ವಿಧಾನಸಭಾ ಚುನಾವಣಾ ಫಲಿತಾಂಶ: ಬೆಟ್ಟಿಂಗ್ ಜೋರು.. ಸೋತರೆ ಬೀದಿಪಾಲು
ಬೆಂಗಳೂರು: ತೀವ್ರ ಕುತುಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ. ಆದರೆ, ಟಫ್ ಸ್ಪರ್ಧೆ ಏರ್ಪಟ್ಟಿದ್ದ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರಾಗಿದ್ದು, ಕೆಲವಡೆ ಅಭ್ಯರ್ಥಿಗಳ ಪರ ಅಭಿಮಾನಿಗಳು ತಮ್ಮ ಆಸ್ತಿಯನ್ನೆಲ್ಲ ಪಣಕ್ಕಿಟ್ಟಿದ್ದಾರೆ.
ಈ ಕುರಿತ ಹಲವು ಪೋಸ್ಟ್ ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಅದರಲ್ಲೂ ಗುಂಡ್ಲುಪೇಟೆಯ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಪರವಾಗಿ ಅಲ್ಲಿನ ಪುರಸಭಾ ಸದಸ್ಯ ಕಿರಣ್ ಕುಮಾರ್ ಒಂದು ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಲು ಸಿದ್ದ ಎಂಬ ವಿಡಿಯೋ ಎಲ್ಲೆಡೆ ಹರಿದಾಟುತ್ತಿದೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ರೈತರು ಒಂದು ಹೆಜ್ಜೆ ಮುಂದೆ ಹೋಗಿದ್ದು, ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜು ಪರವಾಗಿ ತಮ್ಮ 2 ಎಕರೆ ಅಡಕೆ ತೋಟವನ್ನೇ ಬಾಜಿ ಕಟ್ಟಿದ್ದಾರೆ. ಇದಿಷ್ಟೇ ಅಲ್ಲದೆ, ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತದಿಂದ ಸ್ಪರ್ದಿಸಿರುವ ಅಭ್ಯರ್ಥಿಗಳ ಪರವಾಗಿಯೂ ಅವರ ಅಭಿಮಾನಿಗಳು ಲಕ್ಷಗಟ್ಟಲೇ ಬೆಟ್ ಮಾಡಿದ್ದಾರೆ.
ಹಲವೆಡೆ ಈ ಹುಚ್ಚು ಅಭಿಮಾನ ಎಷ್ಟರಮಟ್ಟಿಗೆ ತಾರಕಕ್ಕೇರಿದೆ ಅಂದ್ರೆ, ಟ್ರ್ಯಾಕ್ಟರ್, ಟಗರು ಸೇರಿದಂತೆ ಜಾನುವಾರುಗಳನ್ನು ಪಣಕ್ಕಿಟ್ಟಿದ್ದಾರೆ. ಮಧುಗಿರಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಪರ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ನಡೆದಿದೆ. ಇನ್ನು, ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಬೆಟ್ಟಿಂಗ್ ಮಾಡುವವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.
ಸದ್ಯ, ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ 63, ಕಾಂಗ್ರೆಸ್ 100, ಜೆಡಿಎಸ್ 19 ಹಾಗೂ ಇತರರು ಎರಡು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚುನಾವಣೆ ಸಂಬಂಧ ಹೆಚ್ಚಿನ ಮಾಹಿತಿಗೆ ಒನ್ ಇಂಡಿಯಾ ಕನ್ನಡ ಫಾಲೋ ಮಾಡಿ.












Click it and Unblock the Notifications