ಇದೇ ಮೊದಲಬಾರಿಗೆ ಮಾಗಡಿಯಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ
ಮಾಗಡಿ, ಏಪ್ರಿಲ್ 4: ಸುಮಾರು ನಾಲ್ಕು ದಶಕಗಳ ಹಿಂದೆ ಇಂದಿರಾ ಗಾಂಧಿ ಮಾಗಡಿಗೆ ಆಗಮಿಸಿದ್ದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ(ಏ.4) ಸಂಜೆ ಜನಾರ್ಶಿವಾದ ಯಾತ್ರೆಗಾಗಿ ಆಗಮಿಸುತ್ತಿರುವ ಅವರ ಮೊಮ್ಮಗ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ರಾಹುಲ್ ಗಾಂಧಿ ಅವರು ಮಾಗಡಿಯ ಕೋಟೆ ಮೈದಾನಕ್ಕೆ 5 ಗಂಟೆಗೆ ಬರಲಿದ್ದು, ಇಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ಇಲ್ಲಿ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಇದೇ ವೇಳೆ ಪಟ್ಟಣದ ಬಿ.ಕೆ.ರಸ್ತೆಯಲ್ಲಿ ರೋಡ್ ಶೋ ನಡೆಯಲಿದೆ. ಸಂಜೆ 5 ಗಂಟೆಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.
ಕಾಗಿನೆಲೆ ಮಠಕ್ಕೆ ರಾಹುಲ್, ಅಮಿತ್ ಶಾ ಭೇಟಿ
ಜನಾಶೀರ್ವಾದ ಯಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಅಲ್ಲದೆ ಈ ಸಮಾವೇಶವನ್ನು ಯಶಸ್ವಿಗೊಳಿಸಲು ಸಂಸದ ಡಿ.ಕೆ.ಸುರೇಶ್ ಮತ್ತು ಸಚಿವ ಹೆಚ್.ಎಂ.ರೇವಣ್ಣ ಮುಂದಾಗಿದ್ದು, ಈಗಾಗಲೇ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.
ಇನ್ನು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಶಾಸಕ ಬಾಲಕೃಷ್ಣ ಅವರಿಗೂ ಇದು ಪ್ರತಿಷ್ಠೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೆ ಇಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಸಿತ್ತು. ಅದಕ್ಕೆ ತಿರುಗೇಟು ನೀಡುವುದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸುವುದು ಈಗ ಬಾಲಕೃಷ್ಣರಿಗೆ ಅನಿವಾರ್ಯವಾಗಿದೆ.
ಶಿವಮೊಗ್ಗ: ರಾಹುಲ್ ಗಾಂಧಿ ರೋಡ್ ಶೋಗೆ ಹರಿದು ಬಂತು ಜನಸಾಗರ
ಜನಾಶೀರ್ವಾದ ಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಗೃಹ ಸಚಿವ ಜಿ. ಪರಮೇಶ್ವರ್, ಲೋಕಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಬಹಳಷ್ಟು ನಾಯಕರು ಆಗಮಿಸಲಿದ್ದು, ವೇದಿಕೆಯ ಮೇಲೆ ಕೆಲವರಿಗಷ್ಟೇ ಆಸನ ವ್ಯವಸ್ಥೆ ಮಾಡಿದ್ದು, ಪಾಸ್ ಇದ್ದವರಿಗೆ ಮಾತ್ರ ವೇದಿಕೆಯ ಮುಂಭಾಗದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಚಿತ್ರಗಳು :ಜೋಗದ ನಾಡು ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ಅಬ್ಬರ
ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಈಗಾಗಲೇ ಮಾಗಡಿ ಪಟ್ಟಣದ ಕಾರ್ಯಕ್ರಮ ನಡೆಯುವ ವೇದಿಕೆಯಲ್ಲಿ ಭದ್ರತೆಯನ್ನು ಪರಿಶೀಲಿಸಲಾಗಿದ್ದು, ದೆಹಲಿಯಿಂದ ಎಸ್ಪಿಜಿ ತಂಡ, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಆಗಮಿಸಿದ್ದು, ರಾಹಲ್ ಗಾಂಧಿ ಸಂಚರಿಸುವ ರಸ್ತೆಯನ್ನು ಹಲವಾರು ಬಾರಿ ತಪಾಸಣೆ ನಡೆಸಿದೆ. ಕಾರ್ಯಕ್ರಮ ನಡೆಯುವ ಕೋಟೆ ಮೈದಾನದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.