ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ: ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕೆ
ಬೆಂಗಳೂರು, ಮೇ 19: ಒಂದೇ ರೀತಿಯ ಸೈದ್ಧಾಂತಿಕ ನಿಲುವು ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜತೆಯಾಗಿ ಸ್ಥಿರ ಸರ್ಕಾರ ನೀಡಲಿವೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
118 ಶಾಸಕರ ಬೆಂಬಲ ಹೊಂದಿದ್ದರೂ ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಅವಕಾಶ ನೀಡದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿಂಬಾಗಿಲಿನ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದ್ದರು.
ಆದರೆ, ಅವರ ಪ್ರಯತ್ನಕ್ಕೆ ಸೋಲಾಗಿದೆ. ಇದರಿಂದ ಬಿಜೆಪಿಯ ದಾಳಿಗೆ ಬಲಿಯಾಗುತ್ತಿರುವ ಪ್ರಜಾಪ್ರಭುತ್ವಕ್ಕೆ ತುಸು ಜೀವಂತಿಕೆ ಮರುಕಳಿಸಿದೆ. ಇದು ಪ್ರಜಾಪ್ರಭುತ್ವದ ವಿಜಯ ಎಂದು ಉಗ್ರಪ್ಪ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಜನಾದೇಶ ಬದಲಾಗಲಿದೆ. ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಬಿಜೆಪಿಗೆ ದೊಡ್ಡ ಸೋಲಾಗಲಿದೆ ಎಂದರು.
ಅಧಿಕ ಸಂಖ್ಯಾಬಲ ಹೊಂದಿರುವ ಮೈತ್ರಿಕೂಟವನ್ನು ಸಹಜವಾಗಿಯೇ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕು. ನಮ್ಮ ಸಂಖ್ಯಾಬಲದ ಪತ್ರವನ್ನು ಹಿಂದೆಯೇ ಅವರಿಗೆ ನೀಡಲಾಗಿದೆ. ಒಂದು ವೇಳೆ ಅವರು ಆಹ್ವಾನ ನೀಡದೆ ಇದ್ದರೆ, ನಾವು ಪುನಃ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮತ್ತೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.












Click it and Unblock the Notifications