'ಸಂಭವಾಮಿ ಯುಗೇ ಯುಗೇ' ಅನ್ನುತ್ತಿದ್ದಾರೆ ಭಿನ್ನಮತೀಯರು!
ಬೆಂಗಳೂರು, ಜೂನ್, 24: ರಾಜ್ಯ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತ ದಿನೇ ದಿನೇ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಲೇ ಸಾಗಿದೆ. ಇನ್ನೊಂದೆಡೆ ಭಿನ್ನಮತೀಯರಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ನಾಯಕತ್ವ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭಿನ್ನಮತೀಯರು ಸಹ ಕೃಷ್ಣಾಗಮನ ಬಯಸಿದ್ದಾರೆ.
ಕೆಲವರು ರಾಜೀನಾಮೆ, ಪಕ್ಷ ಬಿಡುವ ಬೆದರಿಕೆ ಹಾಕಿದ್ದರೆ ಇನ್ನು ಕೆಲವರದ್ದು ನಾಯಕತ್ವ ಬದಲಾವಣೆ ಮಾಡಬೇಕು ಎಂಬ ವಾದ. ಇನ್ನು ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ನಿವಾಸದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಯಲಿದ್ದು ಅತೃಪ್ತ ಶಾಸಕರು ಚರ್ಚೆ ನಡೆಸಲಿದ್ದಾರೆ.[ಕ್ಯಾಬಿನೆಟ್ ಗೆ ರಮ್ಯಾ ಸೇರಿದರೆ, ಬಂಡಾಯದ ಬೆಂಕಿಗೆ ತುಪ್ಪ ಸುರಿದಂತೆ ಸರ್ವಜ್ಞ!]
ಭಿನ್ನಮತೀಯರ ನಾಯಕತ್ವವನ್ನು ಖಮರುಲ್ ಇಸ್ಲಾಂ, ಅಂಬರೀಶ್, ಶ್ರೀನಿವಾಸ್ ಪ್ರಸಾದ್ ವಹಿಸಿಕೊಂಡಿದ್ದಾರೆ. ಎ.ಬಿ. ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ್, ಸತೀಶ್ ಜಾರಕಿಹೊಳಿ, ಶಿವಮೂರ್ತಿ ನಾಯ್ಕ, ರಾಜಶೇಖರ್ ಪಾಟೀಲ್ ಹುಮ್ನಾ ಬಾದ್, ಎಸ್.ಟಿ. ಸೋಮಶೇಖರ್ ಹಾಗೂ ಸಂಸದರಾದ ಧ್ರುವನಾರಾಯಣ್ ಭಿನ್ನಮತೀಯರ ಪರವಾಗಿ ನಿಂತು ಬ್ಯಾಟ್ ಬೀಸುತ್ತಿದ್ದಾರೆ.
ಕೃಷ್ಣ ಗಾರುಡಿ
ಸಿದ್ದರಾಮಯ್ಯ ವಿರುದ್ಧ ಇದ್ದ ಭಿನ್ನಮತೀಯರ ಸಿಟ್ಟು ಮಲ್ಲಿಕಾರ್ಜುನ ಖರ್ಗೆ ಮತ್ತುಯ ಧರಮ್ ಸಿಂಗ್ ಅವರ ಮೇಲೂ ತಿರುಗಿದೆ. ಬಹಿರಂಗ ವಿರೋಧ ವ್ಯಕ್ತಪಡಿಸುವ 20ಕ್ಕೂ ಹೆಚ್ಚು ಶಾಸಕರು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ನಾಯಕತ್ವ ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.
ದುಡುಕಿನ ನಿರ್ಧಾರ ಬೇಡ
ಭಿನ್ನಮತೀಯ ಶಾಸಕರು ಕುಳಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಬಗ್ಗೆ ಸಲಹೆ ನೀಡಿರುವ ಕೃಷ್ಣ ಆತುರದ ನಿರ್ಧಾರ ಕೈಗೊಳ್ಳದಂತೆ ಕಿವಿಮಾತು ಹೇಳಿದ್ದಾರೆ.
ಒಗ್ಗೂಡಿಸಿಕೊಂಡು ಹೋಗುತ್ತೇನೆ
ಕಾಂಗ್ರೆಸ್ ಭಿನ್ನಮತದ ಬಗ್ಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಹತ್ವದ ಬದಲಾವಣೆಯಾದ ಸಂದರ್ಭದಲ್ಲಿ ಇಂಥ ಅಸಮಾಧಾನಗಳು ಸಹಜ. ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸಾದ್ ಭೇಟಿ ಮಾಡಿದ ಅನುಪಮಾ
ಕೂಡ್ಲಿಗಿ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿ ಸುದ್ದಿ ಮಾಡಿದ್ದ ಅನುಪಮಾ ಶೆಣೈ ಅವರು ಭಿನ್ನಮತೀಯ ನಾಯಕ ಶ್ರೀನಿವಾಸ ಪ್ರಸಾದ್ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ. ಭೇಟಿಗೆ ನಿಖರ ಕಾರಣ ತಿಳಿದು ಬಂದಿಲ್ಲ.