ಬುಧವಾರ ಎಂಇಎಸ್ ಶವಯಾತ್ರೆ ವಾಟಾಳ್ ಘೋಷಣೆ!

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಂಭಾಜಿ ಪಾಟೀಲ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಪಾಟೀಲ್ ಅವರಿಗೆ ವಿಧಾನಸಭೆಯೊಳಗೆ ಪ್ರವೇಶಿಸಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಬುಧವಾರ ಬೆಂಗಳೂರಿನ ಪಾಟೀಲ್ ಶವಯಾತ್ರೆ ನಡೆಸುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕರವೇ ಖಂಡನೆ : ಸಂಭಾಜಿ ಪಾಟೀಲ್ ಪುಂಡಾಟಿಕೆಗೆ ಬೆಳಗಾವಿಯಲ್ಲೇ ಉತ್ತರ ನೀಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆ ಎಂಬ ದುರಹಂಕಾರದ ಮಾತುಗಳನ್ನಾಡಿದ ಶಾಸಕರ ವಿರುದ್ಧ ಸ್ಪೀಕರ್ ಸಂವಿಧಾನತ್ಮಾಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. (ಕರ್ನಾಟಕದ ಶವಯಾತ್ರೆ ಮಾಡುತ್ತೇನೆಂದ ಭಂಡ ಸಂಭಾಜಿ)
ಕಚೇರಿಗೆ ಮಸಿ : ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶಾಸಕರ ಭವನದಲ್ಲಿರುವ ಸಂಭಾಜಿ ಪಾಟೀಲ್ ಅವರ 327ನೇ ಕೊಠಡಿ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಗೆ ಬಾಗಿಲಿಗೆ ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯಲ್ಲೇ ಉತ್ತರ : ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಅವರಿಗೆ ಬೆಳಗಾವಿಯ ನೆಲದಲ್ಲೇ ಕನ್ನಡಿಗರ ಶಕ್ತಿ ಏನೆಂದು ತೋರಿಸುತ್ತೇವೆ. ಬೆಳಗಾವಿಯ ನೆಲದಲ್ಲೇ ಅವರಿಗೆ ಸರಿಯಾದ ಉತ್ತರ ನೀಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಯ ಪ್ರವೀಣ್ ಶೆಟ್ಟಿ ಘೋಷಿಸಿದ್ದಾರೆ. ಕನ್ನಡಿಗರನ್ನು ಕೆರಳಿಸುವಂತೆ ಹೇಳಿಕೆ ನೀಡುವ ನಿಮಗೆ ಸರಿಯಾದ ಉತ್ತರ ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದರು.
ಸೋಮವಾರ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಯೋಜಿಸಿದ್ದ ಮಹಾಮೇಳವ ಸಮ್ಮೇಳನದಲ್ಲಿ ಮಾತನಾಡಿದ ಶಾಸಕ ಸಂಭಾಜಿ ಪಾಟೀಲ್ "ಕರ್ನಾಟಕ ವಿಧಾನಸಭೆಯಲ್ಲಿ ನಾಲ್ಕು ಎಂಇಎಸ್ ಶಾಸಕರಿದ್ದರೆ, ಇಂದು ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆವು". ಮರಾಠರ ಶಕ್ತಿ ಏನೆಂದು ತೋರಿಸುತ್ತಿದ್ದೆವು ಎಂದು ಹೇಳಿಕೆ ನೀಡಿದ್ದರು. ಇದು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿದ್ದು, ಪಾಟೀಲ್ ಗೆ ತಕ್ಕ ಉತ್ತರ ನೀಡಲು ಸಜ್ಜಾಗುತ್ತಿದ್ದಾರೆ.












Click it and Unblock the Notifications