Karnataka Budget 2023: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ದಿಗೆ ಬಜೆಟ್ನಲ್ಲಿ ಸಿಕ್ಕಿದ್ದೇನು?
ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 14ನೇ ಬಜೆಟ್ ಅನ್ನು ಮಂಡಿಸಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ ಬಜೆಟ್ ನಲ್ಲಿ ಹಲವು ಯೋಜನೆಗಳಿಗೆ ಅನುದಾನವನ್ನ ಮೀಸಲಿಟ್ಟಿದೆ.
ಭಾರತ ಸರ್ಕಾರವು ಜಲಜೀವನ್ ಮಿಷನ್ ಯೋಜನೆಯನ್ನು ತನ್ನ ಮಹತ್ವಾಕಾಂಕ್ಷಿ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದ್ದರೂ, ಇದರಲ್ಲಿ ರಾಜ್ಯಗಳ ಪಾತ್ರ ಹೆಚ್ಚಿನದಾಗಿದೆ. ಈ ಯೋಜನೆಗೆ ನಿಗದಿಪಡಿಸಿದ 73,434 ಕೋಟಿ ರೂ. ಮೊತ್ತದಲ್ಲಿ ಕೇಂದ್ರದ ಪಾಲು 33,248 ಕೋಟಿ ರೂ.ಗಳಷ್ಟಿದ್ದರೆ, ರಾಜ್ಯ ಸರ್ಕಾರದ ಪಾಲು 40,186 ಕೋಟಿ ರೂ. ಇರಲಿದೆ. ಅಂದರೆ, ಕೇಂದ್ರದ ಪಾಲು ಶೇ.45 ರಷ್ಟು ಹಾಗೂ ರಾಜ್ಯ ಸರ್ಕಾರದ ಪಾಲು ಶೇ.55 ರಷ್ಟಾಗುತ್ತದೆ. ಪ್ರತಿ ಮನೆಗೆ ನಳಸಂಪರ್ಕ ಕೊಡುವ ಈ ಯೋಜನೆಯಲ್ಲಿ ರಾಜ್ಯದ ಪಾಲೇ ಹೆಚ್ಚಿರುತ್ತದೆ.
ಜಲ್ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಸುಧಾರಣೆ ತರುವ ಅವಶ್ಯಕತೆಯಿರುತ್ತದೆ. ರಾಜ್ಯವ್ಯಾಪಿ ನಳಸಂಪರ್ಕ ಪೂರೈಸಲು ಪ್ರಗತಿಯಲ್ಲಿರುವ ಕಾಮಗಾರಿಗಳ ಗುಣಮಟ್ಟ ಮತ್ತಿತರ ಕೆಲವು ಅಂಶಗಳ ಕುರಿತು ಸಾರ್ವಜನಿಕರ ದೂರುಗಳಿವೆ. ಅವುಗಳ ಕುರಿತು ಒಂದು ಪ್ರತಿಷ್ಠಿತ ಬಾಹ್ಯ ಸಂಸ್ಥೆಯ (Third Party Inspection Agency) ಮೂಲಕ ವಿಸ್ತೃತ ತಪಾಸಣೆಯನ್ನು ನಡೆಸಿ, ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುವುದು.

ಯೋಜನೆಯ ಅನುಷ್ಠಾನದಲ್ಲಿ ತಪ್ಪುಗಳು / ಲೋಪದೋಷಗಳು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಸುಸ್ಥಿರ ಜಲಮೂಲ ಆಧರಿಸಿ 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಮೂಲಕ 25 ಲಕ್ಷ ಮನೆಗಳಿಗೆ ನಳಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಅಂದಿನ ಯುಪಿಎ ಸರ್ಕಾರ ಜಾರಿಗೊಳಿಸಿದ ವಿಶ್ವದ ಅತಿ ದೊಡ್ಡ ಉದ್ಯೋಗ ಸೃಜನೆ ಕಾರ್ಯಕ್ರಮವಾಗಿದೆ. ಆದರೆ ಕೇಂದ್ರ ಸರ್ಕಾರವು ಈ ಯೋಜನೆಗೆ ಅನುದಾನ ಕಡಿತ ಮಾಡಿರುವುದಲ್ಲದೆ, ಕೂಲಿ ವೆಚ್ಚ ಪಾವತಿಯಲ್ಲಿ ವಿಳಂಬ ಮಾಡುವ ಮೂಲಕ ಬಡವರ ವಿರೋಧಿ ಧೋರಣೆ ತಳೆದಿದೆ. ಇಲ್ಲಿಯವರೆಗೆ 1,258 ಕೋಟಿ ರೂ. ಸಾಮಗ್ರಿ ವೆಚ್ಚ ಹಾಗೂ 296 ಕೋಟಿ ರೂ. ಕೂಲಿ ಕಾರ್ಮಿಕರಿಗೆ ಪಾವತಿಸುವ ವೆಚ್ಚ ಸೇರಿ ಒಟ್ಟಾರೆ 1,554 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಿಡುಗಡೆಗೆ ಬಾಕಿ ಇದೆ. ಅಂದರೆ, ಒಟ್ಟು 8.63 ಲಕ್ಷ ಕಾರ್ಮಿಕರ 81.50 ಲಕ್ಷ ಮಾನವ ದಿನಗಳ ಕೂಲಿ ಪಾವತಿಯಲ್ಲಿ ವಿಳಂಬವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೂಲಿ ಮತ್ತು ಸಾಮಗ್ರಿ ವೆಚ್ಚವನ್ನು ಸಕಾಲದಲ್ಲಿ ಬಿಡುಗಡೆ ಮಾಡುವ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಪ್ರಸ್ತುತ ವರ್ಷದಿಂದ ನಮ್ಮ ಸರ್ಕಾರವು ನರೇಗಾ ಯೋಜನೆಯನ್ನು ಮರುಕಲ್ಪನೆಯೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಿದೆ.
ನರೇಗಾ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 5,000 ಗೋಮಾಳ ಪ್ರದೇಶಗಳು, 50,000 ಎಕರೆ ಹುಲ್ಲುಗಾವಲು ಪ್ರದೇಶಗಳು, ಎರಡು ಲಕ್ಷ ಬರ ಪರಿಹಾರ ಕಾಮಗಾರಿಗಳು, 81,000 ಪ್ರವಾಹ ನಿಯಂತ್ರಣ ಕಾಮಗಾರಿಗಳು ಹಾಗೂ 4,268 ಭೂ ಕುಸಿತ ತಡೆ ಕಾಮಗಾರಿಗಳು ಮತ್ತು 27,903 ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ʻಶಾಂತಿಧಾಮʼ ಗಳನ್ನಾಗಿ ಅಭಿವೃದ್ದಿಪಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸಮಗ್ರ ಶಾಲಾ ಅಭಿವೃದ್ಧಿಯಡಿ 5,000 ಶಾಲಾ ಆವರಣಗಳನ್ನು ʻವಿದ್ಯಾಧಾಮʼ ಗಳನ್ನಾಗಿ ಉನ್ನತೀಕರಿಸಲಾಗುವುದು. ಇದಲ್ಲದೇ, 750 ಗ್ರಾಮೀಣ ಸಂತೆಗಳನ್ನು ಹಾಗೂ 27,000 ಬೋರ್ವೆಲ್ ರೀಚಾರ್ಜ್ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು.

ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ʻಅರಿವು ಕೇಂದ್ರಗಳುʼ ಎಂದು ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ನೀಡಲಾಗುವುದು. ಜೊತೆಗೆ, ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ವಾರಾಂತ್ಯದಲ್ಲಿಯೂ ತೆರೆಯಲಾಗುವುದು.
ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷತೆಗಾಗಿ ʻಕೂಸಿನ ಮನೆʼ ಎಂಬ ಹೆಸರಿನಲ್ಲಿ 4,000 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಸಲಾಗುವುದು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಪ್ರತಿ ತಾಲ್ಲೂಕಿನಲ್ಲಿ ಒಬ್ಬ ನುರಿತ ಯುವ ಪದವೀಧರರನ್ನು 24 ತಿಂಗಳುಗಳ ಅವಧಿಗೆ ʻಮುಖ್ಯಮಂತ್ರಿಗಳ ಫೆಲೋಶಿಪ್ʼ ಗೆ ಆಯ್ಕೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕಾಗಿ 10 ಕೋಟಿ ರೂ. ಗಳನ್ನು ಒದಗಿಸಲಾಗುವುದು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳನ್ನು ತಲಾ 25 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಹಾಗೂ ಇವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ 100 ಕೋಟಿ ರೂ. ಒದಗಿಸಲಾಗುವುದು.
ಗ್ರಾಮೀಣ ಪ್ರದೇಶಗಳಲ್ಲಿ ಒಣ ತ್ಯಾಜ್ಯ ವಿಲೇವಾರಿಯಲ್ಲಿ ನಿರಂತರತೆಯನ್ನು ಕಾಪಾಡಲು ಮತ್ತು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಸಲುವಾಗಿ 27 ಜಿಲ್ಲೆಗಳಲ್ಲಿ ತಲಾ ಒಂದು Material Recovery Facility ಯನ್ನು ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 22 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್''












Click it and Unblock the Notifications