ಬಜೆಟ್ ಬಳಿಕ ಸಂಪುಟ ವಿಸ್ತರಣೆ, ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ!
ಬೆಂಗಳೂರು, ಜೂನ್ 27 : ಕರ್ನಾಟಕದ ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ. ಕಾಂಗ್ರೆಸ್ನ 5 ಶಾಸಕರು ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಜೆಡಿಎಸ್ನ 10, ಕಾಂಗ್ರೆಸ್ನ 15, ಬಿಎಸ್ಪಿ ಮತ್ತು ಕೆಪಿಜೆಪಿಯ ಒಬ್ಬರು ಶಾಸಕರು ಕುಮಾರಸ್ವಾಮಿ ಸಂಪುಟ ಸೇರಿದ್ದಾರೆ. ಕಾಂಗ್ರೆಸ್ನ ಇನ್ನೂ 6 ಶಾಸಕರು ಸಂಪುಟ ಸೇರಬಹುದಾಗಿದೆ.
ಜಿಟಿ ದೇವೇಗೌಡರೇ ಕರ್ನಾಟಕದ ಉನ್ನತ ಶಿಕ್ಷಣ ಸಚಿವರು!
ಸಂಪುಟ ವಿಸ್ತರಣೆ ಸಮಯದಲ್ಲಿ ಸಚಿವ ಸ್ಥಾನ ವಂಚಿತರಾದ ಶಾಸಕರು ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆ ಇದೆ. ಜೆಡಿಎಸ್ನ ಸಹ ಒಬ್ಬರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ಸಚಿವ ಸ್ಥಾನ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಲಾಗುತ್ತಿದೆಯಾ?
ನಾಲ್ಕು ಅಥವ ಐದು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಬಜೆಟ್ ಅಧಿವೇಶನದ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲಿದ್ದಾರೆ. ಸಂಪುಟ ಸೇರುವ ಶಾಸಕರು ಯಾರು? ಇಲ್ಲಿದೆ ಪಟ್ಟಿ...
ಲಿಂಗಾಯತ ಸಮುದಾಯಕ್ಕೆ ಆದ್ಯತೆ
ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲು ಮಾಜಿ ಸಚಿವ, ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ್ ಭಾರೀ ಪ್ರಯತ್ನ ನಡೆಸಿದ್ದರು. ಆದರೆ, ಕೊನೆಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಇದರಿಂದ ಅವರು ಮುನಿಸಿಕೊಂಡಿದ್ದಾರೆ. ಈ ಬಾರಿ ಸಂಪುಟ ವಿಸ್ತರಣೆ ಮಾಡಿದಾಗ ಎಂ.ಬಿ.ಪಾಟೀಲ್ ಅವರು ಸಂಪುಟ ಸೇರಲಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವೀ ನಾಯಕರಾಗಿರುವ ಎಂ.ಬಿ.ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಂಡು ಉತ್ತರ ಕರ್ನಾಟಕ ಕಡೆ ಹೆಚ್ಚಿನ ಗಮನ ನೀಡುವುದು ಕಾಂಗ್ರೆಸ್ ತಂತ್ರವಾಗಿದೆ.
ಬಿ.ಕೆ.ಸಂಗಮೇಶ್ವರ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. 2018ರ ಚುನಾವಣೆಯಲ್ಲಿ ಶಿವಮೊಗ್ಗದ 7 ಕ್ಷೇತ್ರಗಳ ಪೈಕಿ ಗೆಲುವು ಸಾಧಿಸಿರುವುದು ಸಂಗಮೇಶ್ವರ ಅವರು ಮಾತ್ರ. ಜೆಡಿಎಸ್ನ ಯಾವುದೇ ಅಭ್ಯರ್ಥಿಗಳು ಸಹ ಜಯಗಳಿಸಿಲ್ಲ. ಬಿ.ಕೆ.ಸಂಗಮೇಶ್ವರ ಅವರು ಸಹ ಲಿಂಗಾಯತ ಸಮಯದಾಯಕ್ಕೆ ಸೇರಿದವರಾಗಿದ್ದಾರೆ. ಇದುವರೆಗೂ ಭದ್ರಾವತಿಯ ಶಾಸಕರು ಯಾರೂ ಸಚಿವರಾಗಿಲ್ಲ. ಬಿ.ಕೆ.ಸಂಗಮೇಶ್ವರ ಅವರು ಸಚಿವರಾದರೆ ದಾಖಲೆ ನಿರ್ಮಾಣವಾಗಲಿದೆ.
ರಾಮಲಿಂಗಾ ರೆಡ್ಡಿ
ಬೆಂಗಳೂರಿನ ಬಿ.ಟಿ.ಎಂ.ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರಲಿದ್ದಾರೆ. ಪುತ್ರಿಯನ್ನು ಜಯನಗರ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದು ಕಾಂಗ್ರೆಸ್ ಪಕ್ಷದ ಬಲವನ್ನು ಅವರು ಹೆಚ್ಚಿಸಿದ್ದಾರೆ. ಆದ್ದರಿಂದ, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿಹಬ್ಬಿದೆ.
ಮತ್ತೊಂದು ಕಡೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರು ಸಂಪುಟ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬೆಂಗಳೂರು ನಗರದಿಂದ ರಾಮಲಿಂಗಾ ರೆಡ್ಡಿ ಅಥವ ಎಂ.ಕೃಷ್ಣಪ್ಪ ಅವರ ಪೈಕಿ ಒಬ್ಬರು ಸಂಪುಟ ಸೇರುವ ಸಾಧ್ಯತೆ ಇದೆ.
ಸಂಪುಟ ಸೇರುವ ಶಾಸಕರ ಪಟ್ಟಿ
ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಎಸ್.ಶಿವಳ್ಳಿ ಅವರು ಸಹ ಕುರುಬ ಸಮುದಾಯದ ಕೋಟಾದಲ್ಲಿ ಸಂಪುಟ ಸೇರುವ ಸಾಧ್ಯತೆ ಇದೆ. ಎಸ್ಟಿ ಸಮುದಾಯದ ಕೋಟಾದಡಿ ಸಂಡೂರು ಶಾಸಕ ಈ.ತುಕಾರಂ ಅವರು ಸಂಪುಟ ಸೇರಲಿದ್ದಾರೆ ಎಂದು ತಿಳಿದುಬಂದಿದೆ.