ಬಿಜೆಪಿಯಲ್ಲಿ ಬಂಡಾಯದ ಜ್ವಾಲೆ; ಬಿಜೆಪಿಗೆ ಶಾಕ್ ಮೇಲೆ ಶಾಕ್: ಶಾಸಕ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ರಾಜೀನಾಮೆ
ಬೆಂಗಳೂರು,ಏಪ್ರಿಲ್13: ಕರ್ನಾಟಕ ವಿಧಾನಸಭೆ ಚುನಾವಣೆಯ ಬಳಿಕ ಬಿಜೆಪಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಟಿಕೆಟ್ ಕೈ ತಪ್ಪಿದ ಹಿನ್ನಲೆ ಸಾಲು ಸಾಲು ನಾಯಕರು ಬಿಜೆಪಿಗೆ ಗುಡ್ ಬೈ ಹೇಳುತ್ತಿದ್ದಾರೆ.
ಗುರುವಾರ ಮತ್ತೊಂದು ಬಿಜೆಪಿ ವಿಕೆಟ್ ಪತನವಾಗಿದೆ. ಟಿಕೆಟ್ ಸಿಗದ ಹಿನ್ನೆಲೆ ಇಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.

ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ರಾಜೀನಾಮೆ ಸಲ್ಲಿಸಿದ ಗೂಳಿಹಟ್ಟಿ ಶೇಖರ್ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಇದರೊಂದಿಗೆ ಬಿಜೆಪಿಯ ಇನ್ನೊಂದು ವಿಕೆಟ್ ಪತನವಾಗಿದೆ. ರಾಜೀನಾಮೆ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಗೂಳಿಹಟ್ಟಿ ಶೇಖರ್, ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ಬಗ್ಗೆ ನಾಳೆ ನಿರ್ಧಾರ ಮಾಡುತ್ತೇನೆ, ಕಾರ್ಯಕರ್ತರ ಜೊತೆ ಚರ್ಚಿಸಿ ಅಂತಿ ತೀರ್ಮಾನ ಮಾಡಲಿದ್ದೇನೆ ಎಂದು ಹೇಳಿದ್ದಾರೆ.
ಇತ್ತ ಬಿಜೆಪಿ ಅಸಮಾಧಾನಿತರಿಗೆ ಗಾಳ ಹಾಕುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಸಿದ್ದು, ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕೆಆರ್ಪಿಪಿ ಪಕ್ಷದಿಂದ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಗೂಳಿಹಟ್ಟಿ ಶೇಖರ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಗೂಳಿಹಟ್ಟಿ ಶೇಖರ್ ಮಾತನಾಡಿ, ನನಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಪಕ್ಷದ ಜನರಲ್ನಲ್ಲಿ ಟಿಕೆಟ್ ಕೇಳಿದ್ದರಿಂದ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಜನರ ಮಧ್ಯದಿಂದ ಬಂದವನಾಗಿ ಜನರ ಮಧ್ಯೆ ಇರಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರದ ಮತದಾರರ ಆಕಾಂಕ್ಷೆಯಂತೆ ಈ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
2023ರ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ಎಸ್ಸಿ ಜನಾಂಗದವರು ಎಸ್ಸಿ ಕ್ಷೇತ್ರದಲ್ಲಿ ನಿಲ್ಲಬೇಕು, ಎಸ್ಟಿ ಕ್ಷೇತ್ರದಲ್ಲಿ ಎಸ್ಟಿ ಜನಾಂಗದವರು ಚುನಾವಣೆಗೆ ನಿಲ್ಲಬೇಕು. ಜನರಲ್ನವರು ಜನರಲ್ನಲ್ಲಿ ನಿಲ್ಲಬೇಕು ಎಂಬ ನಿಯಮ ನಾವೇ ಮಾಡಿಕೊಂಡಿದ್ದೇವೆ. ಈ ನಿಯಮದಡಿ ಪಕ್ಷ ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ನಿಯಮ ಮಾಡಿಕೊಂಡಿದೆ ಎಂದರು ಎಸ್ಸಿ ಜನಾಂಗದವನಾಗಿ ಜನರಲ್ನಲ್ಲಿ ಟಿಕೆಟ್ ಕೇಳಿರುವುದು ನನ್ನ ತಪ್ಪು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications