ಸರ್ಕಾರದ ಪರವಾಗಿ ಮತ ಹಾಕಿ, ಕಾಂಗ್ರೆಸ್ನಿಂದ ಶಾಸಕರಿಗೆ ವಿಪ್ ಜಾರಿ
ಬೆಂಗಳೂರು, ಜುಲೈ 11 : ಕರ್ನಾಟಕ ಕಾಂಗ್ರೆಸ್ನ ಎಲ್ಲಾ ಶಾಸಕರಿಗೆ ಪಕ್ಷದ ವತಿಯಿಂದ ವಿಪ್ ಜಾರಿಗೊಳಿಸಲಾಗಿದೆ. ಶುಕ್ರವಾರದಿಂದ ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಿದೆ. ಕಡ್ಡಾಯವಾಗಿ ಸದನಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.
ಗುರುವಾರ ಸಂಜೆ ಸರ್ಕಾರಿ ಮುಖ್ಯ ಸಚೇತಕ, ಶಾಸಕ ಗಣೇಶ್ ಹುಕ್ಕೇರಿ ಅವರು ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 18 ಶಾಸಕರು ಸೇರಿದಂತೆ ಎಲ್ಲಾ ಶಾಸಕರಿಗೂ ವಿಪ್ ಅನ್ವಯವಾಗಲಿದೆ.
ಸದನದಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ ಕುಮಾರಸ್ವಾಮಿ?
ಸದನದ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸರ್ಕಾರದ ಪರವಾಗಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಲಾಗಿದೆ. ಶುಕ್ರವಾರ ಪ್ರತಿಪಕ್ಷ ಬಿಜೆಪಿ ಸರ್ಕಾರ ಬಹುಮತ ಸಾಬೀತು ಮಾಡಬೇಕು ಎಂದು ಸದನದಲ್ಲಿ ಒತ್ತಾಯಿಸಲಿದೆಯೇ? ಕಾದು ನೋಡಬೇಕು.
ರಾಜಕೀಯ ಹೈಡ್ರಾಮ, ಶುಕ್ರವಾರದಿಂದ ಮುಂಗಾರು ಅಧಿವೇಶನ
ವಿಶ್ವಾಸಮತ ಯಾಚನೆಗೆ ನಾವು ಸಿದ್ಧ : ದಿನೇಶ್ ಗುಂಡೂರಾವ್
ವಿಪ್ನಲ್ಲಿ ಏನಿದೆ ?
15ನೇ ಕರ್ನಾಟಕ ವಿಧಾನಸಭೆಯ 4ನೇ ಅಧಿವೇಶನ ದಿನಾಂಕ 12/7/2019 ರಿಂದ 26/7/2019ರ ತನಕ ವಿಧಾನಸಭೆಯ ಸಭಾಂಗಣದಲ್ಲಿ ಸೇರುವಂತೆ ನಿರ್ಣಯಿಸಲಾಗಿದೆ. ಆದುದರಿಂದ ಸನ್ಮಾನ್ಯಾ ಸಭಾಧ್ಯಕ್ಷರು ಸದನವನ್ನು ಪ್ರಾರಂಭಿಸಿ ಮುಕ್ತಾಯಗೊಳಿಸುವವರೆಗೆ ತಾವು ಪ್ರತಿದಿನದ ಕಾರ್ಯ ಕಲಾಪದಲ್ಲಿ ಕಡ್ಡಾಯವಾಗಿ ಉಪಸ್ಥಿತರಿದ್ದು, ದಿನಾಂಕ 12/7/2019ರಿಂದ 26/7/2019ರ ನಡುವೆ ಯಾವುದೇ ದಿನದಂದು ಮಂಡನೆಯಾಗುವ ವಿತ್ತೀಯ ವಿಧೇಯಕಗಳು, ವಿಧೇಯಕಗಳು, ಶಾಸನಗಳು ಹಾಗೂ ಇತರೆ ಕಾರ್ಯ ಕಲಾಪಗಳಲ್ಲಿ ಭಾಗವಹಿಸಿ ಸರ್ಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ಈ ಮೂಲಕ ವಿಪ್ ನೀಡಲಾಗಿದೆ.
ಒಂದು ವೇಳೆ ಸದನಕ್ಕೆ ತಾವು ಹಾಜರಾಗದಿದ್ದಲ್ಲಿ ಅಥವ ಸರ್ಕಾರದ ಪರವಾಗಿ ಮತ ಚಲಾಯಿಸದೇ ಇದ್ದಲ್ಲಿ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ಸಂವಿಧಾನದ ಅನುಚ್ಛೇಧ -10 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಮಗೆ ತಿಳಿಸಲಾಗಿದೆ.