ಶನಿವಾರ ಸದನದಲ್ಲಿ ಸಂಭವಿಸಬಹುದಾದ ಮೂರು ಸಾಧ್ಯತೆಗಳು
ಬೆಂಗಳೂರು, ಮೇ 18: ವಿಧಾನಸಭೆಯ ಮಹತ್ವದ ವಿಶ್ವಾಸಮತ ಯಾಚನೆಯು ಶನಿವಾರ ಸಂಜೆ 4 ಗಂಟೆಗೆ ನಡೆಯಲಿದೆ. ಬಿಜೆಪಿ 104 ಶಾಸಕರ ಬಲ ಹೊಂದಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ 116 ಶಾಸಕರು ತಮ್ಮ ಜತೆ ಇರುವುದಾಗಿ ಹೇಳಿಕೊಂಡಿವೆ.
ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಮುಂದೂಡಲಾಗಿರುವುದರಿಂದ ಮತ್ತು ಎಚ್ಡಿ ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಸದನದ ಮ್ಯಾಜಿಕ್ ನಂಬರ್ 111ಕ್ಕೆ ಇಳಿದಿದೆ. ಕುಮಾರಸ್ವಾಮಿ ಅವರ ಎರಡು ಕ್ಷೇತ್ರಗಳನ್ನೂ ಸೇರಿಸಿ ಸದನದ ಒಟ್ಟು ಬಲಾಬಲ 222.
ಇತರೆ ಪಕ್ಷಗಳ ಕೆಲವು ಶಾಸಕರು ಗೈರಾಗಲಿದ್ದಾರೆ ಎಂದು ಬಿಜೆಪಿ ಆಶಯ ಹೊಂದಿದೆ. ನೂತನ ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿರುವ ಬಿಜೆಪಿಯ ಕೆ.ಜಿ. ಬೋಪಯ್ಯ ಅವರು ವಿಶ್ವಾಸಮತ ಯಾಚನೆಯ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಈ ವೇಳೆ ಅನೇಕ ಘಟನೆಗಳು ನಡೆಯುವ ಸಾಧ್ಯತೆಗಳಿವೆ. ಅವುಗಳನ್ನು ನೋಡೋಣ ಬನ್ನಿ.

ವಿಶ್ವಾಸ ಮತಕ್ಕೂ ಮುನ್ನ ಶಾಸಕರ ರಾಜೀನಾಮೆ
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನ ಕೆಲವು ಶಾಸಕರು ರಾಜೀನಾಮೆ ನೀಡಬಹುದು. ಇದರ ಅರ್ಥ ಅವರು ಶಾಸಕರಾಗಿ ಇರುವುದಿಲ್ಲ. ಇದರಿಂದ ಶಾಸಕರ ಅನರ್ಹತೆಯ ಸಮಸ್ಯೆ ಬರುವುದಿಲ್ಲ ಮತ್ತು ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಶಾಸಕರು ರಾಜೀನಾಮೆ ನೀಡಿದರೆ ಸದನದ ಬಲಾಬಲ ಕಡಿಮೆಯಾಗುತ್ತದೆ. ಮತ್ತು ಬಿಜೆಪಿ ತನ್ನ ಬಹುಮತ ಸಾಬೀತುಪಡಿಸಿಕೊಳ್ಳಲು ಅಗತ್ಯವಿರುವ ಸಂಖ್ಯೆಯಲ್ಲಿ ಇಳಿಯಾಗುತ್ತದೆ.
ಶಾಸಕರ ಗೈರು ಅಥವಾ ಅಡ್ಡಮತದಾನ:
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನಕ್ಕೆ ಗೈರು ಹಾಜರಾಗಬಹುದು. ಸದನಕ್ಕೆ ಹಾಜರಾಗದೆ ಗೈರಾಗಬಹುದು ಅಥವಾ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸದೆಯೂ ಇರಬಹುದು. ವಿಶ್ವಾಸಮತ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ಶಾಸಕರು ಸದನದಿಂದ ಹೊರ ನಡೆದ ಅನೇಕ ನಿದರ್ಶನಗಳಿವೆ. ಅಂತಹ ಸಂದರ್ಭದಲ್ಲಿಯೂ ಸದನದ ಬಲಾಬಲ ಕುಸಿಯುತ್ತದೆ. ಆದರೆ, ಪಕ್ಷ ಹೊರಡಿಸಿರುವ ವಿಪ್ ಉಲ್ಲಂಘಿಸಿದರೆ ಈ ಶಾಸಕರ ಸದಸ್ಯತ್ವ ಅನರ್ಹಗೊಳ್ಳುವ ಸಾಧ್ಯತೆ ಇರುತ್ತದೆ. ಈ ಶಾಸಕರು ಅನರ್ಹತೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಬಹುದು. ಇಂತಹ ಸನ್ನಿವೇಶಗಳಲ್ಲಿ ಅನ್ಯಾಯಕ್ಕೆ ಒಳಗಾದ ಪಕ್ಷಗಳು ಹೊಸದಾಗಿ ಪ್ರಕ್ರಿಯೆ ನಡೆಸುವಂತೆ ರಾಜ್ಯಪಾಲರನ್ನು ಕೋರಿಕೊಳ್ಳಬಹುದು.
ಬಿಜೆಪಿ ವಿಶ್ವಾಸಮತ ಸೋತರೆ ಮುಂದೇನು?
ಒಂದು ವೇಳೆ ಬಿಜೆಪಿಯು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲವಾದರೆ ಎರಡನೆಯ ಅತಿದೊಡ್ಡ ಪಕ್ಷವು ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಬಹುದು. ಬಳಿಕ ರಾಜ್ಯಪಾಲರು ಹೊಸದಾಗಿ ವಿಶ್ವಾಸಮತ ಪರೀಕ್ಷೆ ನಡೆಸಲು ಆ ಪಕ್ಷಕ್ಕೆ ದಿನಾಂಕ ನಿಗದಿಮಾಡಿಕೊಡಬಹುದು. ಒಂದು ವೇಲೆ ವಿಶ್ವಾಸಮತ ಯಾಚನೆಯ ಎರಡನೆಯ ಪ್ರಯತ್ನವೂ ವಿಫಲವಾದರೆ ಮೂರನೇ ಪರೀಕ್ಷೆಗೂ ಶಿಫಾರಸು ಮಾಡಬಹುದು. ಹೆಚ್ಚಿನ ಸನ್ನಿವೇಶಗಳಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯನ್ನು ಹೇರಲಾಗುತ್ತದೆ. ರಾಷ್ಟ್ರಪತಿ ಆಳ್ವಿಕೆ ನಡೆಯುವ ವೇಳೆಯಲ್ಲಿ ಯಾವುದೇ ಪಕ್ಷವು ತನ್ನ ಬಳಿ ಅಗತ್ಯ ಸಂಖ್ಯೆಯ ಶಾಸಕರು ಇದ್ದಾರೆ ಎಂದು ರಾಜ್ಯಪಾಲರನ್ನು ಸಂಪರ್ಕಿಸಬಹುದು. ಆಗಲೂ ಯಾವುದೇ ಪಕ್ಷ ವಿಶ್ವಾಸಮತ ಸಾಬೀತುಪಡಿಸಿಕೊಳ್ಳುವಲ್ಲಿ ವಿಫಲವಾದರೆ ಹೊಸದಾಗಿ ಚುನಾವಣೆ ನಡೆಸಲು ಆದೇಶ ಹೊರಡಿಸಬಹುದು.












Click it and Unblock the Notifications