ಟ್ರೋಲ್ ಮಾಡಿ ನನ್ನ ಯಾರೂ ಬಗ್ಗಿಸಲು ಆಗಲ್ಲ!
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಟ್ರೋಲರ್ಗಳ ವಿರುದ್ಧ ಗರಂ ಆಗಿದ್ದಾರೆ. ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎನ್ನುವ ವಿಚಾರವಾಗಿ ವಿವಿಧ ಟ್ರೋಲ್ ಪೇಜ್ಗಳು ಮಧು ಬಂಗಾರಪ್ಪ ಅವರ ಬಗ್ಗೆ ಹಾಸ್ಯ ಮಾಡಿತ್ತು. ಇದಕ್ಕೆ ಕೆಂಡಾಮಂಡಲವಾಗಿರುವ ಅವರು, ಟ್ರೋಲ್ ಮಾಡಿ ನನ್ನನ್ನು ಬಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟ್ರೋಲ್ಗಳಿಗೆ ಹೆದರುವ ಮಧು ಬಂಗಾರಪ್ಪ ನಾನಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದು ಕೂಗಿದ್ದ. ಈ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇದಕ್ಕೆ ಗರಂ ಆಗಿದ್ದ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚಿಸಿದ್ದರು. ಇದನ್ನು ಹಲವರು ಖಂಡಿಸಿದ್ದರು.

ಈ ಬಗ್ಗೆ ಯೂಟರ್ನ್ ಹೊಡೆದಿರುವ ಮಧು ಬಂಗಾರಪ್ಪ, ನಾನು ಹೇಳಿದ್ದು ವಿದ್ಯಾರ್ಥಿಗಲ್ಲ ಎಂದಿದ್ದಾರೆ. ನಾನು ಸಂಬಂಧಪಟ್ಟ ಹೆಡ್ ಮಾಸ್ಟರ್ ಮತ್ತು ಬಿಇಓ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದು. ಇದನ್ನು ಮಾಧ್ಯಮಗಳು ತಪ್ಪಾಗಿ ತೋರಿಸಿವೆ ಎಂದು ಗರಂ ಆಗಿದ್ದಾರೆ.
ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳಲು ನಮಗೆ ಯಾವುದೇ ಅಧಿಕಾರವಿಲ್ಲ. ಹಾಗಾಗಿ ನಿಮ್ಮ ಮಕ್ಕಳನ್ನು ಕಂಟ್ರೋಲ್ನಲ್ಲಿ ಇಡಬೇಕು ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಮಾಧ್ಯಮಗಳು ಸುಮ್ಮನೆ ಇಲ್ಲದ್ದನ್ನು ತಂದಿದ್ದೀರಿ. ಇದು ಸರಿಯಲ್ಲ ಎಂದು ಮಾಧ್ಯಮಗಳ ವಿರುದ್ಧ ರೇಗಿದ್ದಾರೆ.
ಸರ್ಕಾರದಿಂದ ಮೊಟ್ಟೆ ಕೊಟ್ಟಿರುವ ವಿಚಾರವನ್ನು ಯಾರೂ ಹೇಳಲ್ಲ. ಆದ್ರೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅನ್ನೋದನ್ನ ತೋರಿಸ್ತೀರಿ. ಸಾವಿರಾರು ಮಕ್ಕಳು ಇದ್ದಾಗ ಆ ರೀತಿ ಮಾತನಾಡುವುದು ಸರಿಯಲ್ಲ. ಟ್ರೋಲ್ ಮಾಡಿದ್ರೆ ನನಗೇನು ಆಗಬೇಕಿಲ್ಲ ಎಂದು ಟ್ರೋಲರ್ಗಳ ವಿರುದ್ಧವೂ ಗುಡುಗಿದ್ದಾರೆ.

ಏನಿದು ಘಟನೆ?: ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮವನ್ನುದ್ದೇಶಿ ಮಾತನಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದು ಜೋರಾಗಿ ಕೂಗಿದ್ದ. ಇದು ಅಲ್ಲಿದ್ದ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿತ್ತು.
ಇದರಿಂದ ಮಧು ಬಂಗಾರಪ್ಪ ಅವರು ಮುಜುಗರಕ್ಕೀಡಾಗಿ ಬಳಿಕ ನಗುತ್ತಲೇ ಅವರು ಲೇ..ಯಾರೋ ಅದು? ನಾನೇನು ಉರ್ದುವಿನಲ್ಲಾ ಮಾತಾಡ್ತಿದೀನಿ? ಎಂದು ಹೇಳಿದ್ದರು. ಬಳಿಕ ಕೋಪಗೊಂಡು ಮಾಧ್ಯಮದವರೂ ಇದನ್ನೇ ತೋರಿಸ್ತಾರೆ. ಮೊದಲು ಆ ಹೇಳಿಕೆ ನೀಡಿದವನು ಯಾರೆಂದು ಪತ್ತೆ ಹಚ್ಚಿ, ಆಕ್ಷನ್ ತಗೊಳ್ಳಿ ಎಂದು ಅಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ನೀಟ್ ಜೆಇಇ, ಸಿಇಟಿ ಪರೀಕ್ಷೆಗಳ ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು. ಈ ವಿಡಿಯೋ ವೈರಲ್ ಆಗಿ, ಕೆಲವು ಟ್ರೋಲ್ ಪೇಜ್ಗಳು ಹಾಸ್ಯವಾಗಿ ಟ್ರೋಲ್ ಕೂಡ ಮಾಡಿದ್ದವು.
ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚಿಸಿದ್ದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದರು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತಹ ವಿಚಾರ ಎಂದಿದ್ದರು. ವಿದ್ಯಾರ್ಥಿಯೊಬ್ಬ ಸಚಿವರಿಗೆ ಕನ್ನಡ ಬರಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ ಎಂದು ಕಿಡಿಕಾರಿದ್ದರು.
ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು ಎಂದು ಕಿವಿಮಾತು ಹೇಳಿದ್ದರು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು ಎಂದು ಯತ್ನಾಳ್ ಸಲಹೆ ನೀಡಿದ್ದರು.












Click it and Unblock the Notifications