ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಯಲ್ಲಿ ಬಿಎಸ್ವೈಗೆ ಭಾರೀ ಬೇಡಿಕೆ: ಶಾಸಕರು ಏನಂತಾರೆ? ಇಲ್ಲಿದೆ ಇನ್ಸೈಡ್ ರಿಪೋರ್ಟ್
ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಯಲ್ಲಿ ಬಿಎಸ್ವೈಗೆ ಭಾರೀ ಬೇಡಿಕೆ ಶುರುವಾಗಿದೆ. ಉತ್ತರ ಕರ್ನಾಟಕದ ಲಿಂಗಾಯತ ಶಾಸಕರು ಬಿಎಸ್ವೈ ಮನೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ಶಾಸಕರ ಬೇಡಿಕೆ ಏನು? ಎಂಬುದರ ಇನ್ಸೈಡ್ ವರದಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 02: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವಲ್ಲಿ ಹಲವಾರು ಕಸರತ್ತುಗಳನ್ನು ಮಾಡುತ್ತಿದೆ. ಪ್ರಸ್ತುತ ಆಡಳಿತದಲ್ಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. 40 ಪರ್ಸೆಂಟ್ ಕಮಿಷನ್ ಆರೋಪ, ಪಂಚಮಸಾಲಿ ಮೀಸಲಾತಿ ವಿಚಾರ, ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಸೇರಿದಂತೆ ಹಲವಾರು ಸಂಕಷ್ಟಗಳನ್ನು ಬಿಜೆಪಿ ಎದುರಿಸುತ್ತಿದೆ. ಇದೇ ವೇಳೆ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಲಿಂಗಾಯತ ಸಮೂದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿಯೂ ಬಿಜೆಪಿ ಇದೆ ಎಂದು ರಾಜಕೀಯ ವಿಶ್ಲೇಷಕರ ವಾದವಾಗಿದೆ. ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮೂದಾಯಕ್ಕೆ ಸೇರದವರಾಗಿದ್ದರೂ, ಯಡಿಯೂರಪ್ಪನವರಷ್ಟು ಪ್ರಭಾವವನ್ನು ಹೊಂದಿಲ್ಲವೆಂಬುದಂತೂ ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಗೆ ಈ ಸಾರಿಯೂ ಯಡಿಯೂರಪ್ಪನವರೇ ಗತಿ ಎಂಬ ವಾದಗಳು ಕೇಳಿಬಂದಿವೆ. ಈ ವಾದಕ್ಕೆ ಪುಷ್ಠಿ ನೀಡುವಂತೆ ಉತ್ತರ ಕರ್ನಾಟಕದ ಬಿಜೆಪಿ ಲಿಂಗಾಯತ ಶಾಸಕರು ಮಾತನಾಡಿದ್ದಾರೆ.
Karnataka Assembly Elections 2023: ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯ ನಂತರವೇ ರಾಜ್ಯ ವಿಧಾನಸಭೆ ಚುನಾವಣೆ?
ನಿದ್ದೆಗಳಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಶಾಸಕರು
ಲಿಂಗಾಯತರ ಪ್ರಬಲ ನಾಯಕರೆಂದೇ ಬಿಂಬಿತರಾಗಿರುವ ಬಿ ಎಸ್ ಯಡಿಯೂರಪ್ಪ ಅವರನ್ನು ಪಕ್ಷವು ದೂರತಳ್ಳುತ್ತಿದೆ ಎಂಬ ಆತಂಕವನ್ನು ಶಾಸಕರು ವ್ಯಕ್ತಪಡಿಸುತ್ತಿದ್ದಾರೆ. ಇದು ಬಿಜೆಪಿಯ ಲಿಂಗಾಯತ ಶಾಸಕರಲ್ಲಿ ಹೆಚ್ಚು ಗೊಂದಲವನ್ನು ಸೃಷ್ಟಿಸಿದೆ. ಕೆಲ ಲಿಂಗಾಯತ ಶಾಸಕರಿಗೆ ಬಿಎಸ್ವೈ ಅನಿವಾರ್ಯವೆಂದು ಹೇಳಲಾಗುತ್ತಿದೆ. ಅವರ ಹೆಸರು ಹೇಳಿಕೊಂಡು ಮತಗಳನ್ನು ಪಡೆಯುವುದು ಕೆಲ ಶಾಸಕರಿಗೆ ಸುಲಭದ ಕೆಲಸವೆಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ನಿವಾಸ ಧವಳಗಿರಿಯಲ್ಲಿ ಅವರನ್ನು ಭೇಟಿ ಮಾಡಲು ಶಾಸಕರು ಮತ್ತು ಮುಖಂಡರು ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಲೇ ಶಾಸಕರಲ್ಲಿರುವ ಆತಂಕ ಗೊತ್ತಾಗುತ್ತದೆ ವಾದಗಳು ಹುಟ್ಟಿಕೊಂಡಿವೆ.
ಆಡಳಿತ ವಿರೋಧಿ ಜ್ವಾಲೆ ನಂದಿಸುವ ಮಾರ್ಗ
ಬಿಜೆಪಿ ಶಾಸಕರ ಪ್ರಕಾರ, ಆಡಳಿತ ವಿರೋಧಿ ಜ್ವಾಲೆಯನ್ನು ನಂದಿಸುವ ಒಂದು ಮಾರ್ಗವೆಂದರೆ ಯಡಿಯೂರಪ್ಪನವರಿಂದ ಅವರ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿಸುವುದು. ಯಡಿಯೂರಪ್ಪ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಆದರೆ ಅವರು ಮತದಾರರ ಮೇಲೆ ಪ್ರಭಾವ ಬೀರಲು ಸಾಕಷ್ಟು ಶಕ್ತಿ ಹೊಂದಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಉತ್ತರ ಕರ್ನಾಟಕ ಅಪಾಯದ ಸೂಚನೆ
ಲಿಂಗಾಯತರೇ ಅಧಿಕವಾಗಿರುವ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿಗೆ ಅಪಾಯದ ಸೂಚನೆಗಳು ಎದುರಾಗಿವೆ. 'ಈ ಸಂದರ್ಭ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಪ್ರತಿರೋಧವನ್ನು ಎದುರಿಸುತ್ತಿದೆ. ಇದೇ ಪ್ರದೇಶದಿಂದ ಬಸವರಾಜ ಬೊಮ್ಮಾಯಿ ಬಂದಿದ್ದಾರೆ. ಆದರೂ, ಪ್ರತಿರೋಧವನ್ನು ವ್ಯಕ್ತವಾಗುತ್ತಿರುವ ಅಪಾಯದ ಮುನ್ಸೂಚನೆ' ಎಂದು ಚುನಾವಣಾ ವಿಶ್ಲೇಷಣಾ ಸಂಸ್ಥೆ '5 ಫಾರ್ಟಿ 3 ಡಾಟಾಲಾಬ್ಸ್' ಸಂಸ್ಥಾಪಕ ಪ್ರವೀಣ್ ಪಾಟೀಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ. 'ಹೈದರಾಬಾದ್-ಕರ್ನಾಟಕ ಮಾತ್ರವಲ್ಲ, ಮುಂಬೈ-ಕರ್ನಾಟಕದಲ್ಲೂ ಅಧಿಕಾರ ವಿರೋಧಿ ಅಲೆ ಹೆಚ್ಚಿದ್ದು, ಇದು ದೊಡ್ಡ ಅಪಾಯದ ಸಂಕೇತವಾಗಿದೆ,' ಎಂದು ಅವರು ಹೇಳಿದ್ದಾರೆ.
ಪ್ರಚಾರ ಮಾಡುವಂತೆ ಕೇಳಿಕೊಂಡ ಶಾಸಕರು
ವಿಶೇಷವಾಗಿ ಉತ್ತರ ಕರ್ನಾಟಕದ ಅನೇಕ ಶಾಸಕರು ಯಡಿಯೂರಪ್ಪ ಅವರಿಗೆ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ, ವೈಯಕ್ತಿಕವಾಗಿ ಪ್ರಚಾರ ಮಾಡುವುದು ಅಸಾಧ್ಯ ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ, ಮತದಾರರಲ್ಲಿ ಹುಮ್ಮಸ್ಸು ಮೂಡಿಸಲು ಯಡಿಯೂರಪ್ಪನವರು ಅಂತಹ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಮಾಡಲು ಶಾಸಕರು ಜಾತಿ ಆಧಾರಿತ ಸಮಾವೇಶಗಳು ಅಥವಾ ದೇವಾಲಯಗಳ ನವೀಕರಣ ಕಾರ್ಯಕ್ರಮಗಳಂತಹ ರಾಜಕೀಯೇತರ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾರಂಭಿಸಿದ್ದಾರೆ.
ಯಡಿಯೂರಪ್ಪ ಭೇಟಿಯಿಂದ ಸಹಾಯ
ಯಡಿಯೂರಪ್ಪ ಅವರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಶಾಸಕರಿಗೆ ಸಹಾಯವಾಗಲಿದೆ ಎಂದು ಹತ್ತಕ್ಕೂ ಹೆಚ್ಚು ಬಿಜೆಪಿ ಶಾಸಕರು, 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ. ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಯಡಿಯೂರಪ್ಪನವರ ಜಾತಿಯ ಗಡಿಗಳನ್ನೂ ಮೀರಿ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. 'ಅದಕ್ಕಾಗಿಯೇ ಶಾಸಕರು ಅವರಿಗೆ ಆದ್ಯತೆ ನೀಡುತ್ತಾರೆ. ಅವರು ನಮ್ಮ ಮಹೋನ್ನತ ನಾಯಕ ಎಂದು ಎಲ್ಲರಿಗೂ ತಿಳಿದಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.
ಬಿಎಸ್ವೈ ಅನಿವಾರ್ಯ ನಾಯಕ
ನೇಕಾರ ಸಮುದಾಯದ ‘ಪ್ರಬಲ ಮಠಾಧೀಶರು' ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವಂತೆ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದರು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ನಾನೂ ಭಾಗವಹಿಸಿದ್ದೇನೆ ಎಂದ್ದಾರೆ. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, 'ಯಡಿಯೂರಪ್ಪ ಎರಡು ಬಾರಿ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಅವರೊಬ್ಬ ಅನಿವಾರ್ಯ ನಾಯಕ. ಇಡೀ ಪಕ್ಷಕ್ಕೆ ಅವರ ಅಗತ್ಯವಿದೆ' ಎಂದು ತಿಳಿಸಿದ್ದಾರೆ.