ಈ ಮೂವರಲ್ಲಿ ಎರಡನೆಯ ಬಾರಿ ಸಿಎಂ ಗಾದಿಯ ಅದೃಷ್ಟ ಯಾರಿಗೆ?
ಬೆಂಗಳೂರು, ಮೇ 14: ಹಿಂದೆಂದೂ ಇರದಂತಹ ತೀವ್ರ ಕುತೂಹಲವನ್ನು ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಸೃಷ್ಟಿಸಿದೆ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು, ಯಾರು ಮುಖ್ಯಮಂತ್ರಿ ಆಗಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಜನಸಾಮಾನ್ಯರ ನಡುವೆಯೂ ಚರ್ಚೆಗೆ ಒಳಗಾಗುತ್ತಿದೆ.
ಇದರೆ ನಡುವೆ ಎರಡನೆಯ ಬಾರಿ ಮುಖ್ಯಮಂತ್ರಿ ಪದವಿಗೆ ಏರುವ ಭಾಗ್ಯ ಯಾರಿಗೆ ಸಿಗಲಿದೆ ಎಂಬ ಕೌತುಕ ಹೆಚ್ಚಾಗಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ. ಈ ಮೂವರಲ್ಲಿ ಒಬ್ಬರು ಅಧಿಕಾರ ಹಿಡಿದರೂ ಎರಡು ದಶಕದ ಪರಂಪರೆಯನ್ನು ಮುರಿದ ಇತಿಹಾಸ ನಿರ್ಮಿಸಲಿದ್ದಾರೆ.
ಜ್ಯೋತಿಷಿಗಳ ಭವಿಷ್ಯ : ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ, ಬಿಜೆಪಿಗೆ ಲಾಭ
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಮತದಾರರು ಯಾವ ಪಕ್ಷಕ್ಕೂ ಸರಳ ಬಹುಮತ ನೀಡುವುದಿಲ್ಲ. ಆದರೆ ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸರ್ಕಾರ ರಚನೆಯ ಸುಲಭ ಅವಕಾಶ ಸಿಗಲಿದೆ ಎಂದು ಹೇಳುತ್ತಿವೆ.
ಕರ್ನಾಟಕ ವಿಧಾನಸಭೆ ಇತಿಹಾಸ ನಿಮಗೆಷ್ಟು ಗೊತ್ತು?
1990ರಲ್ಲಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ಇದುವರೆಗೂ ಯಾವ ರಾಜಕೀಯ ಪಕ್ಷದ ನಾಯಕರೂ ಎರಡನೆಯ ಬಾರಿಗೆ ಮುಖ್ಯಮಂತ್ರಿ ಆಗಿಲ್ಲ ಎನ್ನುವುದು ಗಮನಾರ್ಹ.
ರಂಗದಲ್ಲಿ ಮೂವರ ಹೆಸರು
ಬಿಜೆಪಿಯು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡು ಪ್ರಚಾರಕ್ಕಿಳಿದಿತ್ತು. ಜೆಡಿಎಸ್ ಕೂಡ ಎಚ್.ಡಿ. ಕುಮಾರಸ್ವಾಮಿ ಅವರ ನಾಮಬಲದಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ.
ಕಾಂಗ್ರೆಸ್ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿರಲಿಲ್ಲ. 40 ವರ್ಷದ ಬಳಿಕ ರಾಜ್ಯದಲ್ಲಿ ಪೂರ್ಣಾವಧಿ ಐದು ವರ್ಷದ ಆಡಳಿತ ನಡೆಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿರುವ ಸಿದ್ದರಾಮಯ್ಯ ಅವರೇ ಮುಂಚೂಣಿಯಲ್ಲಿದ್ದಾರೆ.
ಕಾಂಗ್ರೆಸ್ನಲ್ಲಿ ಯಾರಾಗಬಹುದು ಸಿಎಂ?
ಕಾಂಗ್ರೆಸ್ನಲ್ಲಿ ಯಶಸ್ವಿ ಐದು ವರ್ಷದ ಆಡಳಿತ ಪೂರೈಸಿದ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತ ಘೋಷಣೆ ಮಾಡದಿದ್ದರೂ, ಅಧಿಕಾರಕ್ಕೆ ಬಂದರೆ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವುದು ಸೂಕ್ತ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ವೇಳೆ ಅವರು ದಲಿತ ನಾಯಕರು ಸಿಎಂ ಆಗುವುದನ್ನು ಕಾಂಗ್ರೆಸ್ ತಪ್ಪಿಸಿತ್ತು ಎಂಬ ದಾಳ ಉರುಳಿಸಿದ ಬಳಿಕ ಈಗ ದಲಿತ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಗಟ್ಟಿಯಾದರೆ, ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿದ್ದರಾಮಯ್ಯ ಅವರಿಗೆ ಕೈತಪ್ಪಬಹುದು.
ಸ್ಥಿರ ಸರ್ಕಾರ ನಡೆಸಿದ ಬಲ ಅವರ ಬೆನ್ನಿಗೆ ಇರುವುದರಿಂದ ಸಿದ್ದರಾಮಯ್ಯ ಅವರನ್ನೇ ಪರಿಗಣಿಸಿದರೆ ವೀರೇಂದ್ರ ಪಾಟೀಲ ಅವರ ನಂತರ ಸತತ ಎರಡು ಬಾರಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಲಿದ್ದಾರೆ.
ಇತಿಹಾಸದಿಂದ ಇದುವರೆಗೆ, ಈ ಕ್ಷೇತ್ರದಲ್ಲಿ ಗೆದ್ದವರದ್ದೇ ಸರಕಾರ ಖಚಿತ!
ಯಡಿಯೂರಪ್ಪಗೆ ಇದೆಯೇ ಚಾನ್ಸ್?
ಸಮ್ಮಿಶ್ರ ಸರ್ಕಾರದಲ್ಲಾದ ವಂಚನೆಯ ಅನುಕಂಪದ ಆಧಾರದಲ್ಲಿ 2008ರಲ್ಲಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾದ ಬಿಜೆಪಿ ಸರ್ಕಾರ, ಐದು ವರ್ಷದುದ್ದಕ್ಕೂ ಗೊಂದಲದ ಗೂಡಾಗಿಯೇ ಮುಂದುವರಿದಿತ್ತು. ಸುಮಾರು ಐದು ದಶಕದ ರಾಜಕೀಯ ಹೋರಾಟದ ನಂತರ ಮುಖ್ಯಮಂತ್ರಿ ಪಟ್ಟಕ್ಕೇರಿದ್ದ ಯಡಿಯೂರಪ್ಪ, ಐದು ವರ್ಷದವರೆಗೂ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗುವ ವೇಳೆಗೆ ಮೂರು ವರ್ಷ ಮಾತ್ರ ಅಧಿಕಾರದಲ್ಲಿದ್ದರು. ಇನ್ನೆರಡು ವರ್ಷ ಡಿ.ವಿ. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಸರ್ಕಾರದ ಅವಧಿ ಪೂರ್ಣಗೊಳಿಸಿದ್ದರು.
ಸಮ್ಮಿಶ್ರ ಸರ್ಕಾರದಲ್ಲಿ ಎಚ್ಡಿಕೆ
2004ರಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಜೆಡಿಎಸ್, ಕಾಂಗ್ರೆಸ್ಗೆ ಬೆಂಬಲ ನೀಡಿತ್ತು. ಕಾಂಗ್ರೆಸ್ನ ಧರಂ ಸಿಂಗ್ ಎರಡು ವರ್ಷ ಆಡಳಿತ ನಡೆಸಿದ್ದರು. ದಿಢೀರ್ ಬೆಳವಣಿಗೆಯಲ್ಲಿ ಕುಮಾರಸ್ವಾಮಿ, ಬಿಜೆಪಿ ಜತೆ ಕೈಜೋಡಿಸಿ 20-20 ತಿಂಗಳ ಅಧಿಕಾರ ಹಂಚಿಕೆ ಸೂತ್ರದಡಿ ಮುಖ್ಯಮಂತ್ರಿಯಾಗಿದ್ದರು.
ಆದರೆ, ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಅದನ್ನು ಬಿಜೆಪಿಗೆ ಬಿಟ್ಟುಕೊಡಲು ನಿರಾಕರಿಸಿದ್ದರು. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳ ಅನ್ವಯ, ಈ ಬಾರಿ ಸರ್ಕಾರ ರಚನೆಗೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಜೆಡಿಎಸ್ ಬೆಂಬಲ ಅನಿವಾರ್ಯವಾಗಲಿದೆ. ಅಧಿಕಾರ ಹಂಚಿಕೆ ಒಪ್ಪಂದದ ಸೂತ್ರ ಮತ್ತೆ ಜಾರಿಯಾದರೆ ಕುಮಾರಸ್ವಾಮಿ ಅವರು ಎರಡನೆಯ ಅವಧಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಚುನಾವಣಾ ಪೂರ್ವ -ಉತ್ತರ ಸಮೀಕ್ಷೆಗಳ ಸರಾಸರಿ : ಅತಂತ್ರ ವಿಧಾನಸಭೆ
ಐದೇ ವರ್ಷದಲ್ಲಿ ಮೂರು ಬಾರಿ ಸಿಎಂ
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಅವರ ಆಡಳಿತ ಹೆಚ್ಚು ವಿಶೇಷವಾಗಿದೆ. 1983ರಿಂದ 1988ರ ಅವಧಿಯಲ್ಲಿ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ಜನತಾಪಕ್ಷ 1983ರಲ್ಲಿ ಅಧಿಕಾರಕ್ಕೆ ಬಂದಾಗ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದರು.
ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. 1985ರಲ್ಲಿ ಪಕ್ಷ 139 ಸೀಟುಗಳೊಂದಿಗೆ ಮತ್ತೆ ಗೆದ್ದಾಗ ಪುನಃ ಮುಖ್ಯಮಂತ್ರಿಯಾದರು. ಭ್ರಷ್ಟಾಚಾರ ಆರೋಪ ಹೊತ್ತಾಗ 1986ರ ಜನವರಿ 13ರಂದು ರಾಜೀನಾಮೆ ನೀಡಿದ ಅವರು, ಮತ್ತೆ ಮೂರು ದಿನಗಳಲ್ಲಿಯೇ ಮುಖ್ಯಮಂತ್ರಿಯಾದರು.
18 ವರ್ಷದ ಅಂತರದಲ್ಲಿ ಸಿಎಂ
ಕಲಬುರಗಿ ಭಾಗದ ಪ್ರಭಾವಿ ಮುಖಂಡರಾಗಿದ್ದ ವೀರೇಂದ್ರ ಪಾಟೀಲ ಅವರು ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರ ವಹಿಸಿಕೊಂಡಿದ್ದರು. ಅವರು 1968 ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ್ದ ಅವರು ಮೂರು ವರ್ಷ ಆಡಳಿತ ನಡೆಸಿದ್ದರು.
ಅವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದ್ದು 1989ರಲ್ಲಿ. ಜನತಾ ಪಕ್ಷ ಸೋತು ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದಾಗ ವೀರೇಂದ್ರ ಪಾಟೀಲ ಸಿಎಂ ಆಗಿದ್ದರು. ಆದರೆ, ಒಂದು ವರ್ಷದ ಅವಧಿಯನ್ನೂ ಅವರು ಪೂರ್ಣಗೊಳಿಸಿರಲಿಲ್ಲ.
ಎರಡು ಬಾರಿ ಅರಸು ಆಡಳಿತ
ರಾಜ್ಯ ರಾಜಕಾರಣದಲ್ಲಿ ಡಿ. ದೇವರಾಜ ಅರಸು ಅವರ ಹೆಸರು ಅಜರಾಮರ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಆಡಳಿತ ಪೂರ್ಣಗೊಳಿಸಿದಂತೆ ಹಿಂದೆ ಪೂರ್ಣಾವಧಿ ಆಡಳಿತ ನಡೆಸಿದವರಾರು ಎಂದು ಇತಿಹಾಸ ಕೆದಕಿದರೆ ಕಾಣಿಸುವುದು ದೇವರಾಜ ಅರಸು ಅವರ ಹೆಸರು. ಅದೂ 40 ವರ್ಷಗಳ ಹಿಂದೆ.
1972-1977ರ ಅವಧಿಯಲ್ಲಿ ದೇವರಾಜ ಅರಸು ಅವರು ಆಡಳಿತ ನಡೆಸಿದ್ದರು. ಮರು ವರ್ಷ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅರಸು ಅವರು ಮುಖ್ಯಮಂತ್ರಿಯಾದರೂ ಆಡಳಿತ ನಡೆಸಿದ್ದು ಎರಡು ವರ್ಷ ಮಾತ್ರ.
ಭಾಷಾವಾರು ಪ್ರಾಂತ್ಯದ ಮೊದಲ ಸಿಎಂ
ಭಾಷಾವಾರು ಪ್ರಾಂತ್ಯದಡಿ ರಾಜ್ಯ ಪುನರ್ವಿಂಗಡಣೆಯಾದಾಗ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದವರು ಎಸ್. ನಿಜಲಿಂಗಪ್ಪ. 1956ರ ನವೆಂಬರ್ 1ರಿಂದ 1958ರ ಮೇ 16ರವರೆಗೆ ಅವರು ಆಡಳಿತ ನಡೆಸಿದರು. ಬಳಿಕ ಬಿ.ಡಿ. ಜತ್ತಿ ಮತ್ತು ಎಸ್.ಆರ್. ಕಂಠಿ ಅವರು ಮುಖ್ಯಮಂತ್ರಿಗಳಾಗಿದ್ದರು.
1962ರಲ್ಲಿ ಪುನಃ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಿಜಲಿಂಗಪ್ಪ ಅವರು, 5 ವರ್ಷ 342 ದಿನ ಅವರು ಎರಡನೆಯ ಅವಧಿಯಲ್ಲಿ ಆಡಳಿತ ನಡೆಸಿದ್ದರು.