ಚುನಾವಣೆ ಹತ್ತಿರದಲ್ಲಿ ಬದಲಾದ ಬಿಜೆಪಿ ವರಸೆ: ಕರ್ನಾಟಕದಲ್ಲಿ ಮುಸ್ಲಿಮರಿಗೆ ಟಿಕೆಟ್? ಹಿಂದೂತ್ವ ಅಜೆಂಡಾ ಕೈಕೊಡುವ ಸೂಚನೆ?
ಬೆಂಗಳೂರು, ಜನವರಿ 20: 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಗೂ ಮುನ್ನ ಮುಸ್ಲಿಂ ಮತದಾರರನ್ನು ಸೆಳೆಯಲು ಬಿಜೆಪಿ ಕ್ರಮ ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವಥ್ ನಾರಾಯಣ್ ಗುರುವಾರ ಹೇಳಿದ್ದಾರೆ. ಎಲ್ಲಾ ಮುಸ್ಲಿಮರು ಕೆಟ್ಟವರು ಎಂದು ಬಿಜೆಪಿ ಎಂದಿಗೂ ಹೇಳಿಲ್ಲ. ಆದರೆ, ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದೇ ಸಮುದಾಯವನ್ನು ಓಲೈಸುವ ರೀತಿಯಲ್ಲಿ ನಮ್ಮ ಪಕ್ಷ ಎಂದಿಗೂ ತುಷ್ಟೀಕರಣ ರಾಜಕಾರಣ ಮಾಡಿಲ್ಲ ಎಂದು ಅಶ್ವಥ್ ನಾರಾಯಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, 'ಪ್ರಧಾನಿ ಮೋದಿ ಅವರು ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತಿಳಿಸಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಮುಸ್ಲಿಮರ ಮತಗಳನ್ನು ಸೆಳೆಯಲು ಹೇಳಿದ್ದಾರೆ. ಮುಸ್ಲಿಮರ ಮತಗಳೊಂದಿಗೆ ನಾವು ರಾಜ್ಯದಲ್ಲಿ 140 ಸ್ಥಾನಗಳನ್ನು ಗೆಲ್ಲಲಿದ್ದೇವೆ' ಎಂದು ಹೇಳಿದ್ದರು.
ಮತ ನೀಡುವಂತೆ ಮುಸ್ಲಿಮರಿಗೆ ಮನವರಿಕೆ
'ಹೈದರ್ ಅಲಿ, ಟಿಪ್ಪು ಸುಲ್ತಾನ್ನಂತೆ ಮತಾಂಧ ಎಂದು ನಾವು ಎಂದಿಗೂ ಹೇಳಿಲ್ಲ. ಹೈದರ್ ಅಲಿ ಉತ್ತಮ ಆಡಳಿತಗಾರನಾಗಿದ್ದ. ಆತನ ಮಗ ಮತಾಂಧ ಮತ್ತು ಕನ್ನಡ ವಿರೋಧಿಯಾಗಿದ್ದ. ಇದೇ ಮಾದರಿಯಲ್ಲಿ, ಉತ್ತಮ ಮುಸ್ಲಿಮರಾಗಿರುವ ಮುಸ್ಲಿಮರು ಬಹಳಷ್ಟು ಇದ್ದಾರೆ. ನಾವು ಅವರಿಗೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ವಿವರಿಸಲು ಪ್ರಯತ್ನಿಸುತ್ತೇವೆ ಮತ್ತು ಈ ಚುನಾವಣೆಯಲ್ಲಿ ನಮಗೆ ಮತ ನೀಡುವಂತೆ ಮನವರಿಕೆ ಮಾಡುತ್ತೇವೆ' ಎಂದು ಸಚಿವರು ತಿಳಿಸಿದ್ದಾರೆ.
ಮುಸ್ಲಿಮರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿದೆ
ಜನವರಿ 21 ರಿಂದ ಎರಡು ಕೋಟಿ ಮತದಾರರನ್ನು ತಲುಪುವ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನದ ಉಸ್ತುವಾರಿ ವಹಿಸಿರುವ ಸಿ ಎನ್ ಅಶ್ವಥ್ ನಾರಾಯಣ್ ವಹಿಸಿದ್ದಾರೆ. ಇದೇ ವೇಳೆ, ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, 'ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರನ್ನು ಒಟ್ಟಿಗೆ ಕರೆದುಕೊಂಡು ಹೋಗುವಂತೆ ಬಿಜೆಪಿ ನಾಯಕರಿಗೆ ಹೇಳಿದ್ದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಇದು ಅವಶ್ಯಕವಾಗಿದೆ. ನಾವು ಮುಸ್ಲಿಮರಿಗೆ ಮನವರಿಗೆ ಮಾಡಿ ಕೊಡುತ್ತೇವೆ. ನಮ್ಮ ಕಾರ್ಯಕ್ರಮಗಳು ಅವರ ಪರವಾಗಿವೆ ಎಂಬುದಾಗಿ ತಿಳಿಸುತ್ತೇವೆ' ಎಂದು ಹೇಳಿದ್ದಾರೆ.
ಬಿಜೆಪಿಗೆ ಯಾವುದೇ ಪೈಪೋಟಿ ಇಲ್ಲ
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಪೈಪೋಟಿ ಇಲ್ಲ ಎಂದು ಪ್ರತಿಪಾದಿಸಿದ ಅಶ್ವಥ್ ನಾರಾಯಣ್, ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುಕ್ಕಾಣಿ ಹಿಡಿದಿರುವುದರಿಂದ ಪಕ್ಷವು ‘ಆಡಳಿತ ವಿರೋಧಿ' ಅಲೆಯನ್ನು ಸೋಲಿಸುವ ಕಲೆಯನ್ನು ಬಹಳ ಹಿಂದೆಯೇ ಕಲಿತಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಯಾವುದೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿಲ್ಲ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಗುಜರಾತ್ನಂತೆ ಅಚ್ಚರಿ ಮೂಡಿಸುವುದು ಖಚಿತ
'ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂದು ಯಾರಾದರೂ ಹೇಳಿದರೆ, ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಅದು ಅವರ ಮುಖದ ಹೊಡೆದಂತೆ ಆಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಕ್ಕೂ ಹೀನಾಯ ಸೋಲು ಉಂಟಾಗುತ್ತದೆ. ಈ ಮೂಲಕ ಕರ್ನಾಟಕವು ಗುಜರಾತ್ನಂತೆ ಅಚ್ಚರಿ ಮೂಡಿಸುವುದು ಖಚಿತ. ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕಾಗಿ ಎರಡೂ ಪಕ್ಷಗಳು ಪೈಪೋಟಿ ನಡೆಸುತ್ತಿವೆ' ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಂ ಜನಸಂಖ್ಯೆ ಎಷ್ಟಿದೆ?
ಕರ್ನಾಟಕದಲ್ಲಿ ಒಟ್ಟು 6,10,95,297 ( ಆರು ಕೋಟಿ ಹತ್ತು ಲಕ್ಷಕ್ಕೂ ಅಧಿಕ ) ಜನಸಂಖ್ಯೆ ಇದೆ. ಅದರಲ್ಲಿ ಮಸ್ಲಿಮರ ಜನಸಂಖ್ಯೆ 78,93,065 ( ಎಪ್ಪತ್ತೆಂಟು ಲಕ್ಷಕ್ಕೂ ಅಧಿಕ) ಇದೆ. ಇದು ಕರ್ನಾಟಕ ಜನಸಂಖ್ಯೆಯ ಒಟ್ಟು ಶೇ. 12.92 ಭಾಗವನ್ನು ಹೊಂದಿದೆ. ಬಿಜೆಪಿ ಈ ಮತಗಳ ಮೇಲೆ ಕಣ್ಣಿಟ್ಟಿದೆ ಎಂಬ ಚರ್ಚೆಗಳು ಕೇಳಿಬಂದಿದೆ. ಲಿಂಗಾಯತರು ಹಾಗೂ ಬ್ರಾಹ್ಮಣರ ಮತಗಳನ್ನು ನೆಚ್ಚಿಕೊಂಡರೆ, ಈ ಬಾರಿ ಬಿಜೆಪಿಗೆ ಹೊಡೆತ ಬೀಳಲಿದೆಯಾ ಎಂಬ ಮಾತುಗಳೂ ಕೇಳಿಬಂದಿವೆ.
ಹಿಂದೂತ್ವ ಅಜೆಂಡಾ ಕೈಕೊಡುವ ಸೂಚನೆ?
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಹಿಂದೂತ್ವ ಅಜೆಂಡಾವನ್ನು ಮುಂದು ಮಾಡಲು ಪ್ರಯತ್ನಿಸಿತು. ಟಿಪ್ಪು ವಿವಾದ, ಪಠ್ಯಕ್ರಮ ಪರಿಷ್ಕರಣೆ, ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ, ಮತಾಂತರ ನಿಷೇಧ ಮಸೂದೆಯಂತಹ ಕ್ರಮಗಳನ್ನು ಕೈಗೊಳ್ಳಲು ಮುಂದಾಯಿತು. ಆದರೆ, ಇದು ರಾಜ್ಯದಲ್ಲಿ ಕೆಲಸ ಮಾಡಿಲ್ಲ ಎಂಬ ಸೂಚನೆಗಳು ಬಿಜೆಪಿ ನಾಯಕರಿಗೆ ಲಭಿಸಿದಂತಿದೆ ಎಂಬ ವಿಶ್ಲೇಷಣೆಗಳು ಮುನ್ನೆಲೆಗೆ ಬಂದಿವೆ.
ಮುಸ್ಲಿಂ ಮುಖಂಡರಿಗೆ ಟಿಕೆಟ್?
ಹಿಂದೆ ನಡೆದ ಗುಜರಾತ್, ಯುಪಿ, ಮಧ್ಯಪ್ರದೇಶ ಚುನಾವಣೆಗಳಲ್ಲಿ ಯಾವುದೇ ಮುಸ್ಲಿಂ ಮುಖಂಡರಿಗೆ ಬಿಜೆಪಿ ಟಿಕೆಟ್ ನೀಡಲ್ಲ. ಕಳೆದ ಬಾರಿಯ ಕರ್ನಾಟಕ ಚುನಾವಣೆಯಲ್ಲೂ ಮುಸ್ಲಿಂ ಸಮುದಾಯದ ಮುಖಂಡರಿಗೆ ಟಿಕೆಟ್ ಕೊಟ್ಟಿಲ್ಲ. ಆದರೆ, ಈ ಬಾರಿ ಮುಸ್ಲಿಮರನ್ನು ಓಲೈಕೆಯಲ್ಲಿ ಬಿಜೆಪಿ ನಿರತವಾಗಲಿದೆ ಎಂಬುದು ನಾಯಕರ ಈಗಿನ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ಹೀಗಾಗಿ, ಮುಸ್ಲಿಂ ಮುಖಂಡರಿಗೆ ಒಂದೆಡರು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ನೀಡಬಹುದೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.