ಥ್ರಿಲ್ಲಿಂಗ್ ಟಚ್ ನೀಡಿದ ಕರ್ನಾಟಕ ಚುನಾವಣಾ ಸಮೀಕ್ಷೆಗಳು
Recommended Video

ಕರ್ನಾಟಕದಲ್ಲಿ ಒಂದು ಸಮೀಕ್ಷೆ ಹೇಳತ್ತೆ ಕಾಂಗ್ರೆಸ್ ಗೆಲ್ಲತ್ತೆ, ಮತ್ತೊಂದು ಹೇಳತ್ತೆ ಬಿಜೆಪಿ ಜಯಭೇರಿ ಬಾರಿಸತ್ತೆ, ಮಗದೊಂದು ಹೇಳತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗತ್ತೆ, ಇನ್ನು ಜ್ಯೋತಿಷಿಗಳು 'ನಾನು ಮೊದಲೇ ಹೇಳಿದ್ದೆ ಇದೇ ಪಕ್ಷ ಗೆಲ್ಲತ್ತೆ' ಅಂತ ಫಲಿತಾಂಶ ಬಂದ ಮೇಲೆ ಹೇಳ್ತಾರೆ.
ಯಾರನ್ನು ನಂಬುವುದು ಯಾರನ್ನು ಬಿಡುವುದು? ಈ ಎಲ್ಲ ಸಮೀಕ್ಷೆಗಳು ಪ್ರಕಟವಾಗುವ ನಡುವಿನಲ್ಲಿ ಕೋಡಿಮಠ ಶ್ರೀಗಳು ಮತ್ತು ಉತ್ತರ ಭಾರತದಿಂದ ಬಂದಿದ್ದ ನಾಗಾ ಸಾಧುಗಳು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಗಳಾಗ್ತಾರೆ ಅಂತ ಹೇಳಿ ಚುನಾವಣೆಯ ಕಣವನ್ನು ಸಖತ್ ಥ್ರಿಲ್ಲಿಂಗ್ ಮಾಡಿದ್ದಾರೆ.
ಈ ಸಮೀಕ್ಷೆಗಳು ಏನೇ ಹೇಳಲಿ, ಮತಪ್ರಭುಗಳು ಮನದಲ್ಲಿ ಏನಿದೆಯೆಂಬುದನ್ನು ನಿಖರವಾಗಿ ಹೇಳಲು ಸಾಧ್ಯವೆ? ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಇಂಥದೇ ಪಕ್ಷ ಮತ್ತೆ ಆಡಳಿತ ನಡೆಸುತ್ತದೆ, ಇವರೇ ಮುಖ್ಯಮಂತ್ರಿಗಳಾಗ್ತಾರೆ ಅಂತ ನಿಖರವಾಗಿ ಹೇಳುವುದು ಈ ಜ್ಯೋತಿಷಿಗಳಿಗಿರಲಿ, ಬ್ರಹ್ಮದೇವರಿಗೂ ಅಸಾಧ್ಯ. ಅಂಥ ಸ್ಥಿತಿ ಇದೆಯಿಲ್ಲಿ.
ಅಚ್ಚರಿಯ ಸಂಗತಿಯೆಂದರೆ, ಸಿಫೋರ್ ಕಳೆದ ಆಗಸ್ಟ್ ನಲ್ಲಿಯೇ ನಡೆಸಿದ ಸಮೀಕ್ಷೆ ಹೇಳತ್ತೆ ಕಾಂಗ್ರೆಸ್ ಬಹುಮತ ಪಡೆಯುವುದು ಗ್ಯಾರಂಟಿ ಅಂತ. ತದನಂತರ ಸೆಪ್ಟೆಂಬರ್ ಮೊದಲ ವಾರದಲ್ಲಿ ಹೊರಬಿದ್ದ ಕಾಪ್ಸ್ ಸಮೀಕ್ಷೆ ಬಿಜೆಪಿ ಕೊರಳಿಗೆ ಜಯಮಾಲೆ ಅಂತ ನುಡಿದಿದೆ. ಇದೀಗ ಎಝಡ್-ಸುವರ್ಣ ನ್ಯೂಸ್ ನಡೆಸಿದ ಸಮೀಕ್ಷೆ ರಾಜ್ಯ ಅತಂತ್ರವಾಗಲಿದೆ ಎಂದು ಹೇಳಿ ಮೊದಲ ಎರಡೂ ಸಮೀಕ್ಷೆಗಳಿಗೆ ಟಾಂಗ್ ಕೊಟ್ಟಿದೆ.
ಒಂದೊಂದು ಸಮೀಕ್ಷೆಗಳೂ, ಒಂದೊಂದು ಭವಿಷ್ಯವಾಣಿಗಳೂ ತದ್ವಿರುದ್ಧವಾಗಿವೆ. ರಾಜ್ಯದ ಪುಢಾರಿಗಳನ್ನು ಮಾತ್ರವಲ್ಲ, ನಾಡಿನ ಜನತೆಯನ್ನೂ ತಬ್ಬಿಬ್ಬಾಗಿಸಿವೆ. ಗೆಲುವಿನ ಸ್ಟ್ರಾಟಜಿಗಳನ್ನು ಸೂಕ್ತವಾಗಿ ರೂಪಿಸಲು ಈ ಸಮೀಕ್ಷೆ ಮತ್ತು ಭವಿಷ್ಯವಾಣಿಗಳು ಮೇವನ್ನೂ ಒದಗಿಸಿವೆ. ಬಹುಶಃ ಇನ್ನೆರಡು ತಿಂಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಬಹುದು.

ಸಿಫೋರ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಜಯಭೇರಿ
ಆಗಸ್ಟ್ ಎರಡನೇ ವಾರದಲ್ಲಿ ಸಿಫೋರ್ ನಡೆಸಿದ್ದ ಸಮೀಕ್ಷೆ, ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವೇ ಮತ್ತೆ ಚುಕ್ಕಾಣಿ ಹಿಡಿಯಲಿದೆ, ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದೆ. ಇದರ ಪ್ರಕಾರ,
* ಕಾಂಗ್ರೆಸ್ 120 ರಿಂದ 132ರವರೆಗೆ ಸ್ಥಾನ
* ಬಿಜೆಪಿಗೆ 60 ರಿಂದ 72 ಸ್ಥಾನಗಳು ಸಿಗಲಿವೆ.
* ಜೆಡಿಎಸ್ 24ರಿಂದ 30 ಸ್ಥಾನಗಳನ್ನು ಪಡೆಯಲಿದೆ.
* ಇತರೆ ಪಕ್ಷಗಳಿಗೆ 1ರಿಂದ 6 ಸ್ಥಾನಗಳು ಬರಲಿವೆ.

ಕಾಪ್ಸ್ ಸಮೀಕ್ಷೆ ಪ್ರಕಾರ ಮತ್ತೆ ಅರಳಲಿದೆ ಕಮಲ
Creative Center for Political and Social Studies (COPS) ಪ್ರಕಾರ 2008ರ ಚುನಾವಣಾ ಫಲಿತಾಂಶ ಪುನಾವರ್ತನೆಯಾಗಲಿದೆ. ಯಡಿಯೂರಪ್ಪ ಮೀಸೆ ತಿರುವಲಿದ್ದಾರೆ. ಇದರ ಪ್ರಕಾರ,
* ಬಿಜೆಪಿಗೆ 113 ಸ್ಥಾನಗಳು
* ಕಾಂಗ್ರೆಸ್ಸಿಗೆ 86 ಸ್ಥಾನಗಳು
* ಜೆಡಿಎಸ್ಸಿಗೆ 25 ಸ್ಥಾನಗಳು ಲಭಿಸಲಿವೆ

ಎಝಡ್-ಸುವರ್ಣ ನ್ಯೂಸ್ ಸಮೀಕ್ಷೆ ಪ್ರಕಾರ ಅತಂತ್ರ ಸ್ಥಿತಿ
ಇವೆರಡೂ ಸಮೀಕ್ಷೆಗಳು ತಲೆಕೆಳಗಾವಂಥ ಸಮೀಕ್ಷೆಯನ್ನು ಎಝಡ್-ಸುವರ್ಣ ನ್ಯೂಸ್ ಸಮೀಕ್ಷೆ ಹೇಳಿದೆ. ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ. ಆದರೆ, ಸರಕಾರ ರಚಿಸುವ ಸಮಯದಲ್ಲಿ ಕುಮಾರಸ್ವಾಮಿಯವರು ಪ್ರಮುಖ ಪಾತ್ರ ವಹಿಸಲಿದ್ದಾರೆ, ಕಿಂಗ್ ಮೇಕರ್ ಆಗಲಿದ್ದಾರೆ ಎಂದಿದೆ. ಇದರ ಪ್ರಕಾರ,
* ಕಾಂಗ್ರೆಸ್ ಪಕ್ಷಕ್ಕೆ 74ರಿಂದ 93
* ಬಿಜೆಪಿ ಪಕ್ಷಕ್ಕೆ 77ರಿಂದ 92
* ಜೆಡಿಎಸ್ ಪಕ್ಷಕ್ಕೆ 41ರಿಂದ 46
* ಇತರ ಪಕ್ಷಗಳಿಗೆ 11 ಸ್ಥಾನಗಳು ಲಭಿಸಲಿವೆ

ಈಬಾರಿಯೂ ಕುದುರೆ ವ್ಯಾಪಾರ ಗ್ಯಾರಂಟಿ
ಒಂದು ವೇಳೆ ಅತಂತ್ರ ಸ್ಥಿತಿಯೇ ನಿರ್ಮಾಣವಾದರೆ ಒಂದು ಜೆಡಿಎಸ್ ಪಕ್ಷ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸಲಿದೆ ಇಲ್ಲದಿದ್ದರೆ ಪಕ್ಷೇತರ ಶಾಸಕರು ಕಿಂಗ್ ಮೇಕರ್ಸ್ ಆಗಲಿದ್ದಾರೆ. ರಾಜಕೀಯ ಲೆಕ್ಕಾಚಾರಗಳು ಪಂಡಿತ ತಲೆ ಕೊರೆಯಲಿವೆ, ಒಳ ಒಪ್ಪಂದಗಳಿಗೆ ಪಕ್ಷಗಳು ಹುನ್ನಾರ ನಡೆಸಲಿವೆ. ಪಕ್ಷಾಂತರ ಮಾಡಲು ಚುನಾವಣಾಕಾಂಕ್ಷಿಗಳಿ ಇದು ಸಕಾಲ ಕೂಡ. ನಿಸ್ಸಂಶಯವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಮಾತ್ರ ಈ ಬಾರಿ ಥ್ರಿಲ್ಲಿಂಗ್ ಆಗಿರಲಿದೆ.












Click it and Unblock the Notifications