ಯಡಿಯೂರಪ್ಪಗೆ ಪೊಲೀಸರು ಇಟ್ಟ 25 ಬೇಡಿಕೆಗಳು
ಬೆಂಗಳೂರು, ಜನವರಿ 23 : ಕರ್ನಾಟಕದಲ್ಲಿ 2020-21ರ ಬಜೆಟ್ ಮಂಡನೆಗೆ ತಯಾರಿ ಆರಂಭವಾಗಿದೆ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾರ್ಚ್ 5ರಂದು ಬಜೆಟ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಮಂಡನೆ ತಯಾರಿಗೂ ಮುನ್ನ ಕರ್ನಾಟಕದ ಪೊಲೀಸರು ಹಣಕಾಸು ಸಚಿವರ ಮುಂದೆ 25 ಬೇಡಿಕೆಗಳನ್ನು ಇಟ್ಟಿದ್ದಾರೆ. ಕಳಕಳಿಯಿಂದ ಸಿಬ್ಬಂದಿಗಳ ಪರವಾಗಿ ಬೇಡಿಕೆ ಸಲ್ಲಿಸುತ್ತಿದ್ದು, ಇದನ್ನು ಈಡೇರಿಸಬೇಕು ಎಂದು ವಿನಯಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ದಾವಣಗೆರೆ, ಹಾವೇರಿ, ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳ ಹಾಗೂ ಹುಬ್ಬಳ್ಳಿ-ಧಾರವಾಡ ನಗರದ, ಬೆಳಗಾವಿ ನಗರದ ಹಾಗೂ ಮೈಸೂರು ನಗರದ ನೊಂದ ಸುಮಾರು 95 ರಿಂದ 98 ಸಾವಿರ ಎಎಸ್ಐ/ಹೆಚ್ಸಿ/ಪಿಸಿ ಮತ್ತು ಪೊಲೀಸ್ ಸಿಬ್ಭಂದಿಗಳ ಪರವಾಗಿ ಮನವಿ ಸಲ್ಲಿಸಲಾಗಿದೆ.
ಮನವಿ ಪತ್ರವನ್ನು ಪೂರ್ತಿಯಾಗಿ ಸುಮಾರು 40 ರಿಂದ 45 ನಿಮಿಷಗಳ ಕಾಲ ಅತ್ಯಂತ ಸಮಾಧಾನದಿಂದ, ಶಾಂತಚಿತ್ತದಿಂದ ತಾವೇ ಖುದ್ದಾಗಿ ಓದಲು ಹಣಕಾಸು ಸಚಿವರೂ ಆಗಿರುವ ಬಿ. ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಪೊಲೀಸರ ಬೇಡಿಕೆಗಳು ಇಲ್ಲಿವೆ....

ರಾಘವೇಂದ್ರ ಔರಾದ್ಕರ್ ವರದಿ
ಕನಿಷ್ಠ 5000 ಕೋಟಿ ರೂಪಾಯಿಗಳನ್ನು 2020-21ನೇ ಸಾಲಿನ ಬಜೆಟ್ನಲ್ಲಿ ರಾಘವೇಂದ್ರ ಔರಾದ್ಕರ್ ನೀಡಿರುವ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಲಾಗಿದೆ.
ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದಾಗ ನೀಡಿದ ಅಶ್ವಾಸನೆಯಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿರುವ ನೂತನ ಪಿಂಚಣಿ ಯೋಜನೆಯನ್ನು ಬಜೆಟ್ನಲ್ಲಿ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮೊದಲಿನಂತೆ ಸಂಪೂರ್ಣವಾಗಿ ಜಾರಿಗೊಳಿಸಬೇಕು.

ವೇತನ ಹೆಚ್ಚಳದ ಬೇಡಿಕೆ
ರಾಘವೇಂದ್ರ ಔರಾದ್ಕರ್ ವರದಿ ಜಾರಿಯಿಂದ ಪೊಲೀಸರ ವೇತನದಲ್ಲಿ ಶ್ರೇಣಿಗಳು ಮಾತ್ರ ಬದಲಾವಣೆಯಾಗಿದೆ. ಔರಾದ್ಕರ್ ವರದಿ ಶಿಫಾರಸಿನ ಅನ್ವಯ ಎಲ್ಲಾ ಪೊಲೀಸ್ ಸಿಬ್ಬಂದಿಗಳ (ಎಎಸ್ಐ/ಹೆಚ್ಸಿ/ಪಿಸಿ) ಮೂಲ ವೇತನದಲ್ಲಿ ಶೇ 30 ರಿಂದ 35ರಷ್ಟು ಹೆಚ್ಚಳ ಮಾಡಬೇಕು.
ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ ಮತ್ತು ನೌಕರರ ಸದ್ಯ ಈಗಿರುವ ವೇತನವನ್ನು ತೆಲಂಗಾಣ ರಾಜ್ಯದ ಮಾದರಿಯಲ್ಲಿ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಹಣಕಾಸು ಸಚಿವರು ಆಗಿರುವ ಬಿ. ಎಸ್. ಯಡಿಯೂರಪ್ಪಗೆ ಮನವಿ ಮಾಡಲಾಗಿದೆ.

ಉಚಿತ ಪಡಿತರ
ಪೊಲೀಸ್ ಕಾನ್ಸ್ಸ್ಟೇಬಲ್ & ಹೆಡ್ ಕಾನ್ಸ್ಟೇಬಲ್ಗೆ ಪ್ರತಿ ತಿಂಗಳ ವೇತನದಲ್ಲಿ ನೀಡುವ ಉಚಿತ ಪಡಿತರ ವಿತರಣೆಯ ಬದಲಾಗಿ ನೀಡುವ ಭತ್ಯೆಯು ಕೇವಲ 400 ರೂ. ಇದ್ದು ಅದನ್ನು ಕನಿಷ್ಠ 2000 ರೂ.ಗಳಿಗೆ ಹೆಚ್ಚಳ ಮಾಡಬೇಕು.
ಪೊಲೀಸ್ ಕಾನ್ಸ್ಸ್ಟೇಬಲ್ & ಹೆಡ್ ಕಾನ್ಸ್ಸ್ಟೇಬಲ್ಗೆ ಪ್ರತಿ ತಿಂಗಳು ವೇತನದಲ್ಲಿ ನೀಡುವ ಸಾರಿಗೆ ಭತ್ಯೆಯನ್ನು 600 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ರಜೆಗಳನ್ನು ನೀಡಬೇಕು
ಆರ್ಥಿಕ ಇಲಾಖೆಯಿಂದ ಮಂಜೂರು ಮಾಡುತ್ತಿರುವ 200 ರೂ. ವಾರದ ರಜೆ ಭತ್ಯೆಯನ್ನು ಖಾಯಂ ಆಗಿ ರದ್ದು ಮಾಡಿ ಆಂಧ್ರ ಪ್ರದೇಶ ಮಾದರಿಯಲ್ಲಿ ಪೊಲೀಸ್ ಇಲಾಖೆಯು ಹೆಚ್ಸಿ ಮತ್ತು ಪಿಸಿ ಸಿಬ್ಬಂದಿ ಜನರಿಗೆ ಕಡ್ಡಾಯವಾಗಿ ವಾರದ ರಜೆ ಮಂಜೂರು ಮಾಡಬೇಕು.
2 ಮತ್ತು 4ನೇ ಶನಿವಾರದ ರಜೆಯ ಬದಲಾಗಿ ಪೊಲೀಸ್ ಪೇದೆಯಿಂದ ಹಿಡಿದು ಪಿಎಸ್ಐ ಅಧಿಕಾರಿವರೆಗೆ ವಾರ್ಷಿಕವಾಗಿ ಒಂದು ತಿಂಗಳ ಹೆಚ್ಚುವರಿ ವೇತನವನ್ನು ನೀಡಲು ಮಾನ್ಯರಲ್ಲಿ ವಿನಂತಿಸಿಕೊಳ್ಳಲಾಗಿದೆ.

2 ವರ್ಷಕ್ಕೊಮ್ಮೆ ಪರಿಷ್ಕರಣೆ
ಪೊಲೀಸ್ ಇಲಾಖೆಯ ಪೊಲೀಸ್ ಪೇದೆಯಿಂದ ಹಿಡಿದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತನಕ ನೀಡಲಾಗುತ್ತಿರುವ ವಿವಿಧ ಭತ್ಯೆಯನ್ನು ಪ್ರತಿ 2 ವರ್ಷಗಳಿಗೊಮ್ಮೆ ತಾನೇ ತಾನಾಗಿ ಅಂದರೆ ಸ್ವಯಂ ಚಾಲಿತವಾಗಿ ಹೆಚ್ಚಳ ಆಗುವಂತೆ ನಿಯಮ ರೂಪಿಸಬೇಕು.
ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಎಂಟು ಗಂಟೆಗಳ ಕಾಲ ಕರ್ತವ್ಯದ ಅವಧಿಯನ್ನು ನಿರ್ದಿಷ್ಟವಾಗಿ ನಿಗದಿಪಡಿಸುವ ಕುರಿತು ಗಮನಹರಿಸಬೇಕು.












Click it and Unblock the Notifications