ಅಮಿತ್ ಶಾ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಬೆಂಗಳೂರು, ಮಾರ್ಚ್ 28: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗಿದೆ.
ಅಮಿತ್ ಶಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ವೈಯಕ್ತಿಕ ನಿಂದನೆ ಮಾಡುವ ಜೊತೆಗೆ ಧರ್ಮದ ಪ್ರಸ್ತಾವ ಮಾಡಿ ಮತ ಯಾಚನೆ ಮಾಡಿದ್ದಾರೆ ಹಾಗಾಗಿ ಅವರ ಮೇಲೆ ಕೂಡಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಎಫ್ಐಆರ್ ದಾಖಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ನಿನ್ನೆ ಚಿತ್ರದುರ್ಗದಲ್ಲಿ ನಡೆದ ಎಸ್ಟಿ ಸಮಾವೇಶದಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು 'ಸಿದ್ದರಾಮಯ್ಯ ಅಹಿಂದ ಅಲ್ಲ, ಆತ ಹಿಂದೂ ವಿರೋಧಿ' ಎಂದು ಹೇಳಿದ್ದರು.
ಚುನಾವಣಾ ನೀತಿ ಸಂಹಿತೆ ಪ್ರಕಾರ ಮತಯಾಚನೆ ವೇಳೆ ಸರ್ಕಾರ ಅಥವಾ ವ್ಯಕ್ತಿಯ ಅಭಿವೃದ್ಧಿ ಕಾರ್ಯಗಳು, ಮತ್ತಿತರೆ ಆಡಳಿತ ಸಂಬಂಧಿ ವಿಷಯಗಳನ್ನು ಪ್ರಸ್ತಾಪಿಸಿ ಮತಯಾಚನೆ ಮಾಡಬೇಕು ಅಥವಾ ಎದುರಾಳಿ ಅಭ್ಯರ್ಥಿಗಳನ್ನು ಟೀಕಿಸಬಹುದಾಗಿದೆ ಆದರೆ ವೈಯಕ್ತಿಕ ನಿಂದನೆ, ಜಾತಿ ನಿಂದನೆ ಜೊತೆಗೆ ಜಾತಿ ಅಥವಾ ಧರ್ಮದ ಆಧಾರದಲ್ಲಿ ಮತ ಯಾಚನೆ ಮಾಡುವಂತಿಲ್ಲ.
ಅಮಿತ್ ಶಾ ಅವರು ಧರ್ಮದ ಆಧಾರದಲ್ಲಿ ಮತ ಕೇಳಿದ್ದಾರೆ ಅಷ್ಟೆ ಅಲ್ಲದೆ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಜಾತಿಯ ಉಲ್ಲೇಖ ಮಾಡಿದ್ದಾರೆ ಹಾಗಾಗಿ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಧಾರದಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ರಾಜ್ಯ ಕಾಂಗ್ರೆಸ್, ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರಿಗೆ ದೂರು ನೀಡಿದೆ.