ಚುನಾವಣೆ ನಂತರ ಜೆಡಿಎಸ್ ಮೈತ್ರಿ ಯಾರೊಂದಿಗೆ? ಎಚ್ಡಿಕೆ ಸ್ಪಷ್ಟನೆ
ಬೆಳಗಾವಿ, ಜನವರಿ 06: ಕರ್ನಾಟಕದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯವನ್ನು ಹಲವು ರಾಜಕೀಯ ತಜ್ಞರು ಹೊರಹಾಕಿದ್ದಾರೆ.
ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್(113/225) ಪಡೆಯುವುದು ಅನುಮಾನ ಅನ್ನೋದು ಸದ್ಯದ ರಾಜಕೀಯ ಚಿತ್ರಣವನ್ನು ನೋಡಿದರೆ ಸಾಮಾನ್ಯನಿಗೂ ಅರ್ಥವಾಗಬಲ್ಲ ವಿಷಯ.
ಒಂದೊಮ್ಮೆ ಎರಡೂ ಪಕ್ಷಗಳೂ ಬಹುಮತ ಪಡೆಯಲು ವಿಫಲವಾದರೆ, ಅಂತಂತ್ರ ವಿಧಾನಸಭೆಯೆದುರು ಕಿಂಗ್ ಮೇಕರ್ ಆಗಿ ನಿಲ್ಲುವುದು ಜೆಡಿಎಸ್! ಆದರೆ ನಾವು ಬಿಜೆಪಿಯೊಂದಿಗಾಗಲಿ, ಕಾಂಗ್ರೆಸ್ ನೊಂದಿಗಾಗಲಿ ಮೈತ್ರಿ ಮಾಡಿಕೊಳ್ಳಲು ಇಷ್ಟಪಡೋಲ್ಲ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ!
ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸದಲ್ಲಿರುವ ಕುಮಾರಸ್ವಾಮಿ, ಬೆಳಗಾವಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಮಾತಿಗೂ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಇತ್ತೀಚಿನ ನಡೆಗೂ ಅಜಗಜಾಂತರವಿದೆ ಅನ್ನಿಸೋದು ಸತ್ಯ!

ದೇವೇಗೌಡರು ಗೊಯೇಲ್ ರನ್ನು ಭೇಟಿ ಮಾಡಿದ್ದೇಕೆ..?
ಇತ್ತೀಚೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಭೇಟಿಯಾಗಿದ್ದರು. ಈ ಕುರಿತು ರಾಜಕೀಯ ವಲಯದಲ್ಲಿ ಗುಸುಗುಸು ಆರಂಭವಾಗಿತ್ತು. ಆದರೆ, ಹಾಸನದಲ್ಲಿ ಸರ್ಕಾರದ ಕಡೆಯಿಂದ ಜಾರಿಗೆ ಬರಬೇಕಿದ್ದ ಯೋಜನೆಯೊಂದರ ಕುರಿತು ಚರ್ಚೆ ನಡೆಸುವುದಕ್ಕೆ ತಂದೆಯವರು, ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಗೂ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದ್ದರು.

ಮೋದಿ, ಬಿಜೆಪಿ ವಿರುದ್ಧ ಹೇಳಿಕೆ ನೀಡಬೇಡಿ: ಎಚ್ಡಿಡಿ!
ಆದರೆ ಇತ್ತೀಚೆಗಷ್ಟೆ, ನರೇಂದ್ರ ಮೋದಿ ಅಥವಾ ಬಿಜೆಪಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಜೆಡಿಎಸ್ ನಾಯಕರಿಗೆ ಸ್ವತಃ ದೇವೇಗೌಡರು ತಾಕೀತು ಮಾಡಿದ್ದಾರೆ ಎಂಬ ಸುದ್ದಿಯೂ ಚಾಲ್ತಿಯಲ್ಲಿರುವುದನ್ನು ಮರೆಯುವಂತಿಲ್ಲ! ಅಷ್ಟೇ ಅಲ್ಲ, ಜೆಡಿಎಸ್ ನಾಯಕರು ಸಹ ಬಿಜೆಪಿ ನಾಯಕರ ಬಗ್ಗೆಯಾಗಲಿ, ಬಿಜೆಪಿ ನಾಯಕರು ಜೆಡಿಎಸ್ ನಾಯಕರ ಮೇಲಾಗಲಿ ಕೆಸರೆರಚಾಡದೆ ಇರುವುದು ಮತ್ತಷ್ಟು ಅನುಮಾನ ಹುಟ್ಟಿಸಿದೆ.

224 ಕ್ಷೇತ್ರಗಳಲ್ಲೂ ಜೆಡಿಎಸ್ ಕಣಕ್ಕೆ
ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಲ್ಲೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ನಾವು ಕನಿಷ್ಠ 45 ಸೀಟುಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಜೆಡಿಎಸ್ ಬಿಜೆಪಿ ಮೈತ್ರಿ: ಮುಸ್ಲಿಂ ಓಲೈಕೆಗೆ ಕಾಂಗ್ರೆಸ್ ತಂತ್ರ!
ಜೆಡಿಎಸ್ ಮತ್ತು ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಸುಳ್ಳು ಸುದ್ದಿಯನ್ನು ಸ್ವತಃ ಕಾಂಗ್ರೆಸ್ ಹಬ್ಬಿಸುತ್ತಿದೆ. ಮುಸ್ಲಿಂ ಓಟುಗಳನ್ನು ಪಡೆಯಲು ಕಾಂಗ್ರೆಸ್ ಮಾಡುತ್ತಿರುವ ಹುನ್ನಾರ ಇದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. 2004 ರಲ್ಲಿ 20:20 ಸರ್ಕಾರದ ಕತೆ ಏನಾಯಿತು ಎಂಬುದು ಜನರಿಗೆ ನೆನಪಿನಲ್ಲಿರುವುದರಿಂದ ಬಿಜೆಪಿಯೂ ಜೆಡಿಎಸ್ ನೊಂದಿಗೆ ಕೈಜೋಡಿಸಲು ಹಿಂದೇಟು ಹಾಕಿದರೆ ಅಚ್ಚರಿಯಿಲ್ಲ. ಆದರೆ ರಾಜಕೀಯದಲ್ಲಿ ನಿನ್ನೆಯ ಶತ್ರುಗಳು ಇಂದು ಪರಮಮಿತ್ರರೂ ಆಗಬಹುದಾದ್ದರಿಂದ ಯಾವ ವದಂತಿಯನ್ನೂ ಅಲ್ಲಗಳೆಯುವಂತಿಲ್ಲ!












Click it and Unblock the Notifications