ರೈಲ್ವೆ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ: ಸಚಿವರ ಆದೇಶಕ್ಕಿಲ್ಲ ಕಿಮ್ಮತ್ತು, ಕರವೇ ಪ್ರತಿಭಟನಾ ಎಚ್ಚರಿಕೆ
ಬೆಂಗಳೂರು: ಕರ್ನಾಟಕದಲ್ಲಿ ಅದರಲ್ಲೂ ಬಹುಭಾಷಿಗರು ಇರುವ ಬೆಂಗಳೂರಿನಲ್ಲಿ ಕನ್ನಡ ಅಭ್ಯರ್ಥಿಗಳು ರೈಲ್ವೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಕನ್ನಡದಲ್ಲಿ ಪರೀಕ್ಷೆಗೆ ರಾಜ್ಯ ರೈಲ್ವೆ ಸಚಿವರು ಆದೇಶಿಸಿದ್ದರು ಅದಕ್ಕೆ ಬೆಲೆ ಇಲ್ಲದಂತಾಗಿದೆ. ಹಿಂದಿ ಹೇರಿಕೆ ವಿರುದ್ಧ ಮಾತನಾಡಿದ ರಾಜ್ಯ ನಾಯಕರು ಸಹ ಈ ಬಗ್ಗೆ ಧ್ವನಿ ಎತ್ತಬೇಕು. ಇಲ್ಲವಾದರೆ ಪರೀಕ್ಷಾ ಕೇಂದ್ರಗಳಿಗೆ ನುಗ್ಗಿ ಪ್ರಶ್ನೆ ಪತ್ರಿಕೆ ಹರಿದು ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಪ್ರತಿಭಟನಾ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಬಡ್ತಿ ಪರೀಕ್ಷೆಗಳಿಗೆ ಡಿಸೆಂಬರ್ 11ರಂದು ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಲಾಗಿದೆ. ಮೈಸೂರು, ಹುಬ್ಬಳ್ಳಿ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಕನ್ನಡಿಗರಿಗೆ ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಇದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪರೀಕ್ಷೆಗೆ ಅವಕಾಶ ನೀಡಿದೆ. ಆದರೆ ಕನ್ನಡಕ್ಕೆ ಕೋಕ್ ನೀಡಲಾಗಿದ್ದು, ಇದನ್ನು ಕರವೇ ಸದಸ್ಯರು ಸೇರಿದಂತೆ ಕನ್ನಡಿಗರು ವಿರೋಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕರವೇ ಪ್ರವೀಣ್ ಶೆಟ್ಟಿ ಅವರು, ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಇರುವ ಜಾಗ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಕಿತ್ತುಕೊಳ್ಳಲಾಗಿದೆ. ಈ ನಿಯಮ ಸರಿಯಲ್ಲ. ಖುದ್ದು ವಿ.ಸೋಮಣ್ಣ ಅವರೇ ಆದೇಶ ಮಾಡಿದ್ದರು ಅದನ್ನು ನೈಋತ್ಯ ರೈಲ್ವೆ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿಯು ನಾಯಕರನ್ನು ಎಚ್ಚರಿಸುತ್ತೇವೆ
ಈ ಹಿಂದೆಯು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರವೇ ಅವಕಾಶ ಇತ್ತು. ಆಗ ಕರೆವೇ ಕಾರ್ಯಕರ್ತರು ನಗರದ ಕಮಲಾಬಾಯಿ ಶಾಲೆಯಲ್ಲಿ ಪರೀಕ್ಷೆ ನಡೆಯುವ ವೇಳೆ ಪ್ರಶ್ನೆ ಪತ್ರಿಕೆ ಹರಿದು ಬಿಸಾಡಿದ್ದೆವು. ಈ ಅನ್ಯಾಯದ ವಿರುದ್ಧ ಧ್ವನಿಎತ್ತಿ ಪ್ರತಿಭಟಿಸಿದ್ದೆವು. ಆಗ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಡಕಾಯಿತಿ ಪ್ರಕರಣ ಸೇರಿ ವಿವಿಧ ಕೇಸ್ ದಾಖಲಿಸಲಾಯಿತು. 12 ದಿನ ನಮ್ಮನ್ನು ಜೈಲಿಗೆ ಅಟ್ಟಲಾಯಿತು. ಅಂದು ಸಹ ರಾಜ್ಯದ ಸಂಸದರು, ಶಾಸಕರನ್ನು ಎಚ್ಚರಿಸಿದ್ದೆವು. ಈಗಲೂ ಅದೇ ಆಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕನ್ನಡಿಗರೇ ಆದ ಸಚಿವ ವಿ.ಸೋಮಣ್ಣ ಅವರು ಕನ್ನಡದಲ್ಲಿ ಪರೀಕ್ಷೆ ನಡೆಸುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಹೀಗಿದ್ದರು ಬೆಂಗಳೂರಿನಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ರೈಲ್ವೆ ಪರೀಕ್ಷೆಯನ್ನು ಇಲ್ಲಿ ಕನ್ನಡದಲ್ಲಿ ನಡೆಸಬೇಕು. ಇಲ್ಲವಾದರೆ ಕರೆವೇ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯಬೇಕಿರುವ ಸದರಿ ಪರೀಕ್ಷೆಗಳ ಕೊಠಡಿಗೆ ನುಗ್ಗಿ ತಡೆಯುತ್ತೇವೆ. ರಸ್ತೆಗಿಳಿದು ಪ್ರತಿಭಟಿಸುತ್ತೇವೆ. ಹಿಂದಿ ಹೇರಿಕೆ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
2019ರ ನಿಯಮ ಉಲ್ಲಂಘನೆ
ರೈಲ್ವೆ ಮಂಡಳಿಯು 2019ರಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಗ್ರೂಪ್ ಸಿ ನೌಕರರನ್ನು ಮುಂಬಡ್ತಿಗೆ ಆಯ್ಕೆ ಮಾಡುವಾಗ ಪ್ರಾದೇಶಿಕ (ರಾಜ್ಯದ ಅಧಿಕೃತ ಭಾಷೆ) ಕನ್ನಡದಲ್ಲಿಯೇ ನಡೆಸುವಂತೆ ಸೂಚನೆ ನೀಡಿದೆ. ಆದರೆ ನೈಋತ್ಯ ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೆ ಈ ನಿಯಮ ಉಲ್ಲಂಘಿಸುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಭಾರಿಯು ಅದು ಪುನರಾವರ್ತನೆಗೊಂಡಿದ್ದು ನಾಡಿನ ಜನರು ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications