ದೆಹಲಿಗೆ ಮುಂದಿನ ವರ್ಷದಲ್ಲಿ ಬಂದರೆ ಸಾಕು: ಸಿಎಂ ಬಿಎಸ್ವೈಗೆ ಅಮಿತ್ ಶಾ
ಬೆಂಗಳೂರು / ನವದೆಹಲಿ, ಡಿ 22: ಸಂಪುಟ ರಚನೆ, ನೂತನ ಶಾಸಕರಿಗೆ ಹುದ್ದೆ ಹಂಚಿಕೆ, ಉಪಮುಖ್ಯಮಂತ್ರಿ ಹುದ್ದೆ ಮುಂದುವರಿಯುವಿಕೆ, ಮುಂತಾದ ವಿಚಾರಗಳಲ್ಲಿ, ಮಾತುಕತೆ ನಡೆಸಲು, ಮುಂದಿನ ವರ್ಷದ ಮೊದಲ ವಾರದಲ್ಲಿ ದೆಹಲಿಗೆ ಬನ್ನಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸೂಚಿಸಿದ್ದಾರೆಂದು ವರದಿಯಾಗಿದೆ.
ಪೌರತ್ವ ತಿದ್ದುಪಡಿಯ ಕಾವು ಇನ್ನೂ ಆರದ ಹಿನ್ನಲೆಯಲ್ಲಿಅಮಿತ್ ಶಾ, ಬಿಎಸ್ವೈಗೆ ಈ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. ಜೊತೆಗೆ, ಜಾರ್ಖಂಡ್ ಅಸೆಂಬ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿರುವುದರಿಂದ, ಈ ವಿಚಾರಗಳಿಗೆ ಆದ್ಯತೆ ನೀಡಲು ಶಾ ನಿರ್ಧರಿಸಿದ್ದಾರೆ.
ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಭಾನುವಾರ (ಡಿ 22) ನಡೆದಿದೆ. ಇವರುಗಳಿಗೆ, ಖಾತೆ ಹಂಚಿಕೆಯ ಸಂಬಂಧ, ಯಡಿಯೂರಪ್ಪ ದೆಹಲಿಗೆ ಪ್ರಯಾಣಿಸಬೇಕಿತ್ತು.

ಆದರೆ, ಧನುರ್ಮಾಸದ ಹಿನ್ನಲೆಯಲ್ಲಿ, ಯಾರೂ ಈ ಅವಧಿಯಲ್ಲಿ ಸಚಿವ ಸ್ಥಾನ ಸ್ವೀಕರಿಸಲು ಉತ್ಸುಕತೆ ತೋರುತ್ತಿಲ್ಲ.. ಯಡಿಯೂರಪ್ಪನವರು ಕೂಡಾ, ಈ ಅವಧಿಯಲ್ಲಿ ಶುಭ ಕಾರ್ಯ ಮಾಡಲು ಇಚ್ಚಿಸುತ್ತಿಲ್ಲ.
ಜನವರಿ ಮೊದಲ ವಾರದಲ್ಲಿ, ಯಡಿಯೂರಪ್ಪ, ದೆಹಲಿಗೆ ತೆರಳಿ, ಖಾತೆ ಹಂಚಿಕೆ ಮತ್ತು ಉಪಮುಖ್ಯಮಂತ್ರಿ ಹುದ್ದೆ ಬೇಕೇ ಅಥವಾ ಬೇಡವೇ ಎನ್ನುವ ವಿಚಾರವನ್ನೂ, ವರಿಷ್ಠರ ಜೊತೆ ಮಾತುಕತೆಯ ನಂತರ ಫೈನಲ್ ಮಾಡಲಿದ್ದಾರೆಂದು ವರದಿಯಾಗಿದೆ.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮತ್ತು ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಿಂದಾಗಿ ಜರ್ಜರಿತವಾಗಿರುವ ಮಂಗಳೂರಿಗೆ, ಶನಿವಾರ (ಡಿ 21) ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು.
ಗೋಲಿಬಾರ್ ನಿಂದಾಗಿ ಪ್ರಾಣ ಕಳೆದುಕೊಂಡ ಇಬ್ಬರು ಪ್ರತಿಭಟನಾಕಾರರ ಕುಟುಂಬವನ್ನು ಗೆಸ್ಟ್ಹೌಸ್ ಒಂದರಲ್ಲಿ ಭೇಟಿ ಮಾಡಿದ ಯಡಿಯೂರಪ್ಪ, ಕುಟುಂಬಕ್ಕೆ ಧೈರ್ಯ ತುಂಬಿದರು. ಮೃತ ಕುಟುಂಬಕ್ಕೆ 10ಲಕ್ಷ ಪರಿಹಾರ ಘೋಷಿಸಲಾಗಿದೆ.












Click it and Unblock the Notifications