"ಕನ್ನಡ ಭುವನೇಶ್ವರಿ" ಒಪ್ಪದ ಬಾನು ಮುಷ್ತಾಕ್; ದಸರಾ ಉದ್ಘಾಟಿಸಬೇಕೇ ಸೋಷಿಯಲ್ ಮೀಡಿಯಾ ಚರ್ಚೆ! ಇಲ್ಲಿದೆ ವೈರಲ್ ವಿಡಿಯೋ
ಮೈಸೂರು ದಸರಾ ಉದ್ಘಾಟನೆ ವಿಚಾರವು ಇದೀಗ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಬಿಜೆಪಿಯ ಕೆಲವರು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಅವರ ಧರ್ಮದ ಕಾರಣಕ್ಕೆ ಅವರು ದಸರಾ ಉದ್ಘಾಟನೆ ಮಾಡಬಾರದು ಎಂದೂ ಕೆಲವರು ಹೇಳುತ್ತಿದ್ದಾರೆ.
ಇದರ ನಡುವೆ "ಕನ್ನಡ ಭುವನೇಶ್ವರಿ" ಬಗ್ಗೆ ಬಾನು ಮುಷ್ತಾಕ್ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಬರಹಗಾರ ಸುನೀಲ್ ಜೆ ಅವರು, ಬಾನು ಮುಷ್ತಾಕ್ ಅವರು ಧಾರ್ಮಿಕ ಹಬ್ಬವಾದ ದಸರೆಯನ್ನು ನಾಡಹಬ್ಬ ಅಂತ ಒಪ್ಪಿಕೊಂಡು ಅದರ ಉದ್ಘಾಟನೆ ಮಾಡಲು ಒಪ್ಪಿಕೊಳ್ತಾರೆ. ಆದರೆ ನಾಡಗೀತೆ ಅಥವಾ ನಾಡಬಾವುಟದಲ್ಲಿ ಧಾರ್ಮಿಕತೆಯ ಅಂಶ ಸುಳಿದರೆ ಅದು ಮುಸ್ಲಿಮರನ್ನು ಕನ್ನಡದಿಂದ ದೂರವಿಡುವ ಸಂಚು, ಕನ್ನಡದ ಮೇಲಿನ ದೌರ್ಜನ್ಯ ಅಂತಾರೆ. ಏನಿದು ದ್ವಂದ್ವ? ಎಂದು ಪ್ರಶ್ನೆ ಮಾಡಿದ್ದಾರೆ.

ನಾಡನ್ನು ಸಂಘಟಿಸಲು ಹಲವಾರು ಸಾಧನಗಳಿರುತ್ತವೆ. ಇವುಗಳನ್ನು ರೂಪಿಸುವಾಗ ಕೆಲವೊಮ್ಮೆ ಆ ನುಡಿಯನ್ನಾಡುವ ಬಹುಸಂಖ್ಯಾತರ ಬದುಕಿನ ಅಂಶಗಳು ಸೇರುವುದು ಸಹಜ. ಅಷ್ಟಕ್ಕೂ ಇಲ್ಲಿ ಕನ್ನಡವನ್ನು ಭುವನೇಶ್ವರಿಯಂತೆ ನೋಡಿ ಎಂದೋ, ಕನ್ನಡ ಬಾವುಟವನ್ನು ಅರಿಶಿಣ ಕುಂಕುಮವೆಂದೇ ನೋಡಿ ಎಂದು ಮುಸ್ಲಿಮರಿಗೆ ಯಾವುದೇ ಒತ್ತಾಯವಿಲ್ಲ. ಭುವನೇಶ್ವರಿ ಬೇಡವೆಂದರೆ ಕನ್ನಡಮ್ಮ ಎಂದೇ ಕರೆಯಬಹುದು, ಕನ್ನಡ ಬಾವುಟದಲ್ಲಿರುವುದು ಹಳದಿ ಕೆಂಪು ಬಣ್ಣಗಳು ಎಂದಷ್ಟೇ ನೋಡಬಹುದು. ಇಲ್ಲಿ ಹೀಗೆಯೇ ನೋಡಬೇಕು ಎನ್ನುವ ಒತ್ತಾಯ ಯಾರ ಮೇಲಿದೆ?
ಕನ್ನಡ ಮಾತನಾಡುವ ಹಿಂದೂಗಳು ಬಾವುಟಕ್ಕೆ, ನಾಡಿಗೆ ತಮ್ಮ ಬದುಕಿನ ಒಂದಂಶವನ್ನು ಸೇರಿಸಿದ ಕೂಡಲೇ ನಮಗೆ ಕನ್ನಡವೇ ಬೇಡ ಎನ್ನುವುದು ತೀರಾ ಸಂಕುಚಿತ, ಮೂಲಭೂತವಾದಿ ಮನೋಭಾವ. ಕನ್ನಡಕ್ಕೆ ಬುಕರ್ ಖ್ಯಾತಿ ತಂದುಕೊಟ್ಟ ಓರ್ವ ಲೇಖಕಿ ಈ ರೀತಿ ಮಾತನಾಡಿದ್ದು ನನಗೇಕೋ ಸರಿ ಕಾಣುತ್ತಿಲ್ಲ.
ನಿಜ ಹೇಳಬೇಕೆಂದರೆ, ಬಹುತೇಕ ಕನ್ನಡಿಗರು ಹಿಂದೂಗಳೇ ಆಗಿರುವುದರಿಂದ ಭುವನೇಶ್ವರಿ, ಕನ್ನಡಾಂಬೆ, ಅರಿಶಿನ ಕುಂಕುಮದಂತಹ ಗುರುತುಗಳಿಂದ ಕನ್ನಡಿಗರ ಒಗ್ಗಟ್ಟಿಗೆ ಸಹಾಯವಾಗಿದೆಯೇ ಹೊರತು ನಷ್ಟವಂತೂ ಆಗಿಲ್ಲ. ಇವುಗಳನ್ನು ಬಿಟ್ಟು ಜಾತ್ಯತೀತತೆಯ ಬಾಲ ಹಿಡಿದರೇ ನಮಗೆ ನಷ್ಟ ಎಂದು ಹೇಳಿದ್ದಾರೆ.
ಇನ್ನು ಬರಹಗಾರ ಹಾಗೂ ಕವಿ ರಾಜೇಂದ್ರ ಪ್ರಸಾದ್ ಅವರು, ದಸರೆ ಕುರಿತು ಎರಡು ಅಂಶಗಳು ಎನ್ನುವ ಶೀರ್ಷಿಕೆಯೊಂದಿಗೆ ಬರಹವೊಂದನ್ನು ಹಂಚಿಕೊಂಡಿದ್ದಾರೆ.
1. ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು 2017ರಲ್ಲಿ ಮೈಸೂರು ದಸರಾವನ್ನು ಉದ್ಘಾಟಿಸಿದ್ದರು. 2025 ರ ದಸರಾ ಮಹೋತ್ಸವವನ್ನು ಹಿರಿಯ ಕತೆಗಾರ್ತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ.
ಇಲ್ಲಿ ವ್ಯಕ್ತಿ ಧರ್ಮ ನಗಣ್ಯ! ದಸರೆಯು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಸಮುದಾಯಗಳ ಸಾಂಸ್ಕೃತಿಕ ಮತ್ತು ಸಾಮರಸ್ಯದ ಬಹುದೊಡ್ಡ ಸಂಭ್ರಮವಾಗಿದೆ. ಅದನ್ನು ಕೋಮುವಾದಿ ನೆಲೆಗಟ್ಟಿನಲ್ಲಿ ನೋಡಲು ಬರುವುದಿಲ್ಲ.
ಕನ್ನಡ ಅಸ್ಮಿತೆ💛❤️ಯನ್ನು ಒಪ್ಪದ ಭಾನು ಮುಸ್ತಾಕ್ ಅವರಿಗೆ ನಾಡ ಹಬ್ಬ, ನಾಡ ದೇವಿ ದಸರಾ ಉದ್ಘಾಟನೆ ಮಾಡುವ ಯಾವ ನೈತಿಕತೆಯು ಇಲ್ಲ! pic.twitter.com/1ZyumI95PR
— ಕನ್ನಡಿಗ ದೇವರಾಜ್ (@sgowda79) August 25, 2025
2. ಪ್ರಜಾಪ್ರಭುತ್ವವಾದಿಯಾದ ನಾನು ದಸರೆಯಂತಹ ರಾಜಪ್ರಭುತ್ವದ ಸಂಭ್ರಮಗಳ ಆಚರಣೆಗಳಲ್ಲಿ ಒಲವು ತೋರುವುದಿಲ್ಲ. ನವರಾತ್ರಿ, ಸರಸ್ವತಿ ಪೂಜೆ, ಆಯುಧ ಪೂಜೆ, ಬನ್ನಿ ವಿತರಣೆಗಳು - ನಮ್ಮ ವೈಯಕ್ತಿಕ ಆಚರಣೆಗಳಾಗಬೇಕೆ ಹೊರತು ಸರ್ಕಾರಗಳದ್ದಲ್ಲ ಮತ್ತು ಅರಮನೆ, ದರ್ಬಾರು, ಸಿಂಹಾಸನಾವರೋಹಣ ಇತ್ಯಾದಿ ಆಚರಣೆಗಳು ಸಂವಿಧಾನದ ಮೂಲ ಆಶಯಕ್ಕೆ ತತ್ವಿರುದ್ದವಾದ ನೆಲೆಯವು. ಇವುಗಳನ್ನಂತು ನಾವು ಪೋಷಿಸಲೇಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications