ದ್ವಿತೀಯ PUC ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ತಾವು ಬರೆದ ಪರೀಕ್ಷೆಗೆ ತಕ್ಕಂತೆ ಅಂಕಗಳು ಬಂದಿಲ್ಲ ಅಥವಾ ಮೌಲ್ಯಮಾಪನದಲ್ಲಿ ಏನಾದರೂ ದೋಷವಾಗಿರಬಹುದು ಎಂಬ ಅನುಮಾನವಿರುವ ವಿದ್ಯಾರ್ಥಿಗಳಿಗೆ ಮಂಡಳಿಯು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ (Scanned Copy) ಪಡೆಯಲು ಅವಕಾಶ ಕಲ್ಪಿಸಿದೆ.
ಮರುಮೌಲ್ಯಮಾಪನ (Revaluation) ಅಥವಾ ಮರು ಎಣಿಕೆಗೆ (Retotalling) ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ಆಯಾ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಸ್ಕ್ಯಾನ್ ಕಾಪಿ ಇಲ್ಲದೆ ನೇರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ. ಹಾಗಾದರೆ ಆನ್ಲೈನ್ ಮೂಲಕ ಸ್ಕ್ಯಾನ್ ಕಾಪಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಹಂತ-ಹಂತದ ಮಾಹಿತಿ ಇಲ್ಲಿದೆ.

ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಗೆ ಅರ್ಜಿ ಸಲ್ಲಿಸುವ ವಿಧಾನ
ಹಂತ 1: ಮೊದಲಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ kseab.karnataka.gov.in ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ಇತ್ತೀಚಿನ ಪ್ರಕಟಣೆಗಳ ವಿಭಾಗದಲ್ಲಿ '2nd PUC Scanned Copy Application 2026' (ದ್ವಿತೀಯ ಪಿಯುಸಿ ಸ್ಕ್ಯಾನ್ ಪ್ರತಿ ಅರ್ಜಿ) ಎಂಬ ಲಿಂಕ್ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಹಂತ 3: ಹೊಸ ಪೋರ್ಟಲ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ದ್ವಿತೀಯ ಪಿಯುಸಿ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ನಮೂದಿಸಿ 'Submit' ಅಥವಾ 'Fetch Details' ಬಟನ್ ಒತ್ತಿ.
ಹಂತ 4: ನಿಮ್ಮ ಹೆಸರು ಮತ್ತು ಇತರ ವಿವರಗಳು ಪರದೆಯ ಮೇಲೆ ಮೂಡುತ್ತವೆ. ನೀವು ಯಾವ ವಿಷಯಗಳ ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ಪಡೆಯಲು ಬಯಸುತ್ತೀರೋ ಆ ವಿಷಯಗಳನ್ನು (Subjects) ಎಚ್ಚರಿಕೆಯಿಂದ ಆಯ್ಕೆ ಮಾಡಿ.
ಹಂತ 5: ಪ್ರತಿ ವಿಷಯಕ್ಕೂ( 530ರೂ) ಮಂಡಳಿಯು ನಿಗದಿಪಡಿಸಿದ ಶುಲ್ಕವನ್ನು ಆನ್ಲೈನ್ ಮೂಲಕವೇ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಬಳಸಿ) ಪಾವತಿಸಿ.
ಹಂತ 6: ಶುಲ್ಕ ಪಾವತಿ ಯಶಸ್ವಿಯಾದ ಬಳಿಕ, ಅರ್ಜಿ ಸಲ್ಲಿಕೆಯ ರಶೀದಿ ಜನರೇಟ್ ಆಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಮುಂದೇನು ಮಾಡಬೇಕು?
ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ, ಮಂಡಳಿಯು ನಿಮ್ಮ ಉತ್ತರ ಪತ್ರಿಕೆಯ ಪಿಡಿಎಫ್ (PDF) ಪ್ರತಿಯನ್ನು ಅದೇ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತದೆ. ನೀವು ಮರಳಿ ಲಾಗಿನ್ ಆಗಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಸ್ಕ್ಯಾನ್ ಪ್ರತಿಯನ್ನು ನಿಮ್ಮ ಕಾಲೇಜಿನ ಅಥವಾ ಪರಿಚಯವಿರುವ ಆಯಾ ವಿಷಯದ ನುರಿತ ಉಪನ್ಯಾಸಕರಿಗೆ ತೋರಿಸಿ ಒಮ್ಮೆ ಕೂಲಂಕಷವಾಗಿ ಪರಿಶೀಲಿಸಿಕೊಳ್ಳಿ. ಅವರು ಅಂಕಗಳು ಹೆಚ್ಚಾಗುವ ಸ್ಪಷ್ಟ ಭರವಸೆ ನೀಡಿದರೆ ಮಾತ್ರ ಮುಂದಿನ ಹಂತವಾದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ. ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಹಣ ಮತ್ತು ಸಮಯ ಎರಡೂ ಉಳಿಯುತ್ತದೆ.












Click it and Unblock the Notifications