30 ಕೋಟಿಯಲ್ಲಿ ಮೋಡ ಬಿತ್ತನೆ; ನೀರಾವರಿಗೆ ಬಜೆಟಿನಲ್ಲಿ ಕೋಟಿ ಕೋಟಿ ಅನುದಾನ
ಬಹುನಿರೀಕ್ಷಿತ ಎತ್ತಿನ ಹೊಳೆ ಯೋಜನೆಯನ್ನು ಈ ವರ್ಷ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಜೆಟಿನಲ್ಲಿ ಘೋಷಣೆ ಮಾಡಿದ ನೀರಾವರಿ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಮಾರ್ಚ್ 15: ಸಿದ್ದರಾಮಯ್ಯ ತಮ್ಮ 2017-18 ನೇ ಸಾಲಿನಲ್ಲಿ ನೀರಾವರಿಗೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಬರಪೀಡಿತ ಪ್ರದೇಶಗಳಲ್ಲಿ 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಬಜೆಟಿನ ಹೈಲೈಟ್ಸ್ ಗಳಲ್ಲಿ ಒಂದು. ಇನ್ನು 6,000 ಕೋಟಿ ವೆಚ್ಚದಲ್ಲಿ ಈಗಿರುವ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಜತೆಗೆ 3,000 ಕೋಟಿ ವೆಚ್ಚದ ಹೊಸ ಯೋಜನೆಗಳನ್ನೂ ಜಾರಿಗೊಳಿಸಲಾಗುವುದು ಎಂದು ಬಜೆಟಿನಲ್ಲಿ ಪ್ರಕಟಿಸಿದ್ದಾರೆ. [ಸಹಾಯಧನ, ನಿವೇಶನ, ಬಂದರು ಅಭಿವೃದ್ಧಿ.. ಮೀನುಗಾರರಿಗೆ ಬಂಪರ್ ಬಜೆಟ್]
ಬಹುನಿರೀಕ್ಷಿತ ಎತ್ತಿನ ಹೊಳೆ ಯೋಜನೆಯನ್ನು ಈ ವರ್ಷ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬಜೆಟಿನಲ್ಲಿ ಘೋಷಣೆ ಮಾಡಿದ ನೀರಾವರಿ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ. [ಮಾಂಸದಂಗಡಿಗೆ ಸಹಾಯಧನ, ಕುತೂಹಲ ಹುಟ್ಟಿಸಿದ ಸಿದ್ದರಾಮಯ್ಯ ನಡೆ]
ಏತ ನೀರಾವರಿ ಯೋಜನೆಗಳು
2017-18ನೇ ಸಾಲಿನಲ್ಲಿ 6,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹಲವು ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ನಾರಾಯಣಪುರ ಎಡದಂಡೆ ಕಾಲುವೆ ಜಾಲದಲ್ಲಿ SCADA Based Automation ಅನುಷ್ಠಾನ. ಕೆಂಪವಾಡ (ಬಸವೇಶ್ವರ), ಹಗರಿಬೊಮ್ಮನಹಳ್ಳಿ, ಸಾಸ್ವೆಹಳ್ಳಿ, ಮದ್ದೂರು ತಾಲ್ಲೂಕಿನ 6, ಮುದ್ದೇಬಿಹಾಳ ಪೀರಾಪುರ-ಬೂದಿಹಾಳ್, ಇಂಡಿ ತಾಲ್ಲೂಕಿನ ಚಡಚಣ, ನಂದವಾಡಗಿ, ಕೊಪ್ಪಳ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆ ಸೇರಿ ಪ್ರಸಕ್ತ ಸಾಲಿನಲ್ಲಿ 20,000 ಹೆಕ್ಟೇರ್ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಪದ್ದತಿ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ.
ಇನ್ನು ಕೆರೆ ತುಂಬಿಸುವ ಯೋಜನೆಗಳು
ಪಿರಿಯಾಪಟ್ಟಣದ ಮುತ್ತಿನಮುಳಿಸೋಗೆ , ಕನಕಪುರ ತಾಲ್ಲೂಕಿನ12 ಕೆರೆಗಳು, ಮದ್ದೂರಿನ16, ಹೊಳೆನರಸೀಪುರದ 22, ನಂಜನಗೂಡಿನ 25, ಗುರುಮಿಠಕಲ್, ಯರಗೋಳ ಮತ್ತು ಇತರೆ 5 ಕೆರೆಗಳು, ಯಾದಗಿರಿಯ 35, ಹಾವೇರಿ ಜಿಲ್ಲೆಯ ಹಲವು ಕೆರೆಗಳು, ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಇಟಗಿ ಗ್ರಾಮದ ಕೆರೆಗಳು, ಹರಪನಹಳ್ಳಿ ತಾಲ್ಲೂಕಿನ 60 ಕೆರೆಗಳು, ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಕುಡಚಿ ಕೆರೆಗಳು, ಧಾರವಾಡದ ತಡಕೋಡ, ಬೋಕಾಪುರ, ಗರಗ, ಹಳೇಟೆಗೂರ, ಬೊಗೂರ ಮತ್ತು ನೀರಲಕಟ್ಟಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಎತ್ತಿನಹೊಳೆ ಪೂರ್ಣ
ಎತ್ತಿನ ಹೊಳೆ ಯೋಜನೆಯಡಿ ಈಗಾಗಲೇ ಕೈಗೆತ್ತಿಕೊಂಡಿರುವ lift componentಅನ್ನು ಪೂರ್ಣಗೊಳಿಸಿ ನೀರನ್ನು ಎತ್ತಲು ಕ್ರಮ. ಬೈರಗೊಂಡ್ಲು ಜಲಾಶಯ ನಿರ್ಮಾಣ ಹಾಗೂ ಕಾಲುವೆ ಕಾಮಗಾರಿಗಳ ಪ್ರಾರಂಭ. 68, 264 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ, 35,000 ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ, 28,000 ಹೆ. ಪ್ರದೇಶಕ್ಕೆ ಬಸಿಗಾಲುವೆ ಮತ್ತು 12,500 ಹೆಕ್ಟೇರ್ ಪ್ರದೇಶದ ಸವಳು-ಜವಳು ಭೂಮಿ ಅಭಿವೃದ್ಧಿ ಕೈಗೊಳ್ಳುವ ಗುರಿಯನ್ನು 2017-18ರಲ್ಲಿ ಹಾಕಿಕೊಳ್ಳಲಾಗಿದೆ.
ಹೊಸ ಯೋಜನೆಗಳು
ಅಂದಾಜು ಮೊತ್ತ 3,000 ಕೋಟಿ ರೂ. ಗಳಲ್ಲಿ ಕೈಗೊಳ್ಳಲು ಹಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯೋಚಿಸಲಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಏತ ನೀರಾವರಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಯಳ್ಳಿಗುತ್ತಿ ಗ್ರಾಮಕ್ಕೆ ನೀರು ಒದಗಿಸುವುದು, ಯಾದಗಿರ, ಚೋಳದಹೆಡಗಿ-ಗೂಡುರ, ಘತ್ತರಗಾ ಹಾಗೂ ಕಲ್ಲೂರು-ಬಿ ಬ್ಯಾರೇಜುಗಳಿಗೆ ಆಧುನಿಕ ಗೇಟ್ಗಳ ಅಳವಡಿಕೆ, ಆಲಮಟ್ಟಿ ಎಡದಂಡೆ ಕಾಲುವೆ ಆಧುನೀಕರಣ, ಬಸವಕಲ್ಯಾಣ ತಾಲ್ಲೂಕಿನ ಕೊಂಗಳಿ ಬ್ಯಾರೇಜಿನಿಂದ ಚುಲ್ಕಿನಾಲಾ ಜಲಾಶಯ ಮತ್ತು ಕೆರೆಗಳನ್ನು ತುಂಬಿಸುವ ಯೋಜನೆ, ಕಾರಂಜಾ ಜಲಾಶಯದ ಒಳಹರಿವಿನ ಕೊರತೆಯನ್ನು ಸರಿದೂಗಿಸಲು ಕ್ರಮ, ಕಲಬುರಗಿ ಜಿಲ್ಲೆಯ ಗಂಡೋರಿನಾಲ ಮತ್ತು ಮುಲ್ಲಾಮಾರಿ ಮೇಲ್ದಂಡೆ ಯೋಜನೆಗಳ ಆಧುನೀಕರಣ, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ 10ಗ್ರಾಮಗಳ 17 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು, ಹನಗೋಡು ಸರಣಿ ನಾಲೆಗಳ ಆಧುನೀಕರಣದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಮೋಡ ಬಿತ್ತನೆ
ತೀವ್ರ ಬರಗಾಲವನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ 30 ಕೋಟಿಯನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಭೀಮಾ ನದಿಯಿಂದ ಹೆಚ್ಚುವರಿ ನೀರನ್ನು ಅಮ ಜಲಾಶಯಕ್ಕೆ ತುಂಬಿಸುವ ಯೋಜನೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರ ಅಣೆಕಟ್ಟಿನ ಪುನರ್ ನಿರ್ಮಾಣ. ಕಾವೇರಿ ಕೊಳ್ಳದಡಿಯಲ್ಲಿ 509.55 ಕೋಟಿ ವೆಚ್ಚದಲ್ಲಿ 374 ಕಿ.ಮೀ. ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಸರಕಾರ ಕೈಗೆತ್ತಿಕೊಳ್ಳಲಿದೆ.
ಕೆರೆ ಸಂಜೀವಿನ ಯೋಜನೆ
ಕೆರೆಗಳ ಹೂಳೆತ್ತಲು 'ಕೆರೆ ಸಂಜೀವಿನಿ ಯೋಜನೆ'ಗೆ 100 ಕೋಟಿ ಅನುದಾನ, ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 100 ಕೋಟಿ ರೂ. ಗಳನ್ನು ಸಿದ್ದರಾಮಯ್ಯ ಬಜೆಟಿನಲ್ಲಿ ಘೋಷಣೆ ಮಾಡಿದ್ದಾರೆ. ಅಂತರ್ಜಲ ತೀವ್ರವಾಗಿ ಕುಸಿದಿರುವ ಜಿಲ್ಲೆಗಳಾದ ಬೀದರ್, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಹಾಸನಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ಮಾಣ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಅಭಿವೃದ್ಧಿಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.