ಬಿಜೆಪಿ ಆಂತರಿಕ ಚುನಾವಣಾ ಸಮೀಕ್ಷೆ ಲೀಕ್ ಗೊಳಿಸಿದ ಎಚ್ಡಿಕೆ
ಬೆಂಗಳೂರು, ಡಿ 13: ಚುನಾವಣಾ ವರ್ಷವಾಗಿರುವುದರಿಂದ ರಾಜ್ಯದ ಮೂರು ಪ್ರಮುಖ ಪಕ್ಷಗಳು ಆಂತರಿಕ ಸಮೀಕ್ಷೆಯನ್ನು ನಡೆಸಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಬಾರಿ ಸಮೀಕ್ಷೆ ನಡೆಸಿಯಾಗಿದೆ ಎನ್ನುವ ಮಾಹಿತಿಯಿದೆ.
ಸದ್ಯದ ಮಟ್ಟಿಗೆ ಮೂರೂ ಪಕ್ಷಗಳಿಗೆ ಅಧಿಕಾರಕ್ಕೆ ಬರುವಷ್ಟು ಸ್ಥಾನ ಸಿಗುತ್ತದೆ ಎನ್ನುವ ಖಚಿತ ವಿಶ್ವಾಸವಿಲ್ಲ. ಹಾಗಾಗಿ, ಜನಮನ್ನಣೆ ಗಳಿಸಲು ಯಾತ್ರೆಯ ಮೊರೆ ಹೋಗಿವೆ. ಮಳೆಯ ಕಾರಣ ಜೆಡಿಎಸ್ ಮತ್ತು ಬಿಜೆಪಿಯ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪ್ರಕಟ? ಬೆಚ್ಚಿಬಿದ್ದ ಸಿದ್ದರಾಮಯ್ಯ ಬಣ
ರಾಜ್ಯ ಬಿಜೆಪಿ ಘಟಕ ಎರಡು ಸುತ್ತಿನ ಸಮೀಕ್ಷೆಯನ್ನು ನಡೆಸಿದ್ದರೆ, ಕೇಂದ್ರದ ನಾಯಕರು ತಮ್ಮದೇ ಮೂಲಗಳಿಂದ ಸಮೀಕ್ಷೆಯನ್ನು ನಡೆಸಿ ಕಾರ್ಯತಂತ್ರವನ್ನು ಆರಂಭಿಸಿದ್ದಾರೆ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆಯ ನಂತರ ಬಿಜೆಪಿ ವರಿಷ್ಠರು ಕರ್ನಾಟಕದ ಕಡೆ ಗಮನಹರಿಸಲಾರಂಭಿಸಿದ್ದಾರೆ.
ಪಂಚರತ್ನ ಯಾತ್ರೆಗೆ ಸಿಕ್ಕ ಅಭೂತಪೂರ್ವ ಬೆಂಬಲದಿಂದ ಉಲ್ಲಸಿತರಾಗಿರುವ ದಳಪತಿಗಳು ತಾವು ಕಿಂಗ್ ಮೇಕರ್ ಅಲ್ಲ, ಬಹುಮತಕ್ಕೆ ಬೇಕಾಗುವಷ್ಟು ಸ್ಥಾನ ಸಿಗುತ್ತದೆ ಎನ್ನುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ನಡುವೆ, ಬಿಜೆಪಿಯ ಎರಡನೇ ಆಂತರಿಕ ಸಮೀಕ್ಷಾ ವರದಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗ ಪಡಿಸಿದ್ದಾರೆ.
ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ
ತಮ್ಮದೇ ಮೂಲಗಳಿಂದ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ನಿಸ್ಸೀಮರಾಗಿರುವ ಕುಮಾರಸ್ವಾಮಿ, ಬಿಜೆಪಿಯ ಆಂತರಿಕ ಸಮೀಕ್ಷಾ ವರದಿಯಲ್ಲಿ ಆ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ ಎನ್ನುವ ರಹಸ್ಯವನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೇರೆ ಪಕ್ಷಗಳ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಮಾರಸ್ವಾಮಿ ಮಾತನಾಡುತ್ತಿದ್ದರು.
ಬಿಜೆಪಿಯವರು ಎರಡು ತಿಂಗಳಿಗೊಮ್ಮೆ ಸಮೀಕ್ಷೆಯನ್ನು ನಡೆಸುತ್ತಾರೆ
"ಬಿಜೆಪಿಯವರು ಎರಡು ತಿಂಗಳಿಗೊಮ್ಮೆ ಸಮೀಕ್ಷೆಯನ್ನು ನಡೆಸುತ್ತಾರೆ, ಅದರ ಪ್ರಕಾರ ಹೊಸ ತಂತ್ರಗಳನ್ನು ಪ್ರಯೋಗ ಮಾಡುತ್ತಾರೆ. ಕಾಂಗ್ರೆಸ್ಸಿನವರದ್ದೂ ಇದೇ ಕಥೆ, ಬಿಜೆಪಿಯ ಸಮೀಕ್ಷೆಯ ಪ್ರಕಾರ ಜೆಡಿಎಸ್ ಪಕ್ಷಕ್ಕೆ 55 ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಇದು ಎರಡೂ ಹೊಸ ಪಕ್ಷಗಳಿಗೆ ತಲೆನೋವಾಗಲು ಆರಂಭವಾಗಿದೆ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ, ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಿದ್ದ ಸಮೀಕ್ಷೆ ಪ್ರಕಾರ ಆ ಪಕ್ಷಕ್ಕೆ 110, ಕಾಂಗ್ರೆಸ್ಗೆ 74 ಮತ್ತು ಜೆಡಿಎಸ್ಗೆ 49 ಸ್ಥಾನ ಸಿಗಬಹುದು ಎಂದು ಹೇಳಲಾಗಿತ್ತು.
ಪಂಚರತ್ನ ಯಾತ್ರೆಯ ನಂತರ ಜೆಡಿಎಸ್ ಪಕ್ಷದ ಬಲವೃದ್ದನೆ
"ಪಂಚರತ್ನ ಯಾತ್ರೆಯ ನಂತರ ಜೆಡಿಎಸ್ ಪಕ್ಷದ ಬಲವೃದ್ದನೆಯಾಗಿರುವುದರಿಂದ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸುವಂತೆ ಮಾಡಿದೆ. ನಮಗೆ ಸಿಗುತ್ತಿರುವ ಜನಬೆಂಬಲ ನೋಡಿದರೆ 123ಸ್ಥಾನವನ್ನು ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಜನರು ಈ ಬಾರಿ ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಚಾಮರಾಜಪೇಟೆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ
"ಕುಮಾರಸ್ವಾಮಿಯ ಪಂಚರತ್ನ ಯಾತ್ರೆ ಪಕ್ಷಕ್ಕೆ ಹೊಸ ಹುಮ್ಮಸ್ಸನ್ನು ತಂದಿದೆ, ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಆಧರಿಸಿ ಕುಮಾರಸ್ವಾಮಿ ಅದರಂತೇ ಕಾರ್ಯತಂತ್ರ ರೂಪಿಸಬೇಕು"ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು ಈ ಸಂದರ್ಭದಲ್ಲಿ ಹೇಳಿದ್ದಾರೆ. ನೋಡುತ್ತಿರಿ ಚಾಮರಾಜಪೇಟೆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನಿಗೆ ಸವಾಲು ಎಸೆದಿದ್ದಾರೆ.