ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ
ಬೆಂಗಳೂರು, ಆ.27 : ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ನಿರ್ಮಿಸಿದ ಬೆಳಗಾವಿಯ ಸುವರ್ಣ ಸೌಧ ಭೂತ ಬಂಗಲೆಯಂತಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ಸೆ.28ರಂದು ಸುವರ್ಣಸೌಧದ ಮುಂದೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್, ಸುವರ್ಣಸೌಧಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಹೋಗುತ್ತಿಲ್ಲ. ಆದ್ದರಿಂದ ಅದು ಖಾಲಿಯಾಗಿ ಭೂತ ಬಂಗಲೆಯಂತಾಗಿದೆ. ಜನರ ಕೋಟ್ಯಾಂತರ ರೂ. ತೆರಿಗೆ ಹಣ ಖರ್ಚುಮಾಡಿ ಕಟ್ಟಿದ ಸೌಧವನ್ನು ಸಮಪರ್ಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರ ಸುವರ್ಣಸೌಧವನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದೆ. ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿನ ಪ್ರದೇಶಗಳ ಅಭಿವೃದ್ಧಿಯನ್ನು ಸರ್ಕಾರ ಕಡೆಗಣಿಸಿದೆ. ಆ ಭಾಗದ ಜನಪ್ರತಿನಿಧಿಗಳು ಈ ಕುರಿತು ಸದನಸಲ್ಲಿ ಮಾತನಾಡುತ್ತಿಲ್ಲ ಎಂದು ದೂರಿದರು.
ಉತ್ತರ ಕರ್ನಾಟಕ ಭಾಗವನ್ನು ಸರ್ಕಾರ ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಬೆಳಗಾವಿಯ ಸುವರ್ಣಸೌಧದ ಮುಂದೆ, ಸೆ.28ರಂದು ರೊಟ್ಟಿ ತಿನ್ನುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು. ( ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಮನೆಗೆ ನೋಟಿಸ್ ಬರುತ್ತೆ ಹುಷಾರ್
ಮೈಸೂರು ನಗರದ ಸಂಚಾರಿ ವ್ಯವಸ್ಥೆಯನ್ನು ನಿಯಂತ್ರಿಸಲು ಟ್ರಾಫಿಕ್ ಎನ್ ಫೋರ್ಸ್ ಮೆಂಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಶನಿವಾರ ಈ ವವಸ್ಥೆಯನ್ನು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಉದ್ಘಾಟಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸಲೀಂ, ವ್ಯವಸ್ಥೆ ಮೂಲಕ ನಗರದ ವಿವಿಧ ಪ್ರದೇಶಗಳಲ್ಲಿ ಸಿಸಿಟಿವಿ, ರೆಡ್ ಸ್ಪೀಟ್ ವೈಲೇಶನ್ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಕರ್ತವ್ಯ ನಿರತ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡುತ್ತಾರೆ. ವಾಹನ ಸವಾರರ ವಿಳಾಸವನ್ನು ಪತ್ತೆ, ಅವರ ಮನೆಗೆ ನೋಟಿಸ್ ಕಳಿಸುವ ಕಾರ್ಯವನ್ನು ಕೇಂದ್ರ ಮಾಡುತ್ತದೆ ಎಂದರು.

ಬಿಜೆಪಿಯಲ್ಲಿ ನಾಯಕರೇ ಇಲ್ಲ
ಬಿಜೆಪಿ ಪಕ್ಷದಲ್ಲಿ ನಾಯಕರ ಕೊರತೆ ಇದೆ. ಆದ್ದರಿಂದ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಸ್ಥಿತಿ ಬಿಜೆಪಿಗೆ ಬರಬಾರದಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಎಂ.ಶಿವಕುಮಾರ್ ಅವರು ಶನಿವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಖಾತೆ ಬದಲಾವಣೆ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ವಿದ್ಯುತ್ ಸ್ಪರ್ಶ 6 ಜನರ ಸ್ಥಿತಿ ಗಂಭೀರ
ಗಣೇಶ ವಿಸರ್ಜನೆ ಮಾಡಿ ಟ್ರ್ಯಾಕ್ಟರ್ ನಲ್ಲಿ ವಾಪಸ್ ಆಗುತ್ತಿದ್ದ 6 ಮಂದಿ ಯುವಕರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹೊಳೆಸಿರಿ ಗ್ರಾಮದಲ್ಲಿ ನಡೆದಿದೆ. ಯುವಕರು ಆಗಮಿಸುದ್ದಿ ಟ್ರ್ಯಾಕ್ಟರ್ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದದ್ದು, ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಗಾಯಾಳುಗಳಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಐವರ ಸ್ಥಿತಿ ಗಂಭೀರವಾಗಿದೆ.

ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಸಾವು
ಗಣಪತಿ ವಿಸರ್ಜನೆ ಮಾಡಲು ನಿರ್ಮಿಸಿದ್ದ ಗುಂಡಿಗೆ ಇಬ್ಬರು ಮಕ್ಕಳು ಬಿದ್ದು, ಮೃತಪಟ್ಟ ಘಟನೆ ಧಾರವಾಡದ ಗಾಂಧಿನಗರ ಬಡಾವಣೆಯಲ್ಲಿ ನಡೆದಿದೆ. ಪ್ರಜ್ವಲ್(9), ನಾಗರಾಜ್(10) ಮೃತ ಬಾಲಕರು. ಗಣೇಶನನ್ನು ಬಿಡಲು ಬಡಾವಣೆಯಲ್ಲಿ ಗುಂಡಿ ನಿರ್ಮಿಸಿ ನೀರು ತುಂಬಲಾಗಿತ್ತು. ಇಬ್ಬರು ಬಾಲಕರು ಆಟವಾಡು ಸಂದರ್ಭದಲ್ಲಿ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ.

ಪತ್ನಿಯನ್ನು ಜೀವಂತವಾಗಿ ದಹಿಸಿದ ಪತಿ
ಮಕ್ಕಳಾಗಲಿಲ್ಲ ಎಂಬ ಕಾರಣಕ್ಕಾಗಿ ಪತ್ನಿಯನ್ನು ಜೀವಂತವಾಗಿ ದಹಿಸಿದ ಘಟನೆ ರಾಯಭಾಗ ತಾಲೂಕಿನಲ್ಲಿ ನಡೆದಿದೆ. ಹಂದಿಗುಂದಿ ಗ್ರಾಮದ ಮಲ್ಲಮ್ಮ(21) ಮೃತ ದುರ್ದೈವಿ. ಮೂರು ವರ್ಷಗಳ ಹಿಂದೆ ರಾಮಪ್ಪ ಬಾಡಗಿ ಮತ್ತು ಮಲ್ಲಮ್ಮ ವಿವಾಹವಾಗಿದ್ದರು. ಆದರೂ ಮಕ್ಕಳಾಗಿರಲಿಲ್ಲ. ಶನಿವಾರ ಬೆಳಗ್ಗೆ ಪತ್ನಿಯೊಂದಿಗೆ ಈ ವಿಷಯ ಕುರಿತು ಜಗಳವಾಡಿ ರಾಮಪ್ಪ ಸೀಮೆಎಣ್ಣೆ ಸುರಿದು ಮಲ್ಲಮ್ಮ ನನ್ನು ಸುಟ್ಟುಹಾಕಿ, ಪರಾರಿಯಾಗಿದ್ದಾನೆ. ರಾಯಭಾಗ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದು, ಪತಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.












Click it and Unblock the Notifications