ಬೆಳಗ್ಗೆ 11ಕ್ಕೆ ಅಧಿವೇಶನ: ಕಾವೇರಿ ನೀರು ಬಿಡದ ನಿರ್ಣಯ ಸಾಧ್ಯತೆ!
ಬೆಂಗಳೂರು, ಸೆಪ್ಟೆಂಬರ್ 23: ಕಾವೇರಿ ನೀರು ವಿಚಾರವಾಗಿ ನಿರ್ಧಾರ ಕೈಗೊಳ್ಳಲು ಶುಕ್ರವಾರ ವಿಶೇಷ ಅಧಿವೇಶನ ಕರೆಯಲಾಗಿದೆ. ಬೆಳಗ್ಗೆ 11ರ ವೇಳೆಗೆ ಆರಂಭವಾಗುವ ಅಧಿವೇಶನದಲ್ಲಿ ಒಂದು ಸಾಲಿನ ನಿರ್ಣಯ ಅಂಗೀಕರಿಸಬಹುದು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕ ನಡೆದುಕೊಳ್ಳಲು ಸಾಧ್ಯವಿಲ್ಲ. ತಮಿಳುನಾಡಿಗೆ ನೀರು ಬಿಡುವುದಕ್ಕಾಗಲ್ಲ ಎಂಬ ನಿರ್ಣಯ ಸ್ವೀಕರಿಸಬಹುದು.
ಸರ್ವ ಪಕ್ಷಗಳ ಸಭೆಯ ನಂತರ ಅಧಿವೇಶನ ಕರೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಸೆ.27ರವರೆಗೆ ನಿತ್ಯ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸೋಮವಾರ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.[ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆ ಸೇರಿದ ಜಯಲಲಿತಾ]
ಈ ನಿರ್ಣಯದ ಬಗ್ಗೆ ಕರ್ನಾಟಕ ಅಸಮಾಧಾನ ವ್ಯಕ್ತಪಡಿಸಿತ್ತು. ನೀರು ಬಿಡುಗಡೆ ಅಸಾಧ್ಯ ಎಂದೂ ತಿಳಿಸಿತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಒಟ್ಟಾಗಿ ಕೋರ್ಟ್ ನಿರ್ದೇಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತು ಕೋರ್ಟ್ ಆದೇಶ ಧಿಕ್ಕರಿಸಲು ನಿರ್ಧರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ, ನೀರು ಬಿಡುಗಡೆ ಮಾಡದಿರುವ ನಿರ್ಧಾರಕ್ಕೆ ಬೆಂಬಲ ಕೋರಿದ್ದರು. ಆದರೆ ಸರ್ವಪಕ್ಷಗಳ ಸಭೆಗೆ ಬಿಜೆಪಿ ಹಾಜರಾಗಲೇ ಇಲ್ಲ. ಇನ್ನು ಸಂಪುಟ ಸಭೆಯಲ್ಲಿ ಕಾನೂನು ತಜ್ಞರು ಭಾಗವಹಿಸಿದ್ದರು. ಒಂದು ವೇಳೆ ನೀರು ಬಿಡುಗಡೆ ಮಾಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದಿದ್ದರು.['ನೀರು ಬಿಡುವುದು ಭಾರಿ ಕಷ್ಟ' ದೆಹಲಿಯಲ್ಲಿ ಸಿದ್ದರಾಮಯ್ಯ ಹೇಳಿಕೆ]
ಆದರೆ, ಮತ್ತೆ ಕೋರ್ಟ್ ಗೆ ಹೋಗಲು ಹಾಗೂ ಕಾವೇರಿ ನೀರು ಬಿಡುಗಡೆ ಮಾಡದಿರಲು ಶಾಸಕಾಂಗದ ದಾರಿ ಅನುಸರಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಇದೇ ವಿಚಾರವಾಗಿ ಮುಂದಿನ ಮಂಗಳವಾರ ಮಧ್ಯಾಹ್ನ 2ಕ್ಕೆ ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆ ನಡೆಸಲಿದೆ.