ಡಾ. ಸುಧಾಕರಣ್ಣ ನಮ್ಮ ಹಣೆಬರಹ ಹರಿದು ಹಾಕಿ; ವಿಧಾನಸಭೆಯಲ್ಲಿ ಗುಡುಗಿದ ಡಿಕೆಶಿ

ಬೆಂಗಳೂರು, ಸೆ. 22: ಶಾಸಕರ ನಿರುತ್ಸಾಹದ ಮಧ್ಯೆ ವಿಧಾನಸಭೆಯ ಎರಡನೇ ದಿನದ ಕಲಾಪ ನಡೆಯುತ್ತಿದೆ. ಕೊರೊನಾ ವೈರಸ್ ಕುರಿತು ಗಮನ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಹಾಗೂ ಎಚ್ಚರಿಕೆ ವಹಿಸುವಂತೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಸದಸ್ಯರಲ್ಲಿ ವಿನಂತಿಸಿದ್ದಾರೆ. ಕೊರೊನಾ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದ ಸದಸ್ಯರಿಗೆ ಪಾಠ ಮಾಡಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ವಿಧಾನ ಸಭೆ ಅಧಿವೇಶನದಲ್ಲಿ ಹಲವು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಶಾಸಕರು, ಸಚಿವರು ಮಾಸ್ಕ್‌ ಹಾಕಿಕೊಂಡಿರಬೇಕು. ಮಾತಾಡುವಾಗಲೂ ಮಾಸ್ಕ್ ಹಾಕಿಕೊಂಡೇ ಮಾತನಾಡಬೇಕು. ಕೆಲವರು ಮಧ್ಯದಲ್ಲಿ ಮಾಸ್ಕ್ ತೆಗಿಯೋದನ್ನು ಗಮನಿಸಿದ್ದೇನೆ. ಸದನದಲ್ಲಿ ಎಲ್ಲರೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಆದೇಶ ಮಾಡಿದ್ದಾರೆ.

ಸಚಿವರು ಆಪ್ತ ಸಿಬ್ಬಂದಿಯನ್ನು ವಿಧಾನಸೌಧಕ್ಕೆ ಕರೆತರಬೇಡಿ. ಸಾರ್ವಜನಿಕರಿಗೆ ಅಧಿವೇಶನ ನೋಡಲು ಈ ಬಾರಿ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ನಿಮ್ಮ ಬಳಿ ಬರುವ ನಿಯೋಗಗಳನ್ನು ವಿಧಾನಸೌಧಕ್ಕೆ ಕರೆ ತರಬೇಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೂಚಿಸಿದ್ದಾರೆ. ಈ ಮಧ್ಯೆ ಎರಡೇ ವಿಧಾನಸಭೆ ಕಲಾಪದ ಎರಡನೇ ದಿನವೇ ಶಾಸಕರ ನಿರುತ್ಸಾಹ ಕಂಡು ಬಂದಿದೆ. ವಿಧಾನಸಭೆ ಕಲಾಪಕ್ಕೆ ಬಹುತೇಕ ಶಾಸಕರ ಗೈರು ಹಾಜರಾಗಿದ್ದಾರೆ. ಸಚಿವರು ಸೇರಿದಂತೆ ಬಿಜೆಪಿಯ 22 ಶಾಸಕರು ಸದನದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷದ 18 ಶಾಸಕರು ಹಾಗೂ ಜೆಡಿಎಸ್‌ನಿಂದ ಕೇವಲ 4 ಜನ ಶಾಸಕರು ಸದನದಲ್ಲಿ ಉಪಸ್ಥಿತರಿದ್ದರು.

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಹೊಂದಿದೆ. ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಮಾಡಿರುವ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಿಯಮ 60ರ ಅಡಿ ನಿಲುವಳಿ ಸೂಚನೆ ಮಂಡಿಸಿದ್ದರು. ಅದನ್ನು ಬದಲಾಯಿಸಿ ನಿಯಮ 69ರಡಿ ಚರ್ಚೆಗೆ ಸ್ಪೀಕರ್ ಕಾಗೇರಿ ಅವರು ಅವಕಾಶ ನೀಡಿದ್ದಾರೆ.

ಸರ್ಕಾರದ ಬಳಿ ಕೋವಿಡ್ ಸಾವಿನ ಲೆಕ್ಕವಿಲ್ಲ!

ಸರ್ಕಾರದ ಬಳಿ ಕೋವಿಡ್ ಸಾವಿನ ಲೆಕ್ಕವಿಲ್ಲ!

ಚರ್ಚೆಯ ಮೇಲೆ ಮಾತನಾಡಿದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರು, ಕೊರೊನಾ ವೈರಸ್ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಕೋವಿಡ್-19ನಿಂದಾಗಿ ಆಗಿರುವ ಸಾವಿನ ಸಂಖ್ಯೆ ‌ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ರಾಜ್ಯ ಸರ್ಕಾರ ಸಾವಿನ ಪರೀಶೋಧನೆಯನ್ನು ನಿಲ್ಲಿಸಿದೆ. ಈ ಕುರಿತು ಸರ್ಕಾರ ಸದನದಲ್ಲಿ ‌ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಇನ್ನು ಇದೇ ವಿಚಾರದ ಮೇಲೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಡಿ.ಕೆ. ಶಿವಕುಮಾರ್ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಜನಕ್ಕೆ ಊಟವಿಲ್ಲ ಎಂದು ಸಂಘ ಸಂಸ್ಥೆಗಳು ಊಟದ ಪ್ಯಾಕೇಜ್ ನೀಡಿದ್ದರು. ಆದರೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಫೋಟೊಗಳನ್ನು ಊಟದ ಕಿಟ್‌ಗಳ ಮೇಲೆ ಹಾಕಿ ಹಂಚಿದ್ದಾರೆ. ಅಂಗನವಾಡಿಯ ಆಹಾರದ ಕಿಟ್‌ಗಳ ಮೇಲೆ ಬಿಜೆಪಿ ಸಿಂಬಲ್ ಹಾಕಿದ್ದಾರೆ. ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಆಡಳಿತ ವೈಫಲ್ಯವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಡಿಕೆಶಿಗೆ ಮಾಸ್ಕ್ ಹಾಕಿಸಿದ ಸ್ಪೀಕರ್

ಡಿಕೆಶಿಗೆ ಮಾಸ್ಕ್ ಹಾಕಿಸಿದ ಸ್ಪೀಕರ್

ಇದೇ ಸಂದರ್ಭದಲ್ಲಿ ಸದನದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸ್ಪೀಕರ್ ಕಾಗೇರಿ ಅವರು ಮಾಸ್ಕ್ ಹಾಕಿಸಿದ ಘಟನೆ ನಡೆಯಿತು. ಮಾಸ್ಕ್ ಧರಿಸದೇ ಸದನದಲ್ಲಿ ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಮಾರ್ಷಲ್‌ಗಳಿಂದ ಮಾಸ್ಕ್ ತರಿಸಿ ಡಿಕೆಶಿ ಅವರಿಗೆ ಸ್ಪೀಕರ್ ಕಾಗೇರಿ ಕಳುಹಿಸಿದರು. ನಂತರ ಮಾಸ್ಕ್ ಧರಿಸಿ ಮಾತು ಮುಂದುವರೆಸಿದ ಡಿಕೆಶಿ ನಾನು ಭಾಷಣ ಮಾಡುತ್ತಿರಲಿಲ್ಲ ಎಂದು ನಗುತ್ತಲೇ ಹೇಳಿದರು. ಜೋರಾಗಿ ಮಾತಾಡೋದ್ರಿಂದ ಬೇರೆಯವರಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಮಾಸ್ಕ್ ಧರಿಸಿ ಮಾತನಾಡಿ ಎಂದು ಶಿವಕುಮಾರ್ ಅವರಿಗೆ ಸ್ಪೀಕರ್ ಕಾಗೇರಿ ಸಲಹೆ ನೀಡಿದರು. ಆ ನಂತರ ಮಾಸ್ಕ್ ಧರಿಸಿ ತಮ್ಮ ಮಾತನ್ನು ಶಿವಕುಮಾರ್ ಮುಂದುವರೆಸಿದರು.

ಮಾತು ಮುಂದುವರೆಸಿದ ಡಿ.ಕೆ. ಶಿವಕುಮಾರ್ ಅವರು, ಕೂಲಿ ಕಾರ್ಮಿಕರಿಗೆ ಪರಿಹಾರ ಕೊಡಲಿಲ್ಲ. ಸಣ್ಣ ಕಸಬುದಾರರಿಗೂ ಪರಿಹಾವಿಲ್ಲ. ಅವರೆಲ್ಲ ಇಲ್ಲ ಅನ್ನೋಹಾಗೆ ಆಗಿದ್ದರೆ ನಾನು ನಿಮ್ಮ ಮುಂದೆ ಬಂದು ಮಾತನಾಡಲೂ ಆಗುತ್ತಿರಲಿಲ್ಲ. ಕ್ಷೌರಿಕ ಇದ್ದರೇ ತಾನೇ ನಾವು ಸ್ವಚ್ಛವಾಗಿ ಕಾಣುವುದು? ಇದರಲ್ಲೂ ರಾಜಕೀಯ ಮಾಡ್ತೀರಾ ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಒಂದು ವಿಪಕ್ಷವಾಗಿ ಕೋವಿಡ್ ಸಮಯದಲ್ಲಿ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಬಿಐಇಸಿ ಸಭಾಂಗಣದಲ್ಲಿ 10,000 ಬೆಡ್ ಆಸ್ಪತ್ರೆ ತೆರೆದು ಚರಿತ್ರೆ ಸೃಷ್ಟಿ ಮಾಡಿದ್ರೀ! ಒಂದು ವಾರಕ್ಕೆ ಮುಚ್ಚಿಬಿಟ್ಟರು. ಅಲ್ಲಿ ಖರ್ಚಾಗಿದ್ದು ಜನರ ದುಡ್ಡು. ಇದಕ್ಕೆ ಸರ್ಕಾರ ಉತ್ತರ ಕೊಡುವುದು ಬೇಡವಾ? ಹೊರದೇಶದಿಂದ ಬಂದವರನ್ನ ಮೊದಲೇ ಚೆಕ್ ಮಾಡಿ, ಕ್ವಾರಂಟೈನ್ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರಾಜ್ಯ ಸರ್ಕಾರದ ವೈಫಲ್ಯವನ್ನು ಡಿಕೆ ಶಿವಕುಮಾರ್ ಬಿಚ್ಚಿಟ್ಟರು.

ನಂಗೆ ನೋಟೀಸ್ ಕೊಡಲು ರವಿಕುಮಾರ್ ಯಾರು?

ನಂಗೆ ನೋಟೀಸ್ ಕೊಡಲು ರವಿಕುಮಾರ್ ಯಾರು?

ಕೊರೊನಾ ಸಂದರ್ಭದಲ್ಲಿ ಖರೀದಿಸಲಾಗಿರುವ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿರುವ ಅವ್ಯಹಾರದ ವಿಚಾರವಾಗಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಬೇಕು. ನಮ್ಮ ಅವಧಿಯಲ್ಲಿ ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ನೀವು ಆರೋಪಿಸಿದ್ದೀರಿ, ನಮ್ಮ ಅವಧಿಯಲ್ಲಿ ಆಗಿರುವ ಖರೀದಿಯನ್ನೂ ಸೇರಿಸಿಯೆ ತನಿಖೆ ನಡೆಸಿ. ಅದಕ್ಕೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ಕಾಂಗ್ರೆಸ್ ಸದಸ್ಯ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಸವಾಲು ಹಾಕಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ನಂಗೆ ನೋಟಿಸ್ ಕೊಡ್ತಾರಂತೆ. ನೋಟೀಸ್ ಕೊಡೋದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಯಾರು? ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟೀಸ್ ಕೊಡಲು ನಾವು ಎದುರಿಸುತ್ತೇವೆ. ಈ ಜೈಲು, ಪ್ರಕರಣಗಳನ್ನು ಎಲ್ಲವನ್ನೂ ಕಾಂಗ್ರೆಸ್ ಪಕ್ಷ ಎದುರಿಸಲು ಸಿದ್ಧವಾಗಿದೆ ಎಂದು ಬಿಜೆಪಿಗೆ ಸವಾಲು ಹಾಕಿದರು.

Recommended Video

    Pangong ಸರೋವರದಿಂದ ಹಿಂದೆ ಸರಿಯಲ್ಲ ಎಂದ China | Oneindia Kannada
    ಡಾ. ಸುಧಾಕರಣ್ಣ ನಮ್ಮ ಹಣೆಬರಹ ಹರಿದು ಹಾಕಿ

    ಡಾ. ಸುಧಾಕರಣ್ಣ ನಮ್ಮ ಹಣೆಬರಹ ಹರಿದು ಹಾಕಿ

    ಕಾಂಗ್ರೆಸ್‌ನವರ ಹಣೆ ಬರಹ ಬಿಚ್ಚಿಡ್ತೀನಿ ಎಂದು ಡಾ. ಸುಧಾಕರಣ್ಣ ಹೇಳುತ್ತಾರೆ. ಬಿಚ್ಚಿಡೊದಲ್ಲ. ನಮ್ಮ ಹಣೆಬರಹ ಹರಿದು ಹಾಕಿ. ನಾವು ರೆಡಿ ಇದ್ದೇವೆ. ಏನ್ ಸ್ವಾಮಿ ಬಡವರ ದುಡ್ಡಲ್ಲಿ? ಕೊರೊನಾದಿಂದ ಸಾವನ್ನಪ್ಪಿದರ ಅಂತ್ಯಕ್ರಿಯೆಯನ್ನೂ ಸರಿಯಾಗಿ ಮಾಡಲಿಲ್ಲ. ಒಬ್ಬ ಮಂತ್ರಿಯೂ ಅಂತ್ಯಕ್ರಿಯೆ ಹೇಗೆ ನಡೆಯುತ್ತಿದೆ ಎಂದು ಹೋಗಿ ಗಮನ ಹರಿಸಲಿಲ್ಲ. ಸರ್ಕಾರ‌ ಸಂಫೂರ್ಣ ವಿಫಲವಾಗಿದೆ. ನಾವಂತೂ ಕ್ಷಮಿಸುವುದಿಲ್ಲ. ನಿಮ್ಮ ಬಿಜೆಪಿ ಆಡಳಿತದಲ್ಲಿ ರಾಜ್ಯವನ್ನು 20 ವರ್ಷಗಳ ಹಿಂದಕ್ಕೆ ಕರ್ಕೊಂಡು ಹೋಗಿದ್ದೀರಾ ಎಂದು ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.

    ಕೊರೊನಾ ವೈರಸ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಡಿರುವ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಅದನ್ನು ಚರ್ಚೆ ನಡೆಸಲು ನಿಯಮ 60ರಡಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದ್ದರು. ಅದನ್ನು ನಿಯಮ 69ಕ್ಕೆ ಬದಲಾಯಿಸಿ, ಎರಡು ಗಂಟೆಗಳಲ್ಲಿ ಚರ್ಚೆ ಮುಗಿಸುವಂತೆ ಸ್ಪೀಕರ್ ಸೂಚಿಸಿದ್ದಾರೆ. ವಿಧಾನಸಭೆಯಲ್ಲಿ ಚರ್ಚೆ ಮುಂದುವರೆದಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+