SayCM campaign : ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ನ ಹೊಸ ಅಭಿಯಾನ
ಬೆಂಗಳೂರು, ಅ.19: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ಈಡೇರದ ಭರವಸೆಗಳ ಬಗ್ಗೆ ಉತ್ತರಿಸುವಂತೆ ಕರ್ನಾಟಕ ಕಾಂಗ್ರೆಸ್ ಮಂಗಳವಾರ 'ಸೇಸಿಎಂ' ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನೀಡಿದ ಭರವಸೆಗಳ ಬಗ್ಗೆ ರಾಜ್ಯದ ಜನತೆಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕಾಂಗ್ರೆಸ್, "ಪೇಸಿಎಂ ಈಗ ಸೇಸಿಎಂ ಆಗಲಿ, ರಾಜ್ಯದ ಜನತೆಗೆ ಉತ್ತರ ನೀಡಲಿ. ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ ಕರ್ನಾಟಕ ಬಿಜೆಪಿ ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ" ಎಂದಿದೆ.
ಗುಂಡಿ ಬಿದ್ದ ರಸ್ತೆ ಮೇಲೆ ರಾಹುಲ್ ನಡಿಗೆ: 40 ಪರ್ಸೆಂಟ್ ಸರ್ಕಾರದ ಅಭಿವೃದ್ಧಿ ಎಂದ ಕಾಂಗ್ರೆಸ್
"ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ?" ಎಂದು ವ್ಯಂಗ್ಯವಾಡಿದೆ. ಇದರ ಜೊತೆಗೆ ಕಾಂಗ್ರೆಸ್ ಈ ಹಿಂದೆ ಆರಂಭಿಸಿದ್ದ '40% ಸರ್ಕಾರ' ವೆಬ್ಸೈಟ್ಗೆ ಲಿಂಕ್ ಆಗುವ ಕ್ಯೂಆರ್ ಕೋಡ್ ಹಾಕಿ, ನಿಮ್ ಹತ್ರ ಇದ್ಯಾ ಉತ್ತರ ಎಂಬ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.
"ತಮ್ಮದೇ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸುವ ದಮ್ಮು ತಾಕತ್ತು ಇದೆಯೇ ಬಿಜೆಪಿಗೆ..? ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ, ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ?. ಪ್ರಣಾಳಿಕೆ ಮುಂದಿಟ್ಟುಕೊಂಡು ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ ಕರ್ನಾಟಕ ಬಿಜೆಪಿ? ಎಂದು ಸರಣಿ ಟ್ವೀಟ್ಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
"ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 550 ಭರವಸೆಗಳನ್ನು ನೀಡಿತ್ತು, ಇದುವರೆಗೂ ನಾವು ಬಿಜೆಪಿ ನೀಡಿದ ಭರವಸೆಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳಿದ್ದೇವೆ, ಆದರೆ, ಕರ್ನಾಟಕ ಬಿಜೆಪಿ ನೀಡಿದ ಉತ್ತರ - 0. ತಮ್ಮದೇ ಪ್ರಣಾಳಿಕೆಯಲ್ಲಿನ ಅಂಶಗಳ ಬಗ್ಗೆ ಬಿಜೆಪಿಗೆ ಮಾತನಾಡುವ ಧೈರ್ಯವಿರದಿರುವುದು ಸರ್ಕಾರದ ವಿಫಲತೆಗೆ ನಿದರ್ಶನ" ಎಂದು ಕಾಂಗ್ರೆಸ್ ಟೀಕಿಸಿದೆ.
ಸೆಪ್ಟೆಂಬರ್ನಲ್ಲಿ, ಕಾಂಗ್ರೆಸ್ ರಾಜ್ಯದಲ್ಲಿ PayCM ಅಭಿಯಾನವನ್ನು ಪ್ರಾರಂಭಿಸಿತ್ತು. ಅದರಲ್ಲಿ ಸಿಎಂ ಬೊಮ್ಮಾಯಿ ಅವರ ಫೋಟೋದೊಂದಿಗೆ ಕ್ಯೂಆರ್ ಕೋಡ್ ಅನ್ನು ಹಾಕಿತ್ತು. ಇದು ರಾಜ್ಯದಲ್ಲಿ ಹೊಸ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು.