ಜೂನ್ 1ರ ನಂತರ ಸಿ.ಇ.ಟಿ. ಪರೀಕ್ಷೆ ಫಲಿತಾಂಶ
ಬೆಂಗಳೂರು, ಮೇ 22 : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ.) ಪರೀಕ್ಷೆ ಫಲಿತಾಂಶವನ್ನು ಜೂನ್ 1ರ ನಂತರ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರ ಕಿಮ್ಮನೆ ರತ್ನಾಕರ್ ಅವರು ಪ್ರಕಟಿಸಿದ್ದಾರೆ. ಈ ಮೊದಲು ಮೇ 26ರಂದು ಸಿಇಟಿ ಫಲಿತಾಂಶ ಪ್ರಕಟವಾಗಬೇಕಿತ್ತು.
ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಗೊಂದಲಗಳು ಉದ್ಭವವಾಗಿರುವ ಕಾರಣ, ಮರುಮೌಲ್ಯ ಮಾಪನಕ್ಕಾಗಿ ಉತ್ತರ ಪತ್ರಿಕೆ ಪ್ರತಿಗಳನ್ನು ತೆಗೆದುಕೊಳ್ಳಲು ಅನುವಾಗಲೆಂದು ಸಿಇಟಿ ಪರೀಕ್ಷೆ ಫಲಿತಾಂಶ ಮುಂದೂಡಲು ನಿರ್ಧರಿಸಲಾಗಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಉನ್ನತ ಶಿಕ್ಷಣ ಸಚಿವರು ಹಾಗೂ ಕಾಮೆಡ್ಕೆ ಜೊತೆ ಮಾತನಾಡಿದ್ದು ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. [ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?]

ಮರುಮೌಲ್ಯ ಮಾಪನಕ್ಕೆ 4-5 ಕೇಂದ್ರಗಳನ್ನು ಆರಂಭಿಸಲಾಗುವುದು. 3 ಜನ ಮೌಲ್ಯಮಾಪಕರಿಂದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸಲಾಗುವುದು. ಹಣ ಪಾವತಿಗೆ ಸಂಬಂಧಿಸಿದಂತೆ ನಿಯಮಾವಳಿ ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರತ್ನಾಕರ ಅವರು ತಿಳಿಸಿದರು. [ಪತ್ರಿಕಾಗೋಷ್ಠಿ ಮುಖ್ಯಾಂಶಗಳು]
ಮರು ಮೌಲ್ಯಮಾಪನಕ್ಕೆ 2825 ಅರ್ಜಿಗಳು ಬಂದಿದ್ದು, ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಗಾಗಿ 20,623 ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಲು ಮೇ 25ರವರೆಗೆ ಕಾಲಾವಕಾಶ ನೀಡಲಾಗಿದೆ. ಪಿಯುಸಿ ಪರೀಕ್ಷೆ ಬಗ್ಗೆ ಗೊಂದಲವಿದ್ದಲ್ಲಿ ಬಗೆಹರಿಸುವ ಸಂಬಂಧ ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 080 - 2308 3900ಗೆ ಕರೆ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದೆಂದು ಅವರು ಹೇಳಿದರು.
ಪಿ.ಯು. ಫಲಿತಾಂಶದಲ್ಲಿ ಯಾವೊಬ್ಬರಾಗಲಿ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳಾಗಲಿ ಪೋಷಕರು ಗಾಬರಿಪಡುವ ಅಗತ್ಯವಿಲ್ಲ. ಗೊಂದಲಯುತ ಫಲಿತಾಂಶಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳಲು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದರು. [ಎರಡನೇ ಪಿಯುಸಿ ಫಲಿತಾಂಶ, ಹೈಲೈಟ್ಸ್]












Click it and Unblock the Notifications