500 ರಷ್ಟು ಅಭ್ಯರ್ಥಿಗಳು ಕರ್ನಾಟಕ ಚುನಾವಣೆಗೆ ಅನರ್ಹರಾಗುವರೇ?!
ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಹಿನ್ನೆಲೆಗಳಲ್ಲಿ ರಾಜ್ಯ ರಾಜಕೀಯದ ಚಿತ್ರಣ ಗರಿಗೆದರಿದೆ. ಎಲ್ಲಾ ಪಕ್ಷಗಳ ಬಿರುಸಿನ ಪ್ರಚಾರ ಕಾರ್ಯ, ಆಶ್ವಾಸನೆಗಳು, ಪರಸ್ಪರ ಕೆಸರೆರಚಾಟ... ಆರಂಭವಾಗಿದೆ.
ಚುನಾವಣೆಯ ಹಿನ್ನೆಲೆಯಲ್ಲಿ 2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 547 ಅಭ್ಯರ್ಥಿಗಳ ದಾಖಲೆಗಳನ್ನು ಚುನಾವಣಾ ಆಯೋಗ ಪರಿಶೀಲಿಸಿದೆ. ಮೂಲವೊಂದರ ಪ್ರಕಾರ ಈ 547 ಅಭ್ಯರ್ಥಿಗಳಲ್ಲಿ ಸುಮಾರು 500 ರಷ್ಟು ಅಭ್ಯರ್ಥಿಗಳು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಬಹುದು.

ಇವರೆಲ್ಲರೂ ತಮ್ಮ ಚುನಾವಣಾ ಪ್ರಚಾರ ವೆಚ್ಚದ ವಿವರವನ್ನು ಚುನಾವಣಾ ಆಯೋಗಕ್ಕೆ ಇನ್ನೂ ಸಲ್ಲಿಸಿಲ್ಲದ ಕಾರಣ, ಚುನಾವಣಾ ಆಯೋಗ ಅವರ ಸ್ಪರ್ಧೆಗೆ ತಡೆಯೊಡ್ಡುವ ಸಾಧ್ಯತೆ ಇದೆ.
ದಾಖಲೆಗಳಿನ್ನೂ ಪರಿಶೀಲನೆಯ ಹಂತದಲ್ಲಿದ್ದು, ಯಾವುದೇ ಅಭ್ಯರ್ಥಿ ಚುನಾವಣಾ ಆಯೋಗ ಕೇಳಿದ ಫಾರ್ಮೇಟ್ ನಲ್ಲಿ ಪ್ರಚಾರ ವೆಚ್ಚದ ದಾಖಲೆ, ವಿವರ ನೀಡಿಲ್ಲವಾದಲ್ಲಿ ಅವರ ಸ್ಪರ್ಧೆಗೆ ತಡೆಯೊಡ್ಡಬಹುದಾಗಿದೆ.
ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣಾ ಫಲಿತಾಂಶ ಹೊರಬಿದ್ದ 30 ದಿನಗಳೊಳಗೆ ವೆಚ್ಚದ ದಾಖಲೆ ಮತ್ತು ವಿವರವನ್ನು ಒದಗಿಸಬೇಕು. ಈ ವಿವರದಲ್ಲಿ ಪ್ರಚಾರದ ವೆಚ್ಚ, ಬೇರೆ ಬೇರೆ ಮೂಲಗಳಿಂದ ಸಂಗ್ರಹವಾದ ದೇಣಿಗೆಯ ವೆಚ್ಚಗಳ ಕುರಿತೂ ಮಾಹಿತಿ, ದಾಖಲೆಗಳನ್ನು ನೀಡಬೇಕು. ಈ ನಿಯಮವನ್ನು ಪಾಲಿಸದಿದ್ದಲ್ಲಿ ಅಭ್ಯರ್ಥಿಯನ್ನು ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. ವಿಧಾನಸಭೆ ಚುನಾವಣೆಗೆ ವೆಚ್ಚದ ಮಿತಿ 28 ಲಕ್ಷ ರೂ.












Click it and Unblock the Notifications