ಡೆಂಗ್ಯೂ ಜ್ವರ ಹೆಚ್ಚಾಗಲು ರಬ್ಬರ್ ಬೆಳೆಗಾರರು ಕಾರಣ?
ಉಡುಪಿ, ಜೂನ್ 13 : ಕಾರ್ಕಳ ತಾಲೂಕಿನಲ್ಲಿ ಡೆಂಗ್ಯೂ ಜ್ವರ ಉಲ್ಬಣಗೊಂಡಿದೆ. ರಬ್ಬರ್ ಬೆಳೆಗಾರರು ತೋರಿದ ನಿರಾಸಕ್ತಿಯೇ ಜ್ವರ ಉಲ್ಬಣಗೊಳ್ಳಲು ಕಾರಣವಾಯಿತೇ? ಎಂಬ ಸಂಶಯ ಮೂಡಿದೆ.
ಬೇಸಿಗೆಯಲ್ಲಿ ಅಡಕೆ ಹಾಳೆಯಲ್ಲಿ ಸಂಗ್ರಹವಾದ ನೀರಿನಲ್ಲಿ ಡೆಂಗ್ಯೂ ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದರೆ, ಈ ಬಾರಿ ಮಳೆಗಾಲ ಸಮೀಪಿಸುತ್ತಿದ್ದಂತೆ ರಬ್ಬರ್ ತೋಟಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ರಬ್ಬರ್ ಬೆಳೆಯ ಮೇಲಿನ ನಿರಾಸಕ್ತಿಯೇ ರೋಗವನ್ನು ಪರೋಕ್ಷವಾಗಿ ಆಹ್ವಾನಿಸಿದೆ. [ಭಾರತದ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆ ಯಾವಾಗ ಬರುತ್ತದೆ?]

ಪಶ್ಚಿಮ ಘಟ್ಟದ ತಪ್ಪಲಿನ ಮಾಳ ಮತ್ತು ನಲ್ಲೂರು ಮುಂತಾದ ಗ್ರಾಮಗಳಲ್ಲಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. 21 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 69 ಜನರಿಗೆ ಸೋಂಕು ಹಬ್ಬಿರುವ ಸಾಧ್ಯತೆ ಗಳಿವೆ. [ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]
ಮಾಳ ಗ್ರಾಮದಲ್ಲಿ ಹೆಚ್ಚಾಗಿ ರಬ್ಬರ್ ಬೆಳೆಯಲಾಗುತ್ತದೆ. ಕೇರಳ ಭಾಗದಿಂದ ಬಂದ ಜನರು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಮಾಳದಲ್ಲಿ ರಬ್ಬರ್ ಬೆಳೆಯುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಕೃಷಿ ನಡೆಸಿಕೊಂಡು ಬಂದಿರುವ ಅವರಿಗೆ ರಬ್ಬರ್ ಧಾರಣೆ ಇಳಿಮುಖವಾಗಿದ್ದರಿಂದ ಆಸಕ್ತಿ ಕುಗ್ಗಿದೆ.
ಆದ್ದರಿಂದ, ಬೆಳೆಯಲ್ಲಿ ಕಾಲಕಾಲಕ್ಕೆ ಆಗಬೇಕಾದ ಕೃಷಿ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ. ಜತೆಗೆ ಸ್ಥಳೀಯ ರಬ್ಬರ್ ಬೆಳೆಗಾರರು ರಬ್ಬರ್ ತೋಟದತ್ತ ಮುಖ ಮಾಡುತ್ತಿಲ್ಲ. ಕಾರ್ಕಳ ತಾಲೂಕಿನ ರಬ್ಬರ್ ಬೆಳೆಯುವ ಅನೇಕ ಗ್ರಾಮಗಳಲ್ಲಿ ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ರಬ್ಬರ್ ತೋಟದಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದೆ ಎಂಬುದಕ್ಕೆ ಪುಷ್ಠಿ ನೀಡಿವೆ.
ರೋಗಾಣು ಉತ್ಪತ್ತಿ ಹೇಗೆ? : ರಬ್ಬರ್ ಮರದಿಂದ ಹಾಲಿನ ಸಂಗ್ರಹಕ್ಕೆ ಮರದ ಬುಡದಲ್ಲಿ ಕಸಿ ಮಾಡಿ, ಪಾತ್ರೆಯಂತಹ ವಸ್ತುವನ್ನು ಜೋಡಿಸುತ್ತಾರೆ. ಅದರಲ್ಲಿ ದಿನನಿತ್ಯವಾದ ಹಾಲನ್ನು ಮುಂಜಾನೆ ಟ್ಯಾಪಿಂಗ್ ವಿಧಾನದ ಮೂಲಕ ಮನೆಗೆ ಕೊಂಡೊಯ್ಯುತ್ತಾರೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಮರದ ಬುಡಕ್ಕೆ ಜೋಡಿಸಿದ ಪಾತ್ರೆಯನ್ನು ಕೆಳಮುಖವಾಗಿಟ್ಟು, ಬಳಿಕ ಪ್ಲಾಸ್ಟಿಕ್ ಕಟ್ಟಿ ಮರದೊಳಗೆ ನೀರು ಹೋಗದಂತೆ ಮಾಡುತ್ತಾರೆ. ಆದರೆ, ಈ ಬಾರಿ ರಬ್ಬರ್ ಬೆಳೆಗಾರರು ಮಳೆಗಾಲ ಆರಂಭವಾಗಿ ಹಲವು ದಿನಗಳು ಕಳೆದರೂ, ತಮ್ಮ ಕಾರ್ಯವನ್ನು ಮರೆತಿದ್ದಾರೆ.
ಪರಿಣಾಮ ಆ ಪಾತ್ರೆಯಲ್ಲಿ ನೀರು ಸಂಗ್ರಹವಾಗಿ ಸಾವಿರಾರು ಸಂಖ್ಯೆಯ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಜನರು ಜ್ವರದಿಂದ ನರಳುವಂತಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.












Click it and Unblock the Notifications