ಪ್ರಧಾನಿ ಮೋದಿ, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು: ಖರ್ಗೆ
ಬೆಂಗಳೂರು, ಜನವರಿ 12: ಸಿಎಂ ಕುಮಾರಸ್ವಾಮಿ ಅವರು ಗುಮಾಸ್ತನಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆ ಕಾಂಗ್ರೆಸ್ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆರಳಿಸಿದೆ.
ಪ್ರಧಾನಿ ಮೋದಿ ಅವರು, ಪ್ರಧಾನಿ ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ತಮ್ಮ ಪ್ರಧಾನಿ ಹುದ್ದೆಯ ಘನತೆ ಅರಿತು ಮಾತನಾಡಿದರೆ ಒಳ್ಳೆಯದು ಎಂದು ಖರ್ಗೆ ಅವರು ಕಿಡಿ ಕಾರಿದ್ದಾರೆ.

ಇಂದು ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ್ದ ಮೋದಿ, ಕಾಂಗ್ರೆಸ್ ಪಕ್ಷವು ಸಿಎಂ ಕುಮಾರಸ್ವಾಮಿ ಅವರನ್ನು ಕ್ಲರ್ಕ್ (ಗುಮಾಸ್ತ)ನಂತೆ ನಡೆಸಿಕೊಳ್ಳುತ್ತಿದೆ ಎಂದಿದ್ದರು. ಈ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾಘಟಬಂಧನ್ ಅನ್ನು ಕಳ್ಳರ ಸಂತೆ ಎಂದು ಕರೆದುದ್ದರ ಬಗ್ಗೆಯೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ. ಎನ್ಡಿಎ ಮಹಾಘಟಬಂಧನ್ ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪಾಗಿ ಕಾಣುತ್ತದೆಯೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಡಿಸಿಎಂ ಪರಮೇಶ್ವರ್ ಅವರು ಸಹ ಮೋದಿ ಅವರ 'ಗುಮಾಸ್ತ' ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮೋದಿ ಅವರ ಈ ಹೇಳಿಕೆ ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ತೀಕ್ಷಣವಾಗಿ ಚುಚ್ಚಿದ್ದಾರೆ.
ಕುಮಾರಸ್ವಾಮಿ ಅವರು ಈ ರಾಜ್ಯದ ಸಂವಿಧಾನ ಬದ್ಧ ಮುಖ್ಯಮಂತ್ರಿ ಅವರ ಹುದ್ದೆಯ ಬಗ್ಗೆ ಮೋದಿ ಹಾಗೂ ಅಮಿತ್ ಶಾ ಗೆ ಅರಿವಿರಬೇಕು. ಮುಖ್ಯಮಂತ್ರಿ ಬಗ್ಗೆ ಯಾರೇ ಲಘುವಾಗಿ ಮಾತನಾಡಿದರು ಅದು ಅವರ ಸಂಸ್ಕಾರವನ್ನು ಪ್ರದರ್ಶಿಸುತ್ತದೆ ಎಂದು ಸಿಎಂ ಬೆಂಬಲಕ್ಕೆ ನಿಂತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಹ ಮೋದಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕುಮಾರಸ್ವಾಮಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಏಕೆ ಪದೇ-ಪದೇ ಪ್ರಧಾನಿ ಮಾತನಾಡಬೇಕು ಎಂದು ಅವರು ಹೇಳಿದ್ದಾರೆ.












Click it and Unblock the Notifications