ಗೆದ್ದಲು ಹಿಡಿಯುತ್ತಿರುವ 'ಕಾಂತರಾಜು ವರದಿ' ಶೀಘ್ರ ಮಂಡನೆಗೆ ಆಗ್ರಹ
ಬೆಂಗಳೂರು, ಆಗಸ್ಟ್ 01: 'ಕಾಂತರಾಜು ಆಯೋಗ'ದ ವರದಿಯು ರಾಜ್ಯದ ಪ್ರತಿಯೊಂದು ಜಾತಿ, ಉಪಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಜನರಿಗೆ ತಿಳಿಸುತ್ತದೆ ಎಂಬ ನಂಬಿಕೆ ಮೂಡಿಸಿತ್ತು. ಈ ವರದಿ ಇನ್ನೂ ಮಂಡನೆಯಾಗದಿರುವುದು ರಾಜ್ಯದ ಬೊಕ್ಕಸಕ್ಕೆ ಆದ ನಷ್ಟ ಮಾತ್ರವಲ್ಲದೇ, ಹಿಂದುಳಿದ ಜಾತಿಯ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಬಳಿಕ ಮಾತನಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಕಾಂತರಾಜು ಆಯೋಗ ವರದಿಯನ್ನು ಶೀಘ್ರವೇ ಮಂಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಸರ್ಕಾರವು ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಜಾತಿಗಳು ಮತ್ತು ಸಮುದಾಯಗಳ ಉನ್ನತಿಗಾಗಿ ಅನೇಕ ಆಯೋಗಗಳನ್ನು ರಚಿಸಿದೆ. ಈ ಹಿಂದೆ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ರಚಿಸಿದ ಆಯೋಗವು 2015 ರಲ್ಲಿ ನಡೆಸಿದ ಸಮೀಕ್ಷೆಯ ವರದಿ ಇನ್ನೂ ಪ್ರಕಟಗೊಳ್ಳದಿರುವುದು ಅಸಮಂಜಸ ಎಂದು ಅವರು ದೂರಿದರು.
ವರದಿ ಬಗ್ಗೆ ಆಯೋಗ ಹೀಗೆ ಹೇಳಿದೆ
ಪ್ರತಿ ಜಾತಿ, ಉಪಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮೇಲೆ ಈ ವರದಿ ಬೆಳಕು ಚೆಲ್ಲಿತ್ತು. ಆದರೆ ಈವರೆಗೆ ಮಂಡನೆ ಆಗಿಲ್ಲ. ಶೈಕ್ಷಣಿಕ ಸವಲತ್ತುಗಳು ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಿತಿಗೆ ಹೋಲಿಕೆ ಮಾಡುವಂತಿರಬೇಕು ಎಂದು ಕೆ.ಸಿ.ವಸಂತ್ಕುಮಾರ್ ಪ್ರಕರಣದಲ್ಲಿ ಮಾನ್ಯ ಸುಪ್ರೀಂಕೋರ್ಟ್ ತಿಳಿಸಿದೆ.

ಅದಷ್ಟೇ ಅಲ್ಲದೇ ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಕೈಗೊಳ್ಳುವ ಸಮೀಕ್ಷೆಗೆ ಇಡೀ ರಾಜ್ಯದ ಜನಸಂಖ್ಯೆಯನ್ನು ಒಳಪಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ನಿಟ್ಟಿನಲ್ಲಿ ಮಾನ್ಯ ಸರ್ವೊಚ್ಚ ನ್ಯಾಯಾಲಯದ ನಿಯಮ ಪಾಲನೆ ಯಾಗದಿರುವುದನ್ನು ಆಯೋಗದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ರಾಜಕೀಯ ಹಿತಾಸಕ್ತಿಯಿಂದ ಮಂಡನೆ ಆಗಿಲ್ಲ
2015ರಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. 2018 ರಲ್ಲಿ ರಚನೆಯಾದ ಮೈತ್ರಿ ಸರ್ಕಾರ ಹಾಗೂ ನಂತರದ ಬಿಜೆಪಿ ಸರ್ಕಾರದ ಅವದಿಯಲ್ಲಿಯೂ ರಾಜಕೀಯ ಹಿತಾಸಕ್ತಿಯಿಂದ ವರದಿ ಮಂಡನೆ ಆಗಿಲ್ಲ. ಇದು ಶ್ರಮಿಕರ, ಹಿಂದುಳಿದ ವರ್ಗದವರ ವಿರುದ್ಧದ ಧೋರಣೆ ಆಗಿದೆ ಎಂದು ಅವರು ವಿವರಿಸಿದರು.
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯಲ್ಲಿ ವರದಿ ಮಂಡನೆ ಮತ್ತು ಅನುಷ್ಠಾನವನ್ನು ಶೀಘ್ರವೇ ಮಾಡುವುದಾಗಿ ಪ್ರಸ್ತಾಪಿಸಿದ್ದಾರೆ. ಆದ ಕಾರಣ, ಈ ವಿಚಾರದಲ್ಲಿ ಯಾವುದೇ ರೀತಿಯ ಕಾರಣಗಳನ್ನು ನೀಡದೇ ರಾಜ್ಯದ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ವರದಿ ಮಂಡಿಸುವ ಎಲ್ಲಾ ಪ್ರಕ್ರಿಯೆಗಳು ಮುಗಿಯುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಎಎಪಿ ಆಯೋಗದ ಅಧ್ಯಕ್ಷರ ಬೇಟಿ ವೇಳೆ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications