ಬಿಎಸ್ವೈ ಅಧಿಕಾರ ಸ್ವೀಕಾರ, ರಾಜ್ಯ ಸರ್ಕಾರದ ಮೇಲೆ ಪ್ರಹಾರ
ಬೆಂಗಳೂರು, ಏಪ್ರಿಲ್ 14 : "ಇನ್ನೊಂದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಎಲ್ಲ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ, ರೈತರ ಮನೆ ಮನೆಗೆ ತೆರಳಿ ಸಂಕಷ್ಟ ಆಲಿಸುತ್ತೇನೆ. ಜಿಲ್ಲಾ ಮಟ್ಟದಲ್ಲೂ ಸಮಾವೇಶ ಏರ್ಪಡಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಮಲವನ್ನು ಮತ್ತೆ ಅರಳಿಸುತ್ತೇನೆ" ಇದು ಬಿಜೆಪಿ ಕರ್ನಾಟಕದ ನೂತನ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ನೇರ ಮಾತುಗಳು.
ಬಿಜೆಪಿ ಕರ್ನಾಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಬಿ ಎಸ್ ಯಡಿಯೂರಪ್ಪ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರುದ್ಧ ಗುಡುಗಿದ್ದಾರೆ. ಅರಮನೆ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಿಎಸ್ ವೈ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.[ಯಡಿಯೂರಪ್ಪ : ಶಿಕಾರಿಪುರ ಜನಸಂಘದಿಂದ ಬಿಜೆಪಿ ಗದ್ದುಗೆ ತನಕ]
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಗುರುವಾರ ಬೆಳಗ್ಗೆ 11.30ರ ಸುಮಾರಿಗೆ ನಿರ್ಗಮಿತ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಂದ ಅಧಿಕಾರ ಪಡೆದುಕೊಂಡ ಬಿಎಸ್ ವೈ ನೇರವಾಗಿ ಜನರ ಬಳಿಗೆ ತೆರಳುವ ಸೂಚನೆಯನ್ನು ನೀಡಿದ್ದಾರೆ.
ಧನ್ಯವಾದ
ನನ್ನ ಮೇಲೆ ನಂಬಿಕೆ ಇಟ್ಟು ಮತ್ತೆ ರಾಜ್ಯ ಬಿಜೆಪಿ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದ. ಗೊಂದಲಗಳನ್ನು ನಿವಾರಿಸಿಕೊಂಡು ಅವರ ಆಶಯದಂತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ.
ರೈತರಿಗೆ ಶಕ್ತಿ ತುಂಬಬೇಕು
ಆತ್ಮಹತ್ಯೆಗೆ ಶರಣಾಗುತ್ತ ರೈತರು ದಯನೀಯ ಸ್ಥಿತಿ ತಲುಪಿದ್ದಾರೆ. ಮೊದಲು ಅವರಿಗೆ ಸಾಂತ್ವನ ಹೇಳಿ ನೊಂದ ರೈತರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ನಾಳೆಯಿಂದಲೇ ಪ್ರವಾಸ ಹೊರಡುತ್ತೇನೆ.
ಬರುವವರಿಗೆ ಸ್ವಾಗತ
ಪಕ್ಷಕ್ಕೆ ಬರುವ ಎಲ್ಲ ನಾಯಕರಿಗೆ ಮುಕ್ತ ಸ್ವಾಗತವಿದೆ. ಹಿರಿಯರೊಂದಿಗೆ ಮಾತನಾಡಿ ಪಕ್ಷ ಬಲವರ್ಧನೆ ಮಾಡುತ್ತೇನೆ.
ಜಿಲ್ಲಾ ಮಟ್ಟದಲ್ಲಿ ಸಮಾವೇಶ
ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿಕೊಂಡು ಬರುತ್ತೇನೆ. ಜಿಲ್ಲಾ ಮಟ್ಟದಲ್ಲೂ ಸಮಾವೇಶ ನಡೆಸುತ್ತೇನೆ ಎಂದು ತಿಳಿಸಿದರು.
ಮೈಮರೆಯಲ್ಲ
ನಾವು ಮತ್ತು ಕಾರ್ಯಕರ್ತರು ಮೈ ಮರೆಯುವ ಪ್ರಶ್ನೆಯೇ ಇಲ್ಲ. ನಿದ್ರೆಯಲ್ಲಿರುವ ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸುತ್ತೇನೆ.