ಉಪಚುನಾವಣೆ: ರಾಜ್ಯದ ಇಬ್ಬರು ನಾಯಕರನ್ನು ಅಗ್ನಿಪರೀಕ್ಷೆಗೆ ದೂಡಿದ ಅಮಿತ್ ಶಾ
Recommended Video
ನವೆಂಬರ್ ಆರನೇ ತಾರೀಕಿನೊಳಗೆ ಶಾಸಕರ ಅನರ್ಹತೆಯ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಅನರ್ಹ ಶಾಸಕರ ಟೆನ್ಸನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬರುವ ಸೋಮವಾರ (ನ 11) ಹದಿನೈದು ಕ್ಷೇತ್ರಗಳಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ. ಸರಕಾರ ಉಳಿಸಿಕೊಳ್ಳಲು, ಬಿಜೆಪಿ ಈ ಉಪಚುನಾವಣಾ ಗೆಲುವು ಅತ್ಯಂತ ನಿರ್ಣಾಯಕವಾಗಲಿದೆ.
ನೂರು ದಿನ ಪೂರೈಸಿರುವ ಬಿಜೆಪಿ ಸರಕಾರಕ್ಕೆ ಈ ಚುನಾವಣೆಯ ಮೂಲಕ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ. ಜೊತೆಗೆ, ಟಿಕೆಟ್ ವಿಚಾರದಲ್ಲಿರುವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಕಾಂಗ್ರೆಸ್ ಈಗಾಗಲೇ ಕೆಲವು ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಯನ್ನು ಘೋಷಿಸಿಯಾಗಿದೆ. ಆದರೆ, ಬಿಜೆಪಿಗೆ, ಸುಪ್ರೀಂಕೋರ್ಟ್ ತೀರ್ಪನ್ನು ಕಾಯಬೇಕಾದ ಅನಿವಾರ್ಯತೆ. ಈ ಉಪಚುನಾವಣೆಯ ಮೂಲಕ, ರಾಜ್ಯದ ಇಬ್ಬರು ನಾಯಕರನ್ನು ಅಮಿತ್ ಶಾ , ಅಗ್ನಿಪರೀಕ್ಷೆಗೆ ದೂಡಿದ್ದಾರೆ.

ಸುಪ್ರೀಂಕೋರ್ಟ್ ವಿಚಾರಣೆ ಮುಗಿಸಿ, ತೀರ್ಪನ್ನು ಕಾಯ್ದಿರಿಸಿತ್ತು
ದೀಪಾವಳಿಗೆ ಮುನ್ನವೇ, ಸುಪ್ರೀಂಕೋರ್ಟ್ ಅನರ್ಹರ ಅರ್ಜಿ ವಿಚಾರಣೆ ಮುಗಿಸಿ, ತೀರ್ಪನ್ನು ಕಾಯ್ದಿರಿಸಿತ್ತು. ಆದರೆ, ನವೆಂಬರ್ ಎಂಟನೇ ತಾರೀಕಾದರೂ, ಅನರ್ಹತೆಯ ತೀರ್ಪು ಹೊರಬಿದ್ದಿಲ್ಲ. ಈ ನಡುವೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಿಯೋ ಬಹಿರಂಗಗೊಂಡಿರುವುದು, ಅನರ್ಹ ಶಾಸಕರಿಗೆ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ, ಆಡಿಯೋವನ್ನು ತೀರ್ಪು ನೀಡಬೇಕಾದರೆ, ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಯಡಿಯೂರಪ್ಪನವರಿಗೆ ಈ ಉಪಚುನಾವಣೆ ಭಾರೀ ಮಹತ್ವದ್ದು
ಪ್ರಮುಖವಾಗಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈ ಉಪಚುನಾವಣೆ ಭಾರೀ ಮಹತ್ವದ್ದು. ಒಂದು, ಈ ಚುನಾವಣೆಯ ಫಲಿತಾಂಶದ ಮೇಲೆ ಸರಕಾರದ ಭವಿಷ್ಯ ನಿಂತಿದೆ. ಇನ್ನೊಂದು, ಟಿಕೆಟ್ ನೀಡುವ ವಿಚಾರದಲ್ಲಿ ಯಡಿಯೂರಪ್ಪನವರ ನಿರ್ಧಾರವೇ ಅಂತಿಮ ಎನ್ನುವ ಫ್ರೀಹ್ಯಾಂಡ್ ಬಿಎಸ್ವೈಗೆ ಬಿಜೆಪಿ ವರಿಷ್ಠರು ನೀಡಿದ್ದಾರೆ ಎನ್ನುವ ಮಾತಿದೆ.

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬಿಎಸ್ವೈಗೆ ಈ ಉಪಚುನಾವಣೆ ಹೇಗೆ ಅಗ್ನಿಪರೀಕ್ಷೆಯೋ ಅದೇ ರೀತಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ. ಅಧ್ಯಕ್ಷ ಹುದ್ದೆಗೆ ಏರಿದ ನಂತರ, ಎದುರಾಗುತ್ತಿರುವ ಮೊದಲ ಚುನಾವಣೆಯಿದು. ತನ್ನ ಕಾರ್ಯವೈಖರಿಯನ್ನು ತೋರಿಸುವ ಅವಕಾಶ ಕಟೀಲ್ ಗೆ ಇದಾಗಿದೆ.

ಯಡಿಯೂರಪ್ಪ ಮತ್ತು ನಳಿನ್ ಕಟೀಲ್ ನಡುವೆ ಸಮನ್ವಯ ಕೊರತೆಯ
ಯಡಿಯೂರಪ್ಪ ಮತ್ತು ನಳಿನ್ ಕಟೀಲ್ ನಡುವೆ ಸಮನ್ವಯದ ಕೊರತೆಯ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಬಿಜೆಪಿಯ ಕರ್ನಾಟಕ ಕೇಂದ್ರ ಕಚೇರಿಯಲ್ಲಿನ ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಿದಾಗ, ಇಬ್ಬರ ನಡುವಿನ ವೈಮನಸ್ಸು ಮತ್ತೆ ಹೊರಬಂದಿತ್ತು. ಈಗ, ಇವರಿಬ್ಬರೂ, ಜೊತೆಯಾಗಿ ಎದುರಿಸಬೇಕಾದ ಚುನಾವಣೆಯಿದು.

ಅಮಿತ್ ಶಾ ಮುಂದೆ ತಮ್ಮ ಸಾಮರ್ಥ್ಯ ತೋರಿಸಬೇಕಾಗಿದೆ
ಉಪಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಅವರ ಕಾರ್ಯವೈಖರಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತೆ. ಹೀಗಾಗಿ, ಈ ಇಬ್ಬರು ಮುಖಂಡರಿಗೂ, ಉಪಚುನಾವಣೆಯ ಫಲಿತಾಂಶ ನಿರ್ಣಾಯಕವಾಗಲಿದೆ. ಹಾಗಾಗಿ, ಇಬ್ಬರೂ, ಅಮಿತ್ ಶಾ ಮುಂದೆ ತಮ್ಮ ಸಾಮರ್ಥ್ಯ ತೋರಿಸಬೇಕಾಗಿದೆ.












Click it and Unblock the Notifications