ಕರ್ನಾಟಕ ಬಜೆಟ್; ಬಸವರಾಜ ಬೊಮ್ಮಾಯಿಗೆ ಯಡಿಯೂರಪ್ಪ ಪತ್ರ
ಬೆಂಗಳೂರು, ಮಾರ್ಚ್ 03; ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಶುಕ್ರವಾರ 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ತಮ್ಮ ಚೊಚ್ಚಲ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ ಯಾವ ಕೊಡುಗೆ ನೀಡಲಿದ್ದಾರೆ? ಎಂದು ಕಾದು ನೋಡಬೇಕು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಮನವಿ ಮೇರೆಗೆ ಅಧಿಕಾರಿಗಳ ಸಮಿತಿ ರಚಿಸಲು ಬಜೆಟ್ನಲ್ಲಿ ಘೋಷಣೆ ಮಾಡಲು ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು 'ಅಧಿಕಾರಿಗಳ ವೇತನ ಸಮಿತಿ' ರಚಿಸುವ ಬಗ್ಗೆ ಎಂದು ವಿಷಯ ಉಲ್ಲೇಖಿಸಿ ಪತ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ರಾಜ್ಯದಲ್ಲಿ ಶ್ರೀ ಸಾಮಾನ್ಯರ, ರೈತರ, ಕೃಷಿಕರ, ಕೂಲಿ ಕಾರ್ಮಿಕರ, ಅಭ್ಯುದಯಕ್ಕಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಸರ್ಕಾರಕ್ಕೆ ಉತ್ತಮ ಹೆಸರು ತರುವಲ್ಲಿ ಮಹತ್ತರ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ.
ಕೋವಿಡ್ 19 ಸಂದರ್ಭದಲ್ಲಿ ಸರ್ಕಾರಿ ನೌಕರರು ಜೀವದ ಹಂಗು ತೊರೆದು ದಕ್ಷತೆಯಿಂದ ಕೆಲಸ ನಿರ್ವಹಿಸಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಹಾಗೂ ಸೋಂಕಿತರ ಚಿಕಿತ್ಸೆ ಹಾಗೂ ನಿರ್ವಹಣೆ ಮಾಡುವಲ್ಲಿ ಅನನ್ಯ ಕೆಲಸ ನಿರ್ವಹಣೆ ಮಾಡಿರುತ್ತಾರೆ. ಇದರಿಂದಾಗಿ ರಾಜ್ಯಕ್ಕೆ ಉತ್ತಮ ಹೆಸರು ಬಂದಿರುತ್ತದೆ.
ರಾಜ್ಯ ಸರ್ಕಾರವು ಪ್ರತಿ 5 ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸುವ ಸಂಪ್ರದಾಯವನ್ನು ಹೊಂದಿರುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಸಹ 5ನೇ ವೇತನ ಆಯೋಗವು ನೀಡಿದ ಶಿಫಾರಸ್ಸು ಯಥಾವತ್ತಾಗಿ ಜಾರಿಗೊಳಿಸಿರುವುದನ್ನು ಇಲ್ಲಿ ಸ್ಮರಿಸುತ್ತಾ, ಇದಲ್ಲದೇ ಸರ್ಕಾರಿ ನೌಕರರ ಪರವಾದ ಆರೋಗ್ಯ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸಿರುತ್ತೇನೆ.
ಅಧ್ಯಕ್ಷರ ಪತ್ರದ ಉಲ್ಲೇಖ; ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರು ಉಲ್ಲೇಖಿತ ಮನವಿ ಸಲ್ಲಿಸಿ ಕೇಂದ್ರ ಸರ್ಕಾರವು 2016 ರಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಆಧರಿಸಿ ತನ್ನ ನೌಕರರ ವೇತನ ಹಾಗೂ ಭತ್ಯಗಳನ್ನು ಷರಿಷ್ಕರಿಸಿರುತ್ತದೆ.
ರಾಷ್ಟ್ರದಲ್ಲಿರುವ ಒಟ್ಟು 28 ರಾಜ್ಯಗಳಲ್ಲಿ ಈಗಾಗಲೇ 25 ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಪದ್ಧತಿ ಜಾರಿಯಲ್ಲಿದ್ದು, ರಾಷ್ಟ್ರದ ಜಿ. ಎಸ್. ಡಿ. ಪಿ. ಅವಲೋಕಿಸಿದಲ್ಲಿ ರಾಜ್ಯ ಸರ್ಕಾರವು ಅಭಿವೃದ್ಧಿ, ಪ್ರಗತಿ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ರಾಷ್ಟ್ರದಲ್ಲೇ 6ನೇ ಸ್ಥಾನದಲ್ಲಿರುತ್ತದೆಯೆಂದು ಈ ಪ್ರಗತಿಗೆ ರಾಜ್ಯ ಸರ್ಕಾರಿ ನೌಕರರ ಸೇವೆ ಹಾಗೂ ಪಾತ್ರ ಮುಖ್ಯವಾಗಿದೆ ಎಂದು ವಿವರಿಸಿ ಕೇಂದ್ರ ಮಾದರಿಯ ವೇತನವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಸಹ ವಿಸ್ತರಿಸುವಂತೆ ಕೋರಿ 'ಅಧಿಕಾರಿಗಳ ವೇತನ ಸಮಿತಿ'ಯನ್ನು ರಚಿಸಲು ವಿನಂತಿಸಿರುತ್ತಾರೆ.
ಆದುದರಿಂದ ಇತರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಹ ಕೇಂದ್ರ ಮಾದರಿಯ ವೇತನವನ್ನು ನೀಡುವ ಅಗತ್ಯವಿದ್ದು, ಪರಾಮರ್ಶೆ ಮತ್ತು ಅನುಷ್ಠಾನಕ್ಕಾಗಿ 'ಅಧಿಕಾರಿಗಳ ವೇತನ ಸಮಿತಿ' ರಚಿಸಲು 2022-23ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲು ತಮ್ಮಲ್ಲಿ ಕೋರುತ್ತೇನೆ.
ಈಗಾಗಲೇ ಸರ್ಕಾರಿ ನೌಕರರು ದಿನಾಂಕ 1/4/2006ರಿಂದ ನೇಮಕಗೊಂಡ ಎಲ್ಲ ನೌಕರರಿಗೆ ಎನ್. ಪಿ. ಎಸ್ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.
ರಾಜ್ಯ 7ನೇ ವೇತನ ಆಯೋಗವನ್ನು ಹೈಕೋರ್ಟ್ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ರಚನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
2ನೇ ಆಡಳಿತ ಸುಧಾರಣೆ ಆಯೋಗವು ಹುದ್ದೆಗಳ ಕಡಿತವನ್ನು/ ಅನುಕಂಪ-ಆಧಾರಿತ ಉದ್ಯೋಗವನ್ನು ರದ್ದುಗೊಳಿಸಬೇಕೆಂಬ ಅವೈಜ್ಞಾನಿಕ ಶಿಫಾರಸ್ಸನ್ನು ತಿರಸ್ಕರಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.












Click it and Unblock the Notifications