ಮ್ಯಾಜಿಕ್ ನಂಬರ್ ಸಿಕ್ಕರೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿಲ್ಲವೇಕೆ?
Recommended Video
ಬೆಂಗಳೂರು, ಜುಲೈ 11: ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಶಾಸಕರ ರಾಜೀನಾಮೆ ನಂತರವೇ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ಅಲ್ಪಮತಕ್ಕೆ ಕುಸಿದಿತ್ತು. ಈಗ ಈ ಸಂಖ್ಯೆ 18ಕ್ಕೇರಿದೆ. ತಾಂತ್ರಿಕವಾಗಿ ಬಿಜೆಪಿಗೆ ಬಹುಮತ ಸಿಕ್ಕಿದೆ, ಆದರೆ, ಸರ್ಕಾರ ರಚನೆಗೆ ಇನ್ನು ಮುಂದಾಗಿಲ್ಲವೇಕೆ? ವಿಧಾನಸಭೆಯಲ್ಲಿ ಜುಲೈ 11ಕ್ಕೆ ಸಂಖ್ಯಾಬಲ ಎಷ್ಟಿದೆ? ಕರ್ನಾಟಕದ ರಾಜಕೀಯ ನಾಟಕ, ನಂಬರ್ ಗೇಮ್ ಗೆ ಬಜೆಟ್ ಅಧಿವೇಶನ ಅಂತಿಮ ಷರಾ ಹಾಕಲಿದೆಯೇ? ಉತ್ತರ ಇಲ್ಲಿದೆ.
ಸರ್ಕಾರ ಬೀಳಿಸಬೇಕಾದರೆ ಬಿಜೆಪಿ ಕನಿಷ್ಠ 14 ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಬೇಕು. ನಂತರ ನಡೆಯುವ ಉಪ ಚುನಾವಣೆಯಲ್ಲಿ ಕನಿಷ್ಠ 8-10 ಸ್ಥಾನ ಗೆಲ್ಲಬೇಕಾಗಿದೆ ಎಂಬ ಸಣ್ಣ ಸತ್ಯ ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. 14 ಅಲ್ಲ 20 ಮಂದಿ ಶಾಸಕರು ರಾಜೀನಾಮೆ ಘೋಷಣೆ, ಸಲ್ಲಿಕೆ ಮಾಡಿದರೂ ಪ್ರಯೋಜನವಿಲ್ಲ.
ಹೊಸ ಸರ್ಕಾರದ ಉದಯ, ಮೈತ್ರಿ ಸರ್ಕಾರದ ಪತನ ಎಲ್ಲವೂ ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ. ಸದ್ಯ ಸರಣಿ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಅಂಗೀಕರಿಸಿದರೆ ಮಾತ್ರ ಬಿಜೆಪಿ ತನ್ನ ಮುಂದಿನ ನಡೆ ಇಡಬಹುದು. ಈಗ ರಾಜೀನಾಮೆ ಸಲ್ಲಿಸಿರುವ ಶಾಸಕರು ಮತ್ತೊಮ್ಮೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸುವುದು ಅನಿವಾರ್ಯವಾಗಿದೆ.

ಕುತೂಹಲ ಮೂಡಿಸಿದ ಕುಮಾರಸ್ವಾಮಿ ನಡೆ
ಸರ್ಕಾರ ಉಳಿಸಲು 22 ಸಚಿವರುಗಳು ರಾಜೀನಾಮೆ ನೀಡಿ, ಅತೃಪ್ತರಿಗೆ ಸ್ಥಾನ ಕಲ್ಪಿಸಲು ಯೋಚನೆ ಹಾಕಿಕೊಂಡಿದ್ದಾರೆ. ಸಿಎಂ, ಡಿಸಿಎಂ ಕೂಡಾ ಬದಲಾಗಬಹುದು. ಕುಮಾರಸ್ವಾಮಿ ಅವರು ಯಾವ ರಗಳೆಯೂ ಬೇಡ ಎಂದು ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ಘೋಷಿಸಬಹುದು. ಒಂದು ವೇಳೆ ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದರೆ, ಬಿಜೆಪಿ ತನ್ನ ಹಕ್ಕು ಮಂಡನೆ ಮಾಡಲು ಮುಂದಾಗಬಹುದು.
13 ಶಾಸಕರ ರಾಜೀನಾಮೆಗೂ ಮುನ್ನ
13 ಶಾಸಕರ ರಾಜೀನಾಮೆಗೂ ಮುನ್ನ(ಜುಲೈ 05) ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ:
ಒಟ್ಟು ಸದಸ್ಯ ಬಲ : 224ಕಾಂಗ್ರೆಸ್ + ಜೆಡಿಎಸ್ : 118
ಮ್ಯಾಜಿಕ್ ನಂಬರ್ : 113
ಬಿಜೆಪಿ : 105
ಬಿಎಸ್ ಪಿ: 1 (ಎನ್ ಮಹೇಶ್)
ಕಾಂಗ್ರೆಸ್ : 79
ಜೆಡಿಎಸ್ : 37
ಪಕ್ಷೇತರ : 2 (ಎಚ್ ನಾಗೇಶ್, ಶಂಕರ್)

13 ಮಂದಿ ಶಾಸಕರ ಸರಣಿ ರಾಜೀನಾಮೆ ಬಳಿಕ
ಜುಲೈ 06ರಂದು 13 ಮಂದಿ ಶಾಸಕರ ಸರಣಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ
ಒಟ್ಟು ಸದಸ್ಯ ಬಲ : 211ಕಾಂಗ್ರೆಸ್ + ಜೆಡಿಎಸ್ : 105
ಮ್ಯಾಜಿಕ್ ನಂಬರ್ : 106
ಬಿಜೆಪಿ : 105
ಬಿಎಸ್ ಪಿ: 1
ಕಾಂಗ್ರೆಸ್ : 69
ಜೆಡಿಎಸ್ : 34
ಪಕ್ಷೇತರ : 2

16 ಮಂದಿ ರಾಜೀನಾಮೆ ಬಳಿಕ
ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:
ಒಟ್ಟು ಸದಸ್ಯ ಬಲ : 224 -16
ಕಾಂಗ್ರೆಸ್ + ಜೆಡಿಎಸ್ : 101
ಮ್ಯಾಜಿಕ್ ನಂಬರ್ : 105
ಬಿಜೆಪಿ : 107
ಬಿಎಸ್ ಪಿ: 1 (ಎನ್ ಮಹೇಶ್)
ಎಲ್ಲಾ 16 ಶಾಸಕರ ರಾಜೀನಾಮೆಗಳು ಅಂಗೀಕಾರವಾದರೆ, ಬಿಜೆಪಿ ತನ್ನ ಮುಂದಿನ ನಡೆ ಇಡಬಹುದು. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಹೊಂದಿರುವ ಕಾರಣಕ್ಕೆ ಬಹುಮತ ಪಡೆದ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಸೂಚಿಸಬಹುದು. ಈ ನಡುವೆ ಕುಮಾರಸ್ವಾಮಿ ಅವರೇ ವಿಶ್ವಾಸ ಮತ ಯಾಚನೆಗೆ ಮುಂದಾದರೂ ಅಚ್ಚರಿಪಡಬೇಕಾಗಿಲ್ಲ. ಎಲ್ಲದ್ದಕ್ಕೂ ಜುಲೈ 12ರಿಂದ ಆರಂಭವಾಗಲಿರುವ ಅಧಿವೇಶನ ಉತ್ತರ ನೀಡಲಿದೆ.












Click it and Unblock the Notifications