ಕರ್ನಾಟಕ ಬಜೆಟ್ 2022: ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ಘೋಷಣೆ
ಬೆಂಗಳೂರು, ಮಾರ್ಚ್ 04: 2022-23ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಘೋಷಣೆ ಮಾಡಿದ್ದಾರೆ.
ರಾಜ್ಯಾದ್ಯಂತ ಹಲವು ಚಳವಳಿಗೆ ಕಾರಣವಾಗಿರುವ ಮೇಕೆದಾಡು ಯೋಜನೆಗೆ ರಾಜ್ಯ ಸರ್ಕಾರವು ಬರೋಬ್ಬರಿ 1 ಸಾವಿರ ಕೋಟಿ ರೂ. ಅನ್ನು ಮೀಸಲಿಟ್ಟಿದೆ.
ಕರ್ನಾಟಕ ಬಜೆಟ್: ಸಿಎಂ ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು ಯಾವುದು?
ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ., ಕೃಷ್ಣ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂ. ಹಾಗೂ ಕಳಸಾ ಬಂಡೂರಿ ಯೋಜನೆಗೆ ಸಾವಿರ ಕೋಟಿ ರೂ. ನಿಯೋಜನೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ 2,65,719.92 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಗಾತ್ರ ಕಳೆದ ಬಾರಿಗಿಂತ ಶೇಕಡಾ 7.7ರಷ್ಟು ಹೆಚ್ಚಳವಾಗಿದೆ. 'ಜಲ ಜೀವನ್ ಮಿಷನ್' ಅಡಿ 25 ಲಕ್ಷ ಮನೆಗೆ ನಲ್ಲಿ ನೀರು ನೀಡಲಾಗುತ್ತದೆ. 2022-23ರಲ್ಲಿ 7,000 ಕೋಟಿ ರೂ. ವೆಚ್ಚದಲ್ಲಿ ನಲ್ಲಿ ನೀರು ನೀಡಲಾಗುವುದು. ರಾಜ್ಯಾದ್ಯಂತ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕಕ್ಕೆ ಯೋಜನೆ ಮಾಡಲಾಗಿದೆ.
ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್ನಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಬೆಂಗಳೂರು ಮೌಲ ಸೌಕರ್ಯಕ್ಕೆ 3 ವರ್ಷದಲ್ಲಿ 6,000 ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿದೆ.
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ ಸೇರಿ ನೀರಾವರಿ ಯೋಜನೆಗಳಿಗೆ ಬಜೆಟ್ನಲ್ಲಿ ಒಟ್ಟು 14,700 ಕೋಟಿ ರೂ. ಘೋಷಣೆ ಮಾಡಲಾಗಿದೆ.
* ಕೇಂದ್ರ ಸರ್ಕಾರವು PMKSY-AIBP ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2ರಲ್ಲಿನ ಬೂದಿಹಾಳ, ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9ಎ) ಕಾಲುವೆ ಯೋಜನೆ ಅನುಷ್ಠಾನಕ್ಕೆ ಕ್ರಮ.
* ಕಾಳಿ ನದಿಯಿಂದ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ.
* ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್ಲ್ಯಾಂಡ್ ಯೋಜನೆ ಅನುಷ್ಠಾನ. ಪ್ರಸ್ತುತ ಉತ್ತರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಅನುಷ್ಠಾನ.
* ಪ್ರಗತಿಯಲ್ಲಿರುವ 14 ನೀರಾವತಿ ಯೋಜನೆ ಪೂರ್ಣಗೊಳಿಸಿ 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.
* 2021-22ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷ ಸಿದ್ಧಪಡಿಸಲು ಕ್ರಮ.
* ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ, ಇದರಲ್ಲಿ ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ರೂ. ಅನುದಾನ.