ಅನರ್ಹ ಶಾಸಕರ ಕ್ಷೇತ್ರಗಳಿಗೆ ವೀಕ್ಷಕರ ನೇಮಿಸಿದ ಕಾಂಗ್ರೆಸ್
ಬೆಂಗಳೂರು, ಆಗಸ್ಟ್ 02: ಹದಿನೇಳು ಅನರ್ಹ ಶಾಸಕರ ಕ್ಷೇತ್ರಗಳಿಗೆ ರಾಜ್ಯ ಕಾಂಗ್ರೆಸ್ ವೀಕ್ಷಕರನ್ನು ನೇಮಿಸಿದ್ದು, ಹದಿನೇಳೂ ಕ್ಷೇತ್ರವನ್ನು ಉಪಚುನಾವಣೆಯಲ್ಲಿ ಗೆಲ್ಲಲು ಈಗಿನಿಂದಲೇ ಸಮರ ಪ್ರಾರಂಭಿಸಿವೆ.
ಪ್ರತಿಯೊಂದು ಕ್ಷೇತ್ರಕ್ಕೂ ಸ್ಥಳೀಯ ಶಾಸಕರು, ಎಂಎಲ್ಸಿಗಳು, ಮಾಜಿ ಶಾಸಕರನ್ನೇ ವೀಕ್ಷಕರನ್ನಾಗಿ ನೇಮಿಸಿದ್ದು, ಎಲ್ಲಾ ಹದಿನೇಳು ಕ್ಷೇತ್ರವನ್ನೂ ಗೆಲ್ಲುವ ಸಲುವಾಗಿ ಈಗಿನಿಂದಲೇ ಕಾಂಗ್ರೆಸ್ ತಯಾರಿ ಪ್ರಾರಂಭಿಸಿದೆ.
ಅನರ್ಹಗೊಂಡಿರುವ ಎಸ್.ಟಿ.ಸೋಮಶೇಖರ್ ಗೆದ್ದಿದ್ದ ಯಶವಂತಪುರ ವಿಧಾನಸಭೆ ಕ್ಷೇತ್ರಕ್ಕೆ, ಮಾಜಿ ಸಚಿವರಾಗಿದ್ದ ಎಂ.ಕೃಷ್ಣಪ್ಪ, ಟಿಬಿ.ಜಯಚಂದ್ರ, ಎಂಎಲ್ಸಿಗಳಾದ ಎಂ.ಸಿ.ವೇಣುಗೋಪಾಲ್, ಯುಬಿ ವೆಂಕಟೇಶ್, ಮುಖಂಡ ಗುರಪ್ಪ ನಾಯ್ಡು ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಜೆಡಿಎಸ್ನ ಕೆ.ಗೋಪಾಲಯ್ಯ ಆಯ್ಕೆಯಾಗಿದ್ದ ಕೆ.ಆರ್.ಪುರ ಕ್ಷೇತ್ರಕ್ಕೆ, ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಸೇರಿದಂತೆ ಇನ್ನೂ ಇಬ್ಬರನ್ನು ನೇಮಿಸಲಾಗಿದೆ. ಮುನಿರತ್ನ ಶಾಸಕರಾಗಿದ್ದ ರಾಜರಾಜೇಶ್ವರಿ ನಗರಕ್ಕೆ ಡಿ.ಕೆ.ಸುರೇಶ್, ಎಚ್.ಎಂ.ರೇವಣ್ಣ ಸೇರಿ ಇನ್ನೂ ಇಬ್ಬರನ್ನು ನೇಮಿಸಲಾಗಿದೆ.
ಎಂಟಿಬಿ ನಾಗರಾಜು ಶಾಸಕರಾಗಿದ್ದ ಹೊಸಕೋಟೆ ಕ್ಷೇತ್ರಕ್ಕೆ, ಕೃಷ್ಣಬೈರೇಗೌಡ, ವಿ.ಆರ್.ಸುದರ್ಶನ್ ಸೇರಿ ಇನ್ನೂ ಇಬ್ಬರನ್ನು ನೇಮಿಸಲಾಗಿದೆ. ರೋಷನ್ ಬೇಗ್ ಶಾಸಕರಾಗಿದ್ದ ಶಿವಾಜಿನಗರಕ್ಕೆ ಯುಟಿ ಖಾದರ್, ಎನ್.ಎಚ್.ಹ್ಯಾರಿಸ್, ಕೆ.ಗೋವಿಂದರಾಜು ಹಾಗೂ ಇನ್ನೂ ಒಬ್ಬರನ್ನು ನೇಮಿಸಲಾಗಿದೆ.
ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಬಂಡಿಸಿದ್ದೇಗೌಡ ಅವರನ್ನು ನೇಮಿಸಲಾಗಿದೆ. ಹುಣಸೂರು ಕ್ಷೇತ್ರಕ್ಕೆ ಎಚ್.ಸಿ.ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಕೆ.ವೆಂಕಟೇಶ್ ಅವರನ್ನು ನೇಮಿಸಲಾಗಿದೆ.
ಹೀಗೆ ಎಲ್ಲಾ ಹದಿನೇಳು ಕ್ಷೇತ್ರಕ್ಕೂ ಹಾಲಿ, ಮಾಜಿ ಶಾಸಕರು, ಎಂಎಲ್ಸಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಈಗಿನಿಂದಲೇ ಕಾಂಗ್ರೆಸ್ ಪಕ್ಷವು ಅನರ್ಹರ ವಿರುದ್ಧ ಯುದ್ಧ ಆರಂಭಿಸಿದೆ. ಆರು ತಿಂಗಳಲ್ಲಿ ಈ ಹದಿನೇಳು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.












Click it and Unblock the Notifications