ಬಿಜೆಪಿಯಲ್ಲಿ ಎಸ್.ಎಂ.ಕೃಷ್ಣ ಮೂಲೆಗುಂಪು? ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರಿಲ್ಲ
Recommended Video

ಮಂಡ್ಯ, ಅಕ್ಟೋಬರ್ 25: ಕಾಂಗ್ರೆಸ್ ಪಕ್ಷ ತಮ್ಮನ್ನು ಮೂಲೆಗುಂಪು ಮಾಡಿದೆ ಎಂದು ಬಿಜೆಪಿ ಸೇರಿದ್ದ ಹಿರಿಯ ರಾಜಕೀಯ ಮುತ್ಸದಿ ಎಸ್.ಎಂ.ಕೃಷ್ಣ ಅವರು ಬಿಜೆಪಿಯಲ್ಲೂ ಮೂಲೆಯಲ್ಲೇ ಇದ್ದಾರೆ.
ಹೌದು, ಬಿಜೆಪಿಯಲ್ಲಿ ಎಸ್.ಎಂ.ಕೃಷ್ಣ ಅವರು ನಗಣ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಬಿಡುಗಡೆ ಆಗಿರುವ ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರ ಹೆಸರೇ ಇಲ್ಲ.
ಮಂಡ್ಯದಲ್ಲಿ ಲೋಕಸಭೆ ಉಪಚುನಾವಣೆ ನಡೆಯುತ್ತಿದೆ. ಎಸ್.ಎಂ.ಕೃಷ್ಣ ಅವರು ಮಂಡ್ಯದಲ್ಲಿ ದಶಕಗಳ ಕಾಲ ರಾಜಕೀಯ ಮಾಡಿದ್ದಾರೆ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ ಆದರೂ ಸಹ ಅವರನ್ನು ಪ್ರಚಾರಕರ ಪಟ್ಟಿಯಿಂದ ದೂರ ಇಟ್ಟಿರುವುದು ಕೃಷ್ಣ ಅವರಿಗೆ ಬಿಜೆಪಿಯಲ್ಲಿ ಇರುವ ಸ್ಥಾನ-ಮಾನದ ಕುರಿತು ಸೂಚಿಸುತ್ತಿದೆ.
ಎಸ್.ಎಂ.ಕೃಷ್ಣ ಅವರು ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ವರೆಗೆ ಎರಡು ಬೃಹತ್ ಸಮಾವೇಶದಲ್ಲಿ ಮಾತ್ರವೇ ಅವರು ಕಾಣಿಸಿಕೊಂಡಿದ್ದಾರೆ. ತಮ್ಮ ತವರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳಿಗೂ ಅವರು ಕಾಣಿಸಿಕೊಂಡಿಲ್ಲ.

ವಿಧಾನಸಭೆ ಚುನಾವಣೆಗೆ ಪ್ರಚಾರ
ಇದೇ ವರ್ಷದ ಆರಂಭದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಎಸ್.ಎಂ.ಕೃಷ್ಣ ಪ್ರಚಾರ ಮಾಡಿದ್ದರು. ಪ್ರಚಾರ ಆರಂಭವಾದ ಬಹು ದಿನಗಳ ನಂತರ ಅವರು ಪ್ರಚಾರಕ್ಕೆ ಬಂದಿದ್ದರು. ಹೆಬ್ಬಾಳ ಸೇರಿ ಕೆಲವು ಕಡೆಗಳಲ್ಲಿ ಮಾತ್ರವೇ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು.

ಮಂಡ್ಯದಲ್ಲೇ ಚುನಾವಣೆ ಇದ್ದರೂ ಕೃಷ್ಣ ಪ್ರಚಾರ ಇಲ್ಲ
ಎಸ್.ಎಂ.ಕೃಷ್ಣ ಅವರು ಮಂಡ್ಯದಲ್ಲೇ ದಶಕಗಳ ಕಾಲ ರಾಜಕೀಯ ಮಾಡಿದವರು. ಅಪಾರ ಸಂಖ್ಯೆಯಲ್ಲಿ ಬೆಂಬಲಿಗರನ್ನು ಕೃಷ್ಣ ಅವರು ಮಂಡ್ಯದಲ್ಲಿ ಹೊಂದಿದ್ದಾರೆ. ಮಂಡ್ಯದಲ್ಲಿ ಲೋಕಸಭೆ ಉಪಚುನಾವಣೆ ನಡೆಯುತ್ತಿದ್ದರೂ ಸಹ ಬಿಜೆಪಿಯು ಕೃಷ್ಣ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ನಿರ್ಲಕ್ಷ್ಯ ತೋರಿರುವುದು ನೋಡಿದರೆ ಕೃಷ್ಣ ಅವರು ಬಿಜೆಪಿಯಲ್ಲಿ ನಗಣ್ಯರಾಗಿರುವುದು ಸ್ಪಷ್ಟವಾಗುತ್ತದೆ.

ಎಸ್.ಎಂ.ಕೃಷ್ಣ ಮಗಳಿಗೆ ಕಾಂಗ್ರೆಸ್ ಟಿಕೆಟ್!
ಎಸ್.ಕೃಷ್ಣ ಮಗಳು ಶಾಂಭವಿ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಕೃಷ್ಣಾ ಅವರೇ ತಮ್ಮ ಪ್ರಭಾವ ಬಳಸಿ ಮಗಳಿಗೆ ಟಿಕೆಟ್ ಕೊಡಿಸುವ ಯತ್ನ ಮಾಡುತಿದ್ದಾರೆ ಎಂಬ ಸುದ್ದಿ ಇದೆ. ಹಾಗಾಗಿ ಬಿಜೆಪಿಯು ಕೃಷ್ಣ ಅವರಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ ಹಾಗಾಗಿ ಅವರನ್ನು ಪ್ರಚಾರಕ್ಕೆ ಕರೆದಿಲ್ಲ ಎಂಬ ಸುದ್ದಿಯೂ ಇದೆ.

ಆರೋಗ್ಯದ ಸಮಸ್ಯೆ
ಎಸ್.ಎಂ.ಕೃಷ್ಣ ಅವರಿಗೆ ವಯಸ್ಸಾಗಿದೆ ಹಾಗಾಗಿಯೂ ಬಿಜೆಪಿ ಅವರನ್ನು ಪ್ರಚಾರ ಕಾರ್ಯಕ್ರಮಕ್ಕೆ ಕರೆಯದೇ ಇರುವ ಸಾಧ್ಯತೆ ಇದೆ. ಎಸ್.ಎಂ.ಕೃಷ್ಣ ಅವರಿಗೆ ಈಗ 86 ವರ್ಷ ವಯಸ್ಸು. ವಯೋಸಹಜ ಖಾಯಿಲೆಯಿಂದ ಅವರು ಬಳಲುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

ಅನಂತ್ಕುಮಾರ್ ಹೆಗ್ಡೆ ಹೆಸರೂ ಇಲ್ಲ
ಬಿಜೆಪಿ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಪ್ಪಟ ಹಿಂದುತ್ವವಾದಿ ಬಿಜೆಪಿ ಕೇಂದ್ರ ಸಚಿವ ಅನಂತ್ಕುಮಾರ್ ಹೆಗ್ಡೆ ಹೆಸರೂ ಸಹ ಇಲ್ಲ. ಅವರು ಪ್ರಚಾರಕ್ಕೆ ಬಂದರೆ ದಲಿತ, ಮುಸ್ಲಿಂ ಮತಗಳು ಪಕ್ಷಕ್ಕೆ ಧಕ್ಕುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಪ್ರಚಾರಕರ ಪಟ್ಟಿಯಿಂದ ಹೊರಗಿಡಲಾಗಿದೆ.

ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ?
ಬಿಜೆಪಿ ನಿನ್ನೆ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಒಟ್ಟು 38 ಇದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಡಿ.ವಿ.ಸದಾನಂದಗೌಡ, ಪಿ. ಮುರಳೀಧರ್ ರಾವ್, ಪುರಂದೇಶ್ವರಿ, ಬಿ.ಎಲ್. ಸಂತೋಷ್, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಸೇರಿ ಹಲವು ಕೇಂದ್ರ ಸಚಿವರು, ಪರಿಷತ್ ಸದಸ್ಯರುಗಳು ಪಟ್ಟಿಯಲ್ಲಿ ಇದ್ದಾರೆ.












Click it and Unblock the Notifications