ಸಿದ್ದು ವಿರುದ್ಧ ಸ್ಪರ್ಧಿಸದಂತೆ ಕುರುಬ ಸಮುದಾಯ, ಸ್ವಾಮೀಜಿ, ಬೆಂಬಲಿಗರ ತೀವ್ರ ಒತ್ತಡ?: ವರ್ತೂರು ಪ್ರಕಾಶ್ ಮುಂದಿನ ನಡೆಯೇನು?
ಬೆಂಗಳೂರು, ಜನವರಿ 19: ಕರ್ನಾಕದ ವಿಧಾನಸಭೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿ ಇವೆ. ರಾಜ್ಯ ಮೂರು ಪಕ್ಷಗಳು ಚುನಾವಣೆಗೆ ವ್ಯಾಪಕ ಸಿದ್ದತೆ ನಡೆಸುತ್ತಿವೆ. ಇದೇ ವೇಳೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅವರ ವಿರುದ್ಧ ಯಾರು ಪ್ರತಿಸ್ಪರ್ಧಿ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಇದೇ ವೇಳೆ, ಕೋಲಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಗಮನ ಸೆಳೆದಿವೆ.

ಕೋಲಾರದಲ್ಲಿಯೇ ಸಿದ್ದರಾಮಯ್ಯ ಸ್ಪರ್ಧೆ ಏಕೆ?
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆಯ ಬಾದಾಮಿ ಕ್ಷೇತ್ರಗಳಲ್ಲಿ ಕಣಕ್ಕಿಳಿದ್ದರು. ಆದರೆ, ಒಕ್ಕಲಿಗರ ಮತಗಳು ಹೆಚ್ಚಿರುವ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ನ ಜಿ.ಟಿ.ದೇವಗೌಡರ ವಿರುದ್ಧ ಸೋಲು ಅನುಭವಿಸಿದ್ದರು. ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಗೆಲುವು ದಾಖಲಿಸಿದ್ದರು. ಬಾದಾಮಿಯಲ್ಲಿ ಕುರುಬ ಸಮುದಾಯದ ಮತಗಳು ಹೆಚ್ಚಿವೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದು ಚರ್ಚೆಗಳಾಗಿದ್ದವು. ಇದೇ ರೀತಿಯ ತಂತ್ರವನ್ನು ಸಿದ್ದರಾಮಯ್ಯ ಕೋಲಾರದಲ್ಲಿ ಹೆಣೆದಿದ್ದಾರೆ ಎಂಬ ವಿಶ್ಲೇಷಣೆಗಳು ಮುನ್ನೆಲೆಗೆ ಬಂದಿವೆ. ಕುರುಬ ಮತಗಳು ಹೆಚ್ಚಿವೆ ಎಂಬ ಕಾರಣಕ್ಕೆ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಸಿದ್ದು ವಿರುದ್ಧ ಕಣಕ್ಕಿಳಿಯದಿರಲು ವರ್ತೂರು ಪ್ರಕಾಶ್ ಮೇಲೆ ಒತ್ತಡ?
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿಯ ಸಂಭವನೀಯ ಅಭ್ಯರ್ಥಿ ಆಗಿದ್ದಾರೆ. ಅವರೂ ಸಹ ಕುರುಬ ಸಮುದಾಯಕ್ಕೆ ಸೇರಿದವರು. ಪ್ರಕಾಶ್ ಮೇಲೆ ಕುರುಬ ಸಮುದಾಯದ ಮುಖಂಡರು, ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ತೀವ್ರ ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸದಂತೆ ತಡೆಯುತ್ತಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ.

ವರ್ತೂರು ಪ್ರಕಾಶ್ ಹೇಳಿದ್ದೇನು?
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಯದಂತೆ ಕುರುಬ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳು ನನ್ನ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ. ಈ ವಿಚಾರವಾಗಿ ಬುಧವಾರ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. 'ನನ್ನ ಮೇಲೆ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಕುರುಬ ಸಮುದಾಯದ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಈ ಒತ್ತಡಕ್ಕೆ ಮಣಿದು ವರ್ತೂರು ಪ್ರಕಾಶ್ ಅವರು ಕೊನೆಯ ಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ. ಸ್ಪರ್ಧಿಸಿದರೂ ರಾಜೀ ಮಾಡಿಕೊಳ್ಳಲಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ತಟಸ್ಥವಾಗಿ ಇರಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳನ್ನು ಹಬ್ಬಿಸಲಾಗುತ್ತಿದೆ. ಈ ಮೂಲಕ ನನ್ನ ವ್ಯಕ್ತಿತ್ವವನ್ನು ತೇಜೋವಧೆ ಮಾಡುವ ಪ್ರಯತ್ನಗಳು ನಡೆದಿವೆ' ಎಂದು ಪ್ರಕಾಶ್ ತಿಳಿಸಿದ್ದಾರೆ.

ಊಹಾಪೋಹಗಳು ವಾಸ್ತವಕ್ಕೆ ದೂರ ಎಂದ ವರ್ತೂರು
ಈ ಊಹಾಪೋಹಗಳು ವಾಸ್ತವಕ್ಕೆ ದೂರವಾಗಿವೆ. ನಾನು ಹೈ ವೋಲ್ಟೇಜ್ ವಿದ್ಯುತ್ ತಂತಿ ಇದ್ದಂತೆ. ನನ್ನನ್ನು ಮುಟ್ಟಲು ಬಂದವರು, ನನ್ನ ಮೇಲೆ ಒತ್ತಡ ಹೇರುವವರು ಸುಟ್ಟು ಭಸ್ಮವಾಗಲಿದ್ದಾರೆ ಎಂದು ಪ್ರಕಾಶ್ ಹೇಳಿದ್ದಾರೆ. 'ನನಗೆ ಸಿದ್ದರಾಮಯ್ಯ ಮೇಲೆ ಅಪಾರ ಗೌರವವಿತ್ತು. ಆದರೆ, ಅವರು ಕೋಲಾರದಿಂದ ಸ್ಪರ್ಧಿಸುತ್ತೇನೆಂದು ಹೇಳಿದ ಮೇಲೆ ನನಗೆ ಗೌರವ ಕಡಿಮೆಯಾಯಿತು. ಕಾರಣ, ಕುರುಬ ಸಮುದಾಯದ ನನ್ನನ್ನು ಚಿವುಟಿ ಹಾಕಲು ಈ ತಂತ್ರ ನಡೆದಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.

ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಯೆಂದ ಸಿದ್ದು
ನಾನು ಕಳೆದ ಬಾರಿಯಂತೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಅದು ಕೋಲಾರದಿಂದ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈಗ ಶಾಸಕರಾಗಿರುವ ಜೆಡಿಎಸ್ನ ಶ್ರೀನಿವಾಸಗೌಡರು ಕಾಂಗ್ರೆಸ್ ಸೇರಿದ್ದಾರೆ. ಸಿದ್ದರಾಮಯ್ಯನವರಿಗೆ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಪರ ಕೆಲಸ ಮಾಡಲು ತಮ್ಮ ಬೆಂಬಲಿಗರಿಗೆ ಕೇಳಿಕೊಂಡಿದ್ದಾರೆ. ಈ ಮೂಲಕ ಒಕ್ಕಲಿಗ ಸಮುದಾಯದ ಮತಗಳೂ ಸಿದ್ದರಾಮಯ್ಯನವರಿಗೆ ಬರುವಂತೆ ತಂತ್ರ ರೂಪಿಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಇದು ಸಿದ್ದರಾಮಯ್ಯನ ಗೆಲುವಿಗೆ ಹೆಚ್ಚು ಮಹತ್ವವಾಗಲಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ಮುನ್ನೆಲೆಗೆ ಬಂದಿವೆ. ಒಂದು ವೇಳೆ, ಕುರುಬ ಹಾಗೂ ಒಕ್ಕಲಿಗರ ಹೆಚ್ಚಿನ ಮತಗಳು ಸಿದ್ದರಾಮಯ್ಯನವರ ಕಡೆಗೆ ವಾಲಿದರೇ ಮಾಜಿ ಸಿಎಂ ಗೆಲುವು ಸಲೀಸಾಗಲಿದೆ.












Click it and Unblock the Notifications