ಚುನಾವಣಾ ಭಿತ್ತಿ ಪತ್ರ, ವಿಡಿಯೋ ಬಿಡುಗಡೆ, ಮುಂದಿನ ವಾರ ಭಟ್ರ ಹಾಡು
ಬೆಂಗಳೂರು, ಮಾರ್ಚ್ 28: 'ಎಲ್ಲರೂ ಚೆನ್ನಾಗಿ ಆಡಿದರೆ ಮ್ಯಾಚ್ ಗೆಲ್ಲುತ್ತದೆ, ಎಲ್ಲರೂ ವೋಟ್ ಮಾಡಿದರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ' ಇದು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ರಾಯಭಾರಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಮಾತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಮೇಲಿನ ವಾಕ್ಯಗಳಿರುವ ಚುನಾವಣಾ ಭಿತ್ತಿಪತ್ರಗಳನ್ನು ಇಂದು ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು.
ರಾಹುಲ್ ದ್ರಾವಿಡ್ ಅವರ ಭಿತ್ತಿಪತ್ರದ ಜೊತೆಗೆ ವಿಡಿಯೋವನ್ನು ಸಹ ಅವರು ಬಿಡುಗಡೆ ಮಾಡಿದರು. ರಾಹುಲ್ ದ್ರಾವಿಡ್ ಅವರು ಮತದಾನದ ಬಗ್ಗೆ ಅರಿವು ಮತ್ತು ಮತದಾನದ ಅವಶ್ಯಕತೆಯ ಬಗ್ಗೆ ಸಂದೇಶ ನೀಡಿರುವ ವಿಡಿಯೋ ಇದಾಗಿದ್ದು, ವಿಡಿಯೋವನ್ನು ಎಲ್ಲಾ ಮಲ್ಟಿಫ್ಲೆಕ್ಸ್ಗಳಲ್ಲಿ, ಟಿವಿ ಜಾಹಿರಾತಾಗಿ ಪ್ರದರ್ಶಿಸಲಾಗುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಚಾರ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಚುನಾವಣೆಗಾಗಿ ಚಲನಚಿತ್ರ ನಿರ್ದೇಶಕ, ಗೀತರಚನೆಕಾರ ಯೋಗರಾಜ್ ಭಟ್ ಅವರ ಸಾರಥ್ಯದಲ್ಲಿ ನಿರ್ಮಿಸಲಾಗುತ್ತಿರುವ 4 ನಿಮಿಷದ ವಿಡಿಯೋವನ್ನು ಮುಂದಿನ ಒಂದು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಂಜೀವ್ ಕುಮಾರ್ ಅವರು ಇದೇ ಸಮಯದಲ್ಲಿ ಹೇಳಿದರು.
ಯೋಗರಾಜ್ ಭಟ್ ಚುನಾವಣಾ ಗೀತೆಗೆ ಹರಿಕೃಷ್ಣ ಸಂಗೀತ ನೀಡಿದ್ದು ವಿಜಯ ಪ್ರಕಾಶ್ ಹಾಡಿದ್ದಾರೆ. ಇಮ್ರಾನ್ ಕೊರಿಯೋಗ್ರಾಫರ್ ಆಗಿದ್ದು ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಆಯಾ ಜಿಲ್ಲೆಯ ಸ್ಥಳೀಯ ವಿಶೇಷ ಸಾಂಸ್ಕೃತಿಕ, ಐತಿಹಾಸಿಕ ಅಂಶವನ್ನು ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications