀಟುಗಳಲ್ಲಿ 17 ಗೆದ್ದಿದ್ದೆವು. ಈ ಬಾರಿಯ ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ. ಲಿಂಗಾಯತ ಸಮುದಾಯ ನಮ್ಮ ಬೆಂಬಲಕ್ಕಿದೆ ಎಂದು ಹೇಳಿದರು.
ಬಿಜೆಪಿ ರಹಸ್ಯ ಕಾರ್ಯಸೂಚಿ ಲಿಂಗಾಯತರಿಗೆ ಅರ್ಥವಾಗಿದೆ. ಹೀಗಾಗಿ ಲಿಂಗಾಯತರು ಮರಳಿ ಮನೆಗೆ ಬರುತ್ತಿದ್ದಾರೆ. ಈ ಬಾರಿ ಶೇ 50ರಷ್ಟು ಲಿಂಗಾಯತರು ಕಾಂಗ್ರೆಸ್ ಪರ ನಿಲ್ಲುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ನಿಮ್ಮ ಈ ವಿಶ್ವಾಸಕ್ಕೆ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಅವರು ಕಾಂಗ್ರೆಸ್ ಸೇರಿದ್ದೂ ಕಾರಣವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟೀಯ ಪಕ್ಷವಾದ ಬಿಜೆಪಿಯೊಳಗೆ ಲಿಂಗಾಯತ ನಾಯಕರ ವಿರುದ್ದ ಕಾರ್ಯಸೂಚಿಯ ಕೆಲಸ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಆಗಿರುವ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನಿರಾಕರಿಸಲು ಈ ಕಾರ್ಯಸೂಚಿಯೇ ಕಾರಣ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿಯನ್ನ ಸೋಲಿಸಲು ಯಡಿಯೂರಪ್ಪ ಅವರಿಗೆ ಸುಪಾರಿ ನೀಡಲಾಗಿದೆ. ಲಕ್ಷ್ಮಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಮುಗಿಸಲು ಸಂತೋಷ್, ಜೋಶಿ ಹೋಗಬಹುದಿತ್ತಲ್ಲವೇ? ಒಬ್ಬ ಲಿಂಗಾಯತ ಮುಖಂಡನನ್ನು ನಾಶ ಮಾಡಲು ಇನ್ನೊಬ್ಬ ಲಿಂಗಾಯತ ನಾಯಕನನ್ನು ಬಿಜೆಪಿ ಬಳಸಿದ. ಚುನಾವಣೆಯಲ್ಲಿ ಈ ವಿಷಯ ಒಳಸುಳಿಯಾಗಿ ಪರಿಣಾಮ ಬೀರಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಪರೇಷನ್ ಕಮಲ'ವೆಂಬ ಅನಿಷ್ಠ ಪದ್ಧತಿಯಿಂದ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದರು. ಆ ಬಳಿಕ ಅವರನ್ನು ಕಿತ್ತು ಹಾಕಿದರು. ಈ ವಿಷಯ ಪ್ರಸ್ತಾಪಿಸಿದರೆ, ವೀರೇಂದ್ರ ಪಾಟೀಲರ ಹೆಸರನ್ನು ಬಿಜೆಪಿಯವರು ಪ್ರಸ್ತಾಪಿಸುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸದೆ ಬೇರೆ ದಾರಿಯೇ ಇರಲಿಲ್ಲ. ಈ ಬಗ್ಗೆ ಭಾರಿ ಅಪಪ್ರಚಾರವನ್ನ ಬಿಜೆಪಿಯವರು ಮಾಡಿದರು.
ಯಡಿಯೂರಪ್ಪ ಅವರನ್ನು ತೆಗೆದರೂ ಇನ್ನೊಬ್ಬ ಲಿಂಗಾಯತ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡಿದ್ದಾರಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಲಿಂಗಾಯತ ಮುಖ್ಯಮಂತ್ರಿಯನ್ನ ತೆಗೆದು ಇನ್ನೊಬ್ಬ ಲಿಂಗಾಯತನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಬಿಜೆಪಿಯವರದ್ದು ಆಗಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಆ್ಯಕ್ಸಿಡೆಂಟಲ್ ಚೀಫ್ ಮಿನಿಸ್ಟರ್
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಲಿಂಗಾಯತ ಸಮುದಾಯ ಮತ್ತು ವೀರಶೈವ ಮಹಾಸಭಾದ ಪ್ರತಿಭಟನೆಯ ನಂತರ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಈ ಬಾರೀ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲ್ಲ. ಈ ವಿಚಾರದಲ್ಲಿ ಹಿಂದೆ ಕುಮಾರಸ್ವಾಮಿ ಹೇಳಿದ್ದು ಸತ್ಯ ಅನ್ನಿಸುತ್ತಿದೆ ಎಂದು ಹೇಳಿದರು.












Click it and Unblock the Notifications