ಸೆ.26ರಂದು ಕರ್ನಾಟಕ ಸಂಪೂರ್ಣ ಬಂದ್ : ವಾಟಾಳ್
ಬೆಂಗಳೂರು, ಸೆ. 05: ಕಬ್ಬುಬೆಳೆಗಾರರರು ಕರೆ ನೀಡಿರುವ ಸೆಪ್ಟೆಂಬರ್ 5ರ ಬಂದ್ ಬಗ್ಗೆ ನಮಗೆ ಪೂರ್ವ ಮಾಹಿತಿ, ತಯಾರಿ ಇಲ್ಲದ ಕಾರಣ ಬೆಂಬಲ ನೀಡಿಲ್ಲ, ಅದರೆ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸೆ. 26ರಲ್ಲಿ ಕರ್ನಾಟಕ ಸಂಪೂರ್ಣ ಬಂದ್ ಆಚರಿಸಲಿದೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಘೋಷಿಸಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆ ನಿವಾರಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ತೋರುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯದ ಕೆಲ ರೈತ ಸಂಘಟನೆಗಳು ಕರೆ ನೀಡಿರುವ ಸೆ.5ರ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.[ಅಪ್ಡೇಟ್ಸ್ ಇಲ್ಲಿದೆ ಓದಿ]
ಸೆ.15 ಹೆದ್ದಾರಿ ಬಂದ್: ನೇತ್ರಾವತಿ ನದಿ ತಿರುಗಿಸುವ ಯೋಜನೆ ವಿರುದ್ಧ ಉಪ್ಪಿ ನಂಗಡಿ ಸೇತುವೆ ಬಳಿ ಸೆ.15ರಂದು ಬೆಳಗ್ಗೆ 10ಕ್ಕೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆದ್ದಾರಿ ತಡೆ ಹಾಗೂ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಉಪ್ಪಿನಂಗಡಿ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಡಾ.ನಿರಂಜನ ರೈ ತಿಳಿಸಿದ್ದಾರೆ.[ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]
ಸೆ.26ರಂದು ಕರ್ನಾಟಕ ಬಂದ್: ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ, ಕಳಸಾ-ಬಂಡೂರಿ ನಾಲಾ ಕಾಮಗಾರಿ ಯೋಜನೆ ಸೇರಿದಂತೆ ಕುಡಿಯುವ ನೀರಿನ ಯೋಜನೆ ಶೀಘ್ರವೇ ಜಾರಿಗೊಳಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 26(ಶನಿವಾರ)ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಇದಕ್ಕೆ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.[ಕೇಳುವವರೇ ಗತಿಯಿಲ್ಲದ ಕಳಸಾ ಬಂಡೂರಿ!]

ಬೆಂಬಲ ನೀಡಿರುವ ಸಂಘಟನೆಗಳು
ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ವ.ಚ.ಚನ್ನೇಗೌಡ, ಟಿ.ತಿಮ್ಮೇಶ್, ಮಂಜುನಾಥ್ ದೇವ, ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ್ಯ ಷಣ್ಮುಗಪ್ಪ ಮತ್ತಿತರರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಲಿ
ಕಳಸಾ-ಬಂಡೂರಿ ನಾಲಾ ಕಾಮಗಾರಿ ಯೋಜನೆ ಗೋವಾ-ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಿಗೆ ಸಂಬಂಧಿಸಿದೆ. ಇಲ್ಲಿನ ಎಲ್ಲಾ ಪಕ್ಷಗಳ ಸಂಸದರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಒತ್ತಾಯಿಸಬೇಕು, ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ರಾಜೀನಾಮೆ ಕೊಡಲು ಮುಂದಾಗಬೇಕು ಆಗ ಪ್ರಧಾನಿ ಎಚ್ಚೆತ್ತುಕೊಳ್ಳುತ್ತಾರೆ. ಪ್ರಧಾನಿ ಅವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಬೇಗನೇ ಪರಿಹರಿಸಬೇಕು ಎಂದರು.

ಉತ್ತರ ಕರ್ನಾಟಕದ ಪರ ಇದ್ದೇವೆ
ಕನ್ನಡ ಪರ ಸಂಘಟನೆಗಳು ರಾಜಧಾನಿಗೆ ಮಾತ್ರ ಸೀಮಿತವಾಗಿವೆ. ಉತ್ತರ ಕರ್ನಾಟಕದ ಜನತೆಯ ಕಷ್ಟನಷ್ಟಕ್ಕೆ ಸ್ಪಂದಿಸುವುದಿಲ್ಲ ಎಂಬ ಕೂಗಿದೆ. ನಾವು ತಾರತಮ್ಯ ಮಾಡುವುದಿಲ್ಲ. ಅಖಂಡ ಕರ್ನಾಟಕದ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ನಾವು ಹೋರಾಡುತ್ತೇವೆ.
ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಆ ಭಾಗದ ಜನರು ಕಳೆದ 50 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಬಿಟ್ಟು ರಾಜಕಾರಣಿಗಳು ಮಲಪ್ರಭಾ ನದಿ ನೀರು ಹರಿಸಲು ಚಿಂತಿಸಬೇಕು ಎಂದರು.

ಸೆ.26ರ ಬಂದ್ಗೆ ಚಲನಚಿತ್ರರಂಗ ಬೆಂಬಲ
ಸೆ.26ರ ಬಂದ್ಗೆ ಚಲನಚಿತ್ರರಂಗ ಬೆಂಬಲ ನೀಡಲಿದೆ. ಈಗಾಗಲೇ ಕೆಲ ನಟ, ನಟಿಯರು ಹೋರಾಟದಲ್ಲಿ ಭಾಗಿಯಾಗಲು ಉತ್ಸುಕತೆ ತೋರಿದ್ದಾರೆ. ಕುಡಿಯುವ ನೀರಿನ ಯೋಜನೆ ಅಲ್ಲಿನ ಜನರ ಬದುಕಿನ ಪ್ರಶ್ನೆಯಾಗಿದೆ. ಅಲ್ಲಿನ ಜನ ಹಲವು ದಿನಗಳಿಂದ ಹೋರಾಡುತ್ತಿದ್ದಾರೆ.ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ನಾವು ಎಚ್ಚರ ಮೂಡಿಸಬೇಕಿದೆ. ಅದಕ್ಕಾಗಿ ಕರ್ನಾಟಕ ಬಂದ್ ಕರೆಕೊಟ್ಟಿದ್ದೇವೆ

ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ
ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕದ ಯಾವ ಭಾಗಕ್ಕೂ ತಾರತಮ್ಯವಾಗಬಾರದು. ಜನಪ್ರತಿನಿಧಿಗಳು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಬೇಕು. ಕೂಡಲೇ ಕುಡಿಯುವ ನೀರು ಒದಗಿಸುವ ಕೆಲಸ ಮಾಡಬೇಕು ಎಂದರು. ಆಗ್ರನಿಸಿದರು. ಕನ್ನಡ ಸಾಹಿತ್ಯ ಪರಿಷತ್ನ ಎಲ್ಲಾ ವಲಯಗಳಿಂದ ಕರ್ನಾಟಕ ಬಂದ್ಗೆ ಬೆಂಬಲ ನೀಡಲಾಗುವುದು ಎಂದುಟಿ.ತಿಮ್ಮೇಶ್ ಭರವಸೆ ನೀಡಿದ್ದಾರೆ.

ಏನಿದು ಕಳಸಾ ಬಂಡೂರಿ ನಾಲಾ ಯೋಜನೆ?
ಉತ್ತರ ಕರ್ನಾಟಕದ ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಸಿ ನೀರಿನ ಬವಣೆ ತಪ್ಪಿಸಲು ಮಹದಾಯಿ ನದಿಯ ನೀರನ್ನು ಕಳಸಾ ಬಂಡೂರ ನಾಲೆಗಳ ಮೂಲಕ ಮಲಪ್ರಭ ನದಿಗೆ ಹರಿಸುವ ಕಾಮಗಾರಿಯನ್ನು ಕರ್ನಾಟಕ ಕೈಗೆತ್ತಿಕೊಂಡಿತ್ತು. ಅದರೆ, ಗೋವಾ ಸರ್ಕಾರ ಅಡ್ಡಗಾಲು ಹಾಕಿದೆ. ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ.ಇದರಲ್ಲಿ ಏಳೆಂಟು ಟಿಎಂಸಿ ನೀರು ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ನೀಡುವಂತೆ ಕೇಳಲಾಗಿದೆ.












Click it and Unblock the Notifications