ಮದ್ಯ ನಿಷೇಧ ಮಾಡೋಣ ಎನ್ನುವ ಕಾಂಗ್ರೆಸ್ ನಾಯಕರು, ಆಗಲ್ಲ ಎಂದ ಸಿದ್ದು
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಹಿಳಾ ಮತದಾರರನ್ನು ಸೆಳೆಯುವ ಕಾರಣಕ್ಕೆ ಮದ್ಯಪಾನ ನಿಷೇಧ ಜಾರಿಗೆ ತರುವ ಯೋಜನೆ ಹಾಕಿಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ನಾಯಕರು ಬಿಹಾರಕ್ಕೆ ಭೇಟಿ ನೀಡಿದ್ದಾರೆ.
ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಂ ಪ್ರಭು ಪಾಟೀಲ್ ಮತ್ತು ಶಾಸಕ ಬಿ.ಆರ್.ಪಾಟೀಲ್ ಬಿಹಾರಕ್ಕೆ ಭೇಟಿ ನೀಡಿ, ಕರ್ನಾಟಕದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೆ ತರುವ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಮಂಗಳೂರು ಮೇಯರ್ ಕವಿತಾ ಜತೆ ಕರಾಟೆ ಆಡಿದ ಸಿದ್ದರಾಮಯ್ಯ
ಇವರಿಬ್ಬರು ಜತೆಗೆ ಕಾಂಗ್ರೆಸ್ ನ ಹಲವು ಶಾಸಕರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ಚರ್ಚೆ ಮಾಡಲು ಶಾಸಕರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಕೇಳಿದ್ದಾರೆ.
ಸಂಪೂರ್ಣ ಮದ್ಯಪಾನ ನಿಷೇಧ ಮಾಡಿದರೆ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಆಗಬಹುದಾದ ಅನುಕೂಲದ ಬಗ್ಗೆ ಕರ್ನಾಟಕದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆಗೆ ಚರ್ಚೆ ನಡೆಸಿದ್ದಾರೆ.
ಬಿಹಾರದಲ್ಲಿ ಮದ್ಯಪಾನ ನಿಷೇಧ ಮಾಡಿದ ನಂತರ ಮಹಿಳೆ ಮತದಾರರಿಂದ ನಿತೀಶ್ ಕುಮಾರ್ ಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಅದನ್ನೇ ಉದಾಹರಣೆಯಾಗಿ ನೀಡಿದ್ದಾರೆ ಕಾಂಗ್ರೆಸ್ ಸದಸ್ಯರು.
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಜನ ಬೆಂಬಲವಿಲ್ಲ : ಸಿದ್ದರಾಮಯ್ಯ
ಮೂವತ್ತೊಂದು ಸದಸ್ಯರ ನಿಯೋಗವು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಭೇಟಿ ಮಾಡಿ, ಮದ್ಯಪಾನ ನಿಷೇಧದ ಬಗ್ಗೆ ಅಧ್ಯಯನ ನಡೆಸುವ ಇಂಗಿತ ವ್ಯಕ್ತಪಡಿಸಿತು ಎಂದು ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.
ಮದ್ಯಪಾನ ನಿಷೇಧದ ನಂತರ ಬಿಹಾರದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ನಿತೀಶ್ ಕುಮಾರ್ ತಿಳಿಸಿದರು. ಕರ್ನಾಟಕದಲ್ಲೂ ಅಂಥ ಸ್ಥಿತಿ ನಿರ್ಮಾಣ ಆಗಬೇಕು ಎಂದು ಪಾಟೀಲ್ ಹೇಳಿದ್ದಾರೆ.
ಆದರೆ, ಸಿದ್ದರಾಮಯ್ಯ ಅವರಿಗೆ ಈ ಆಲೋಚನೆ ಬಗ್ಗೆ ಅಂಥ ಒಲವಿಲ್ಲ. "ಮದ್ಯಪಾನ ನಿಷೇಧದಿಂದ ಒಳಿತಿಗಿಂತ ಕೆಟ್ಟ ಪರಿಣಾಮವೇ ಹೆಚ್ಚುತ್ತದೆ" ಎಂದು ಅವರು ಹೇಳಿದ್ದಾರೆ. "ಹೀಗೆ ಮಾಡುವುದರಿಂದ ಜನರು ಮದ್ಯವನ್ನು ಹುಡುಕಿಕೊಂಡು ಬೇರೆ ರಾಜ್ಯಕ್ಕೆ ಹೋಗುತ್ತಾರೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಜತೆಗೆ ರಾಜ್ಯದ ಆದಾಯದ ಮೇಲೂ ಪರಿಣಾಮ ಬೀರುತ್ತದೆ" ಎಂದಿದ್ದಾರೆ.